ನಾಳೆ ವಿಷ್ಣು ಸ್ಮಾರಕ ನಿರ್ಮಾಣಕ್ಕೆ ಚಾಲನೆ: ವಿಷ್ಣು ವಿಚಾರದಲ್ಲಿ 10 ವರ್ಷಗಳಿಂದಾದ ಬೆಳವಣಿಗೆಗಳೇನು ಗೊತ್ತೇ? ಡೀಟೇಲ್ಸ್
ತುತ್ತು ಅನ್ನ ತಿನ್ನೋಕೆ, ಬೊಗಸೆ ನೀರು ಕುಡಿಯೋಕೆ, ತುಂಡುಬಟ್ಟೆ ಸಾಕು ನನ್ನ ಮಾನ ಮುಚ್ಚೋಕೆ, ಅಂಗೈ ಅಗಲ ಜಾಗ ಸಾಕು ಹಾಯಾಗಿರೋಕೆ ಎಂದು ಹಾಡಿ ಜೀವನದ ಸೂಕ್ಷ್ಮತೆಯನ್ನು ಸಾರಿದ್ದ ಕನ್ನಡ ಚಿತ್ರರಂಗದ ಮೇರು ನಟ ವಿಷ್ಣುವರ್ಧನ್ ಅಭಿಮಾನಿಗಳನ್ನಗಲಿ ಹತ್ತು ವರ್ಷಗಳೇ ಕಳೆದಿವೆ. ಆದರೆ, ವಿಷ್ಣುವಿನ ಸ್ಮಾರಕಕ್ಕೆ ಅಂಗೈ ಅಗಲ ಜಾಗವೂ ಸಿಗದೆ ಇಲ್ಲಿಯವರೆಗೆ ಸ್ಮಾರಕ ನಿರ್ಮಾಣದ ಕಸನಾಗಿಯೇ ಉಳಿದಿತ್ತು. ಅಂತೂ ಮೈಸೂರಿನ ಹೊರ ವಲಯದಲ್ಲಿ ನಾಳೆ ಸ್ಮಾರಕ ನಿರ್ಮಾಣ ಆರಂಭವಾಗಲಿದೆ.
ಸರ್ಕಾರ, ಅಭಿಮಾನಿಗಳು ಮತ್ತು ಕುಟುಂಬದವರ ನಡುವಿನ ಅಸಮಾಧಾನ, ಅಸಹಕಾರಗಳಿಂದ ಒಬ್ಬ ಧೀಮಂತ ನಟ ದಿನನಿತ್ಯದ ಚರ್ಚೆಯ ವಿಷಯವಾಗಿ ಮತ್ತೆ ಮತ್ತೆ ಮುನ್ನೆಲೆಗೆ ಬರುತ್ತಲೇ ಇತ್ತು. ಈ ನಡುವೆ ವಿಷ್ಣು ಅವರ ಕುಚುಕು ಗೆಳೆಯ ಅಂಬರೀಶ್ ವರ್ಷಗಳ ಹಿಂದೆ ಇಹಲೋಕ ತ್ಯಜಿಸಿದ ಅಂಬರೀಶ್ ಸ್ಮಾರಕ ನಿರ್ಮಾಣದ ವಿಷಯ ಪ್ರಸ್ತಾಪವಾಗಿತ್ತು. ಆಗಲೂ ಸಹ ವಿಷ್ಣು ಸ್ಮಾರಕ ನಿರ್ಮಾಣದ ಚರ್ಚೆ ಮುನ್ನೆಲೆಗೆ ಬಂದಿತ್ತು.
ಬೆಂಗಳೂರಿನ ಅಭಿಮಾನ್ ಸ್ಟೂಡಿಯೋದಲ್ಲಿ 2009ರಲ್ಲಿ ವಿಷ್ಣು ಅಂತಿಮ ಸಂಸ್ಕಾರವನ್ನು ಮಾಡಲಾಗಿತ್ತು. ಅಭಿಮಾನ್ ಸ್ಟುಡಿಯೋ ನಿರ್ಮಾಣಕ್ಕಾಗಿ 20 ಎಕರೆ ಜಾಗವನ್ನು ಸರ್ಕಾರವೇ ಬಾಲಕೃಷ್ಣವರಿಗೆ ಮಂಜೂರು ಮಾಡಿತ್ತು. ಅದರಲ್ಲಿ 10 ಎಕರೆ ಜಾಗವನ್ನು ಬಾಲಕೃಷ್ಣರ ಮಗ ಮಾರಾಟ ಮಾಡಲು ಮುಂದಾಗಿದ್ದರು. ಹಾಗಾಗಿ ಅಭಿಮಾನ್ ಸ್ಟುಡಿಯೋ ಬಾಲಣ್ಣನ ಕುಟುಂಬದ ವ್ಯಾಜ್ಯವಾಗಿ ಹೈ ಕೋರ್ಟ್ ಮೆಟ್ಟಿಲೇರಿತ್ತು. ಆದರೂ ಅಭಿಮಾನ್ ಸ್ಟುಡಿಯೋದಲ್ಲೇ ಸಂಸ್ಕಾರ ಮಾಡಿದ್ದರಿಂದ ವಿಷ್ಣು ಸ್ಮಾರಕವನ್ನು ಅಲ್ಲಯೇ ಕಟ್ಟಲು ಸರ್ಕಾರ ಮುಂದಾಗಿತ್ತು. ವ್ಯಾಜ್ಯವಿದ್ದರಿಂದ ಹೈ ಕೋರ್ಟ್ ಸ್ಮಾರಕ ನಿರ್ಮಾಣಕ್ಕೆ ತಡೆ ನೀಡಿತ್ತು.
ಹೀಗಾಗಿ ವಿಷ್ಣು ಕುಟುಂಬ ಮೈಸೂರಿನಲ್ಲಿ ಸ್ಮಾರಕ ನಿರ್ಮಾಣ ಮಾಡುವಂತೆ ಕೋರಿಕೆ ಸಲ್ಲಿಸಿತ್ತು. ಅದರಂತೆ 2016 ಮೈಸೂರಿನಲ್ಲಿ 5 ಎಕರೆ ಜಾಗವನ್ನು ಸರ್ಕಾರ ಮಂಜೂರು ಮಾಡಿತ್ತು. ಆ ನಡುವೆ, ಅಂಬರೀಶ್ ಸಾವನ್ನಪ್ಪಿದ ನಂತರ, ಅಂಬರೀಶ್ ಸ್ಮಾರಕದ ಜೊತೆಗೆ ಕಂಠೀರವ ಸ್ಟುಡಿಯೋದಲ್ಲೇ ವಿಷ್ಣು ಸ್ಮಾರಕವನ್ನು ನಿರ್ಮಿಸುವ ನಿರ್ಧಾರವನ್ನು ಸರ್ಕಾರ ವ್ಯಕ್ತಪಡಿಸಿತ್ತು. ಇದಕ್ಕೆ ಅಭಿಮಾನಿಗಳು ಮತ್ತು ವಿಷ್ಣು ಕುಟುಂಬದಿಂದ ತೀವ್ರ ವಿರೋಧ ವ್ಯಕ್ತವಾದ ಮೇಲೆ ಸರ್ಕಾರ ಆ ವಿಚಾರದಲ್ಲಿ ತುಟಿ ಬಿಚ್ಚಲಿಲ್ಲ.
ಹೀಗೆ ಅವರ್ ಬಿಟ್ ಇವರ್ ಬಿಟ್ ಇನ್ಯಾರು ಎಂಬಂತೆ ಅಲ್ಲಿಂದ ಇಲ್ಲಿಗೆ, ಇಲ್ಲಿಂದ ಅಲ್ಲಿಗೆ ಓಡಾಡಿಸುತ್ತಾ ಸರ್ಕಾರ ಕಣ್ಣಾಮುಚ್ಚಾಲೆಯ ಆಟವಾಡುತ್ತಿರುವುದನ್ನು ನೋಡಿ ಬೇಸರಗೊಂಡ ಅಭಿಮಾನಿಯೊಬ್ಬ, ತಾನೆ ಸ್ಮಾರಕಕ್ಕೆ ಜಾಗ ಕೊಡುವುದಾಗಿ ಹೇಳಿ ಸರ್ಕಾರದ ಮೇಲಿನ ಆಕ್ರೋಶ ವ್ಯಕ್ತಪಡಿಸಿದ್ದ. ಇತ್ತ ಮೈಸೂರಿನಲ್ಲಿ ರೈತರು ತಮ್ಮ ಜಾಗವನ್ನು ಬಿಟ್ಟುಕೊಡಲು ನಿರಾಕರಿಸಿ, ಕೋರ್ಟ್ ಮೆಟ್ಟಿಲೇರಿದ್ದರು.
ಯಾವುದೇ ಅಭಿವೃದ್ಧಿ ಯೋಜನೆಗಳಿಗೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಬೇಕಾದರೆ ರೈತರ ಅನುಮತಿಯೊಂದಿಗೆ, ಆ ಜಾಗದ ಮಾರುಕಟ್ಟೆ ಬೆಲೆಗಿಂತ ನಾಲ್ಕು ಪಟ್ಟು ಹೆಚ್ಚು ಬೆಲೆಕೊಟ್ಟು, ಅದು ಕೃಷಿ ಭೂಮಿಯಾಗಿದ್ದಲ್ಲಿ ಬೇರೆಡೆ ಭೂಮಿಯನ್ನೂ ಕೊಟ್ಟು ಸ್ವಾಧೀನ ಪಡಿಸಿಕೊಳ್ಳಬೇಕು ಎಂದು ಕಾನೂನು ಹೇಳುತ್ತದೆ. ಆದರೆ ಆ ಜಾಗಕ್ಕೆ ಇದಾವುದೂ ಅಪ್ಲೈ ಆಗಿಲ್ಲ. ಕಡಿಮೆ ಬೆಲೆ ಕೊಟ್ಟು ಭೂಮಿಯನ್ನು ಸ್ವಾಧೀನಪಡಿಸಿಕೊಂಡಿದ್ದಾರೆ. ಹೆಚ್ಚಿನ ಕಾಂಪೆನ್ಸೇಷನ್ ಕೊಡಬೇಕು ಎಂದು ಆ ಭೂಮಿಯ ಮಾಲೀಕರಾದ ರೈತರು ಕೋರ್ಟ್ನಲ್ಲಿ ಅಫಿಡವಿಟ್ ಸಲ್ಲಿಸಿದ್ದರು. ಈ ಮಧ್ಯೆ ವಿಷ್ಣು ಅಳಿಯ ಅನಿರುದ್ ಮೈಸೂರಿನಲ್ಲಿ ದಿಢೀರನೆ ಭೂಮಿ ಪೂಜೆಗೆ ಮುಂದಾಗಿದ್ದರು. ಆ ಸಂದರ್ಭದಲ್ಲಿ ಮತ್ತಷ್ಟು ವಿವಾದ ಸೃಷ್ಟಿಸಿತ್ತು.
ಸದ್ಯ ವ್ಯಾಜ್ಯಗಳೆಲ್ಲಾ ಮುಗಿದು ವಿಷ್ಣು ಸ್ಮಾರಕಕ್ಕೆ ಗ್ರೀನ್ ಸಿಗ್ನಲ್ ಸಿಕ್ಕಿದೆ. ಅಂತೆಯೇ ನಾಳೆಯಿಂದ ಸ್ಮಾರಕ ನಿರ್ಮಾಣ ಕೆಲಸ ಆರಂಭವಾಗಲಿದೆ. ಹಾಗಾಗಿ, ಕಳೆದ ವಾರ, ಭಾರತಿ ವಿಷ್ಣುವರ್ಧನ್ ಮತ್ತು ಅನಿರುದ್ಧ ಅವರು ಸಿಎಂ ಯಡಿಯೂರಪ್ಪರನ್ನು ಭೇಟಿ ಮಾಡಿ, ಸ್ಮಾರಕ ನಿರ್ಮಾಣದ ಶಂಕು ಸ್ಥಾಪನೆಗೆ ಆಹ್ವಾನಿಸಿದ್ದು, ನಾಳೆ ಸಿಎಂ ಬಿಎಸ್ವೈ ಸ್ಮಾರಕ ನಿರ್ಮಾಣಕ್ಕೆ ಚಾಲನೆ ನೀಡಲಿದ್ದಾರೆ.
– ಸೋಮಶೇಖರ್ ಚಲ್ಯ
ಇದನ್ನೂ ಓದಿ: ನೆಪೊಟಿಸಮ್ಗೆ ಬ್ರೇಕ್ ಹಾಕಿದ ಪುನೀತ್; PRK ಸಿನಿಮಾದಲ್ಲಿ ಹೊಸಬರಿಗೆ ಅವಕಾಶ!