ಹತ್ರಾಸ್ ಅತ್ಯಾಚಾರ ಪ್ರಕರಣ: ಸಾಮಾಜಿಕ ಜಾಲತಾಣದಲ್ಲಿ ಭುಗಿಲೆದ್ದ ಆಕ್ರೋಶ!

ಸುಂದರ ಭವಿಷ್ಯದ ಕನಸು ಕಾಣುತ್ತಾ, ಚಂದದ ಬದುಕು ನಡೆಸುತ್ತಿದ್ದ ಉತ್ತರ ಪ್ರದೇಶದ ಹತ್ರಾಸ್ ನ ಬಾಲಕಿಯ ಕನಸು ಅಮಾನುಷ ಕ್ರೌರ್ಯಕ್ಕೆ ಬಲಿಯಾಗಿದೆ. ಬಾಲಕಿಯ ಮೇಲೆ ಅತ್ಯಾಚಾರ ಗೈದ ಆರೋಪಿಗಳನ್ನು ರಕ್ಷಿಸಲು ಪೊಲೀಸರು ಸಂತ್ರಸ್ತೆಯ ಶವವನ್ನು ರಾತ್ರೋರಾತ್ರಿ ಸುಟ್ಟು ಹಾಕಿದ್ದಾರೆ.

ಅತ್ಯಾಚಾರ ನಡೆದಿರುವುದಕ್ಕೆ ಸಾಕ್ಷಿಯಿದ್ದರೂ ಕಿರುಕುಳದ ಎಫ್‌ಐಆರ್ ದಾಖಲಿಸುವ ಪೊಲೀಸರು, ಜಾತಿಯಾಧಾರದಲ್ಲಿ ಅಪರಾಧ ಮತ್ತು ಅಪರಾಧಿಯನ್ನು ಗಣನೆಗೆ ತೆಗೆದುಕೊಳ್ಳುವುದು, ಇವೆಲ್ಲವೂ ಜನರಿಗೆ ವ್ಯವಸ್ಥೆ ಮೇಲೆ ಮತ್ತಷ್ಟು ಆಕ್ರೋಶ ಹುಟ್ಟಿಸುತ್ತಿದೆ.

ಮಹಿಳೆಯರ ಮೇಲೆ ಅತ್ಯಾಚಾರ ಪ್ರಕರಣಗಳು ದಿನೇ ದಿನೇ ಅಧಿಕವಾಗುತ್ತಿದ್ದರೂ ಸರ್ಕಾರ ಕಣ್ಣುಮುಚ್ಚಿ ಕುಳಿತಿದೆ. ದಲಿತ ಯುವತಿಯರು, ಬಡ ಹೆಣ್ಣುಮಕ್ಕಳ ಮೇಲಿನ ದೌರ್ಜನ್ಯಗಳು ಬೆಳಕಿಗೆ ಬರುವುದೇ ಕಡಿಮೆಯಾಗಿದೆ. ಪೊಲೀಸ್ ವ್ಯವಸ್ಥೆ ಆರೋಪಿಗಳ ಪರ ನಿಂತು ಪ್ರಕರಣಗಳು ನ್ಯಾಯಾಲಯದವರೆಗೆ ಹೋಗಲು ಬಿಡುವುದೆ ಇಲ್ಲ. ಪೊಲೀಸ್ ಪಂಚಾಯಿತಿಗಳ ಮೂಲಕ ಪ್ರಕರಣ ಬಗೆ ಹರಿಸಲಾಗುತ್ತಿದೆ. ಇಲ್ಲವೇ ಹೆದರಿಸಿಯೋ, ಕೊಲೆ ಮಾಡಿಯೋ ಪ್ರಕರಣವನ್ನು ಮುಚ್ಚಿಹಾಕಲಾಗುತ್ತಿದೆ. ನಿರ್ಭಯಾ ಅತ್ಯಾಚಾರ ಪ್ರಕರಣದಲ್ಲಿ ಅತ್ಯಾಚಾರಿಗಳು ಇವರೇ ಎಂದು ಗೊತ್ತಿದ್ದರೂ ಶಿಕ್ಷೆ ನೀಡಲು ವರ್ಷಗಳೇ ಕಾಯಬೇಕಾಯಿತು.

ಈಗ ಮತ್ತೊಮ್ಮೆ ಹತ್ರಾಸ್ ಸಂತ್ರಸ್ತೆ, ದಲಿತ ಯುವತಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಮತ್ತೊಮ್ಮೆ ದೇಶದಲ್ಲಿ ಸಂಚಲನ ಹುಟ್ಟು ಹಾಕಿದೆ. ಮಾನವೀಯತೆ, ಮನುಷ್ಯ ಕಷ್ಟಗಳಿಗೆ ಸ್ಪಂದಿಸುವ ಕೋಟ್ಯಾಂತರ ಮಂದಿ ಮೃತ ಸಂತ್ರಸ್ತೆಗೆ ನ್ಯಾಯ ಸಿಗಲಿ ಎಂದು ಒತ್ತಾಯಿಸುತ್ತಿದ್ದಾರೆ.

ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಘಟನೆ ಬಗ್ಗೆ ಸರಣಿ ಟ್ವೀಟ್‌ಗಳನ್ನು ಮಾಡಿದ್ದು, ಉತ್ತರ ಪ್ರದೇಶ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ದೇಶದ ಮತ್ತೊಬ್ಬ ಮಗಳು ಅತ್ಯಾಚಾರಕ್ಕೆ ಒಳಗಾಗಿ ಸಾವನ್ನಪ್ಪಿದ್ದಾರೆ. ಆದರೆ ಆಕೆಯ ಅಂತ್ಯಸಂಸ್ಕಾರಕ್ಕೂ ಸಹ ಆಕೆಯ ಕುಟುಂಬವನ್ನೇ ದೂರವಿಡಲಾಗಿದೆ. ದಲಿತ ಸಮುದಾಯದ ಮೇಲೆ ನಡೆಸುತ್ತಿರುವ ದೌರ್ಜನ್ಯ, ನಾಚಿಕೆಯಾಗಬೇಕು ಸರ್ಕಾರಕ್ಕೆ ಎಂದಿದ್ದಾರೆ.

ಉತ್ತರ ಪ್ರದೇಶದ ಘಟನೆಗೆ ಆಕ್ರೋಶ ವ್ಯಕ್ತಪಡಿಸಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅತ್ಯಾಚಾರ ಮತ್ತು ಕೊಲೆಯ ಹೊಣೆಯನ್ನು ಯುಪಿ ಮುಖ್ಯಮಂತ್ರಿ ಆದಿತ್ಯನಾಥ್ ಜೊತೆಗೆ ಅವರನ್ನು ಬೆಮಬಲಿಸುವ ಪ್ರಧಾನಿಗಳು, ಸಂಘಪರಿವಾರದವರು ಹೊರಬೇಕು ಎಂದಿದ್ದಾರೆ. ಜೊತೆಗೆ ಅತ್ಯಾಚಾರಕ್ಕೊಳಗಾಗಿ ಸಾವಿಗೀಡಾದ ಉತ್ತರಪ್ರದೇಶದ ದಲಿತ ಯುವತಿಗೆ ಗೌರವಪೂರ್ವಕ ಅಂತ್ಯಕ್ರಿಯೆಗೂ ಅವಕಾಶ ನೀಡದೆ, ಹೆತ್ತವರನ್ನು ಗೋಳಾಡಿಸಿದ ಆದಿತ್ಯನಾಥ್ ಕಾವಿಧಾರಿಗಳ ಪಾಲಿನ ಕಳಂಕ ಆಗಿದ್ದಾರೆ. ಇವರ ಆಡಳಿತದಲ್ಲಿ ಉತ್ತರಪ್ರದೇಶದ ಯಾವ ಹೆಣ್ಣು ಮಕ್ಕಳೂ ಸುರಕ್ಷಿತರಲ್ಲ. ಮೊದಲು ಇವರನ್ನು ವಜಾ ಮಾಡಿ ಎಂದು ಟ್ವೀಟ್ ಮಾಡಿದ್ದಾರೆ.

ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಘಟನೆಯನ್ನು ಖಂಡಿಸಿದ್ದು, ಹತ್ರಾಸ್‌ನಲ್ಲಿ ನಡೆದದ್ದು ಅಮಾನವೀಯ ಮತ್ತು ಕ್ರೌರ್ಯವನ್ನು ಮೀರಿದೆ ಎಂದಿದ್ದಾರೆ.

ನಟಿ ಸ್ವರಾ ಭಾಸ್ಕರ್‌ ತಮ್ಮ ಟ್ವೀಟ್‌ನಲ್ಲಿ ಜಾತಿಯನ್ನು ನಿರಾಕರಿಸುವವರು, ಭಾರತದಲ್ಲಿ ಜಾತಿ ತಾರತಮ್ಯ ಇಲ್ಲ ಎನ್ನುವವರು ಇದನ್ನು ನೋಡಿ ಎಂದು ಮನೀಷ್ ಪಾಂಡೆಯವರು ಮಾಡಿರುವ ಹತ್ರಾಸ್ ಗ್ಯಾಂಗ್ ರೇಪ್ ಪ್ರಕರಣದ ಗ್ರೌಂಡ್ ರಿಪೋರ್ಟ್ ಶೇರ್‌ ಮಾಡಿದ್ದಾರೆ.

ನಟ ಅಕ್ಷಯ್ ಕುಮಾರ್ ಕೂಡ ಟ್ವಿಟ್ಟರ್‌ನಲ್ಲಿ ಹತ್ರಾಸ್ ಗ್ಯಾಂಗ್ ರೇಪ್ ಪ್ರಕರಣ ಅತ್ಯಂತ ಕ್ರೂರ, ಇಂತಹ ಘಟನೆಗಳು ಯಾವಾಗ ನಿಲ್ಲುತ್ತದೆ ಎಂದು ಪ್ರಶ್ನಿಸಿದ್ದಾರೆ. ಅತ್ಯಾಚಾರಿಗಳಿಗೆ ಎಷ್ಟು ಕಠಿಣ ಶಿಕ್ಷೆಯಾಗಬೇಕು ಎಂದರೇ, ಶಿಕ್ಷೆಯ ಆಲೋಚನೆಯೇ ಅತ್ಯಾಚಾರಿಗಳನ್ನು ಭಯದಿಂದ ನಡುಗಿಸಬೇಕು ಎಂದಿದ್ದಾರೆ.

ನಟ, ಹೋರಾಟಗಾರ ಚೇತನ್, ಜಾತಿ,ಲಿಂಗ ಆಧಾರಿತ ಹಿಂಸಾಚಾರಕ್ಕೆ ಬಲಿಯಾದವರಿಗೆ ಇಂದಿನ ಭಾರತದಲ್ಲಿ ನ್ಯಾಯ ಬಹುದೊಡ್ಡ ಕನಸು. ಪೊಲೀಸ್ ಇಲಾಖೆಯ ನಿರಾಸಕ್ತಿ, ಬೇಜವಾಬ್ದಾರಿತನ, ನಿಂದನೆ ಇದಕ್ಕೆ ಪ್ರಮುಖ ಕಾರಣಗಳಾಗಿವೆ. ಪೊಲೀಸ್ ನೇತೃತ್ವದ ಹತ್ರಾಸ್ ಅತ್ಯಾಚಾರ, ಕೊಲೆ ಸಂತ್ರಸ್ತೆಯ ಶವಸಂಸ್ಕಾರ ಪೊಲೀಸ್ ಇಲಾಖೆಯು ಪ್ರಭಲರಿಗೆ ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ತಿಳಿಸುತ್ತದೆ ಎಂದು ತಮ್ಮ ಟ್ವಿಟ್ಟರ್‌ ಮತ್ತು ಫೇಸ್‌ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

#Hathras #Police #Abuseಜಾತಿ / ಲಿಂಗ ಆಧಾರಿತ ಹಿಂಸಾಚಾರಕ್ಕೆ ಬಲಿಯಾದವರಿಗೆ ನ್ಯಾಯ ಇಂದಿನ ಭಾರತದಲ್ಲಿ ಬಹುದೊಡ್ಡ ಕನಸುಪೊಲೀಸ್ ಇಲಾಖೆಯ…

Posted by Chetan Ahimsa on Wednesday, September 30, 2020

 

 

ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಆಜಾದ್ ಈ ದುರ್ಘಟನೆಗೆ ಅತ್ಯಾಚಾರಿಗಳು ಎಷ್ಟು ಕಾರಣವೋ ಉತ್ತರಪ್ರದೇಶ ಸರ್ಕಾರ ಕೂಡ ಅಷ್ಟೇ ಕಾರಣ ಎಂದು ಆರೋಪಿಸಿದ್ದಾರೆ. ಸಂತ್ರಸ್ತೆಯನ್ನು ಏಮ್ಸ್ ಗೆ ಸೇರಿಸಿಕೊಳ್ಳಬೇಕೆಂದು ನಾನು ಒತ್ತಾಯಿಸುತ್ತಲೇ ಇದ್ದೆ, ಆದರೆ ಬಿಜೆಪಿ ಸರ್ಕಾರ ಹಾಗೆ ಮಾಡಲಿಲ್ಲ. ನಮ್ಮ ಸಹೋದರಿಯ ಸಾವಿಗೆ ಕಾರಣವಾದ ಅತ್ಯಾಚಾರಿಗಳು ಉತ್ತರ ಪ್ರದೇಶ ಸರ್ಕಾರಕ್ಕೂ ಅಷ್ಟೇ ಕಾರಣ ಎಂದು ಟ್ವೀಟ್ ಮಾಡಿದ್ದಾರೆ.

ಜನರ ಆಕ್ರೋಶ ಹೆಚ್ಚಾದ ಹಿನ್ನೆಲೆ ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್, ಹತ್ರಾಸ್‌ನಲ್ಲಿ  ನಡೆದ ದುರ್ಘಟನೆಯ ಅಪರಾಧಿಗಳು ಬದುಕುಳಿಯುವುದಿಲ್ಲ. ಪ್ರಕರಣದ ತನಿಖೆಗಾಗಿ ವಿಶೇಷ ತನಿಖಾ ತಂಡವನ್ನು ರಚಿಸಲಾಗಿದೆ. ಮುಂದಿನ ಏಳು ದಿನಗಳಲ್ಲಿ ಈ ತಂಡ ತನ್ನ ವರದಿಯನ್ನು ಸಲ್ಲಿಸಲಿದೆ. ಈ ಪ್ರಕರಣದ ವಿಚಾರಣೆ ಫಾಸ್ಟ್ ಟ್ರ್ಯಾಕ್ ನ್ಯಾಯಾಲಯದಲ್ಲಿ ನಡೆಯುತ್ತದೆ ಎಂದಿದ್ದಾರೆ.

ಉತ್ತರ ಪ್ರದೇಶದಲ್ಲಿ ಮೃತ ಸಂತ್ರಸ್ತೆಗೆ ನ್ಯಾಯಬೇಕು ಎಂದು ಪ್ರತಿಭಟನೆಗಳು ನಡೆಯುತ್ತಿವೆ. ಪ್ರತಿಭಟನಾಕಾರರನ್ನು ಬಂಧಿಸುವ ಕೆಲಸ ಕೂಡ ಉತ್ತರ ಪ್ರದೇಶ ಸರ್ಕಾರ ಮಾಡುತ್ತಿದೆ. ಮುಖ್ಯಮಂತ್ರಿ ಆದಿತ್ಯನಾಥ್ ಮನೆ ಮುಂದೆ ಸಮಾಜವಾದಿ ಪಕ್ಷದ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.

ದೆಹಲಿಯ ಯುಪಿ ಭವನದ ಮುಂದೆ ಪ್ರತಿಭಟನೆ ನಡೆಸಲು ಒಟ್ಟುಗೂಡುತ್ತಿದ್ದ ಸುಮಾರು 60 ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.


ಇದನ್ನೂ ಓದಿ: ಹತ್ರಾಸ್‌ ಅತ್ಯಾಚಾರ ಸಂತ್ರಸ್ತೆ ಸಾವು! ಯೋಗಿ ಸರ್ಕಾರದ ರಾಜೀನಾಮೆಗೆ ವಿರೋಧ ಪಕ್ಷಗಳ ಒತ್ತಾಯ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights