ಕೇಂದ್ರದ ಹೊಸ ಕೃಷಿ ನೀತಿಯನ್ನು ಮಹಾರಾಷ್ಟ್ರದಲ್ಲಿ ಜಾರಿ ಮಾಡುವುದಿಲ್ಲ: ಮೈತ್ರಿ ಸರ್ಕಾರ
ಕೇಂದ್ರ ಸರ್ಕಾರ ಅಂಗೀಕರಿಸಿರುವ ನೂತನ ಕೃಷಿ ನೀತಿಗಳನ್ನು ಮಹಾರಾಷ್ಟ್ರದಲ್ಲಿ ಜಾರಿ ಮಾಡಲಾಗುವುದಿಲ್ಲ ಎಂದು ಮಹಾರಾಷ್ಟ್ರ ಸರ್ಕಾರ ಹೇಳಿದೆ.
ನೂತನ ಕೃಷಿ ಮಸೂದೆಯನ್ನು ಕಳೆದ ಆಗಸ್ಟ್ನಲ್ಲಿ ಸುಗ್ರೀವಾಜ್ಞೆಯ ಮೂಲಕ ಜಾರಿಗೊಳಿಸಲಾಗಿತ್ತು. ಆ ಸಂದರ್ಭದಲ್ಲಿ ಮಹಾರಾಷ್ಟ್ರ ಸರ್ಕಾರವೂ ಜಾರಿಗೊಳಿಸಲು ಆದೇಶಿಸಿತ್ತು. ಆದರೆ, ಕಾಂಗ್ರೆಸ್ ಕೃಷಿ ನೀತಿಯ ವಿರುದ್ಧ ಒತ್ತಾಯ ಹೇರಿದ್ದು, ಸರ್ಕಾರ ತನ್ನ ಆದೇಶವನ್ನು ಹಿಂಪಡೆದುಕೊಂಡಿದೆ.
ಮಹಾರಾಷ್ಟ್ರದಲ್ಲಿ ಶಿವಸೇನೆಯ ಉದ್ದವ್ ಠಾಕ್ರೆ ನೇತೃತ್ವದಲ್ಲಿ ಶಿವಸೇನಾ, ಕಾಂಗ್ರೆಸ್, ಎನ್ಸಿಪಿ ಮೈತ್ರಿ ಸರ್ಕಾರ ಅಸ್ವಿತ್ವದಲ್ಲಿದ್ದು, ಕಾಂಗ್ರೆಸ್ ಮತ್ತು ಎನ್ಸಿಪಿ ಪಕ್ಷಗಳು ಹೊಸ ಕೃಷಿ ನೀತಿಯನ್ನು ತೀವ್ರವಾಗಿ ವಿರೋಧಿಸಿವೆ.
ಮಹಾರಾಷ್ಟ್ರದಲ್ಲಿ ಕೃಷಿ ನೀತಿಯನ್ನು ಜಾರಿಗೊಳಿಸುವುದಾದರೆ ಸಂಪುಟ ಸಭೆಗೆ ಗೈರಾಗುವುದಾಗಿ ಕಾಂಗ್ರೆಸ್ ಬೆದರಿಕೆ ವೊಡ್ಡಿದೆ. ಹೀಗಾಗಿ ಮೈತ್ರಿ ಸರ್ಕಾರ ಕೃಷಿ ನೀತಿ ಜಾರಿ ಮಾಡುವುದಿಲ್ಲ ಎಂದು ಹೇಳಿದೆ.
ಕೇಂದ್ರ ಸರ್ಕಾರದ ಕೃಷಿ ನೀತಿಗಳ ವಿರುದ್ಧ ಕಾಂಗ್ರೆಸ್ ದೇಶಾದ್ಯಂತ ರೈತರ ಹೋರಾಟಕ್ಕೆ ಬೆಂಬಲ ನೀಡಿದ್ದ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಸರ್ಕಾರ ಕೃಷಿ ನೀತಿ ಜಾರಿ ಬಗ್ಗೆ ಗೊಂದಲದಲ್ಲಿತ್ತು. ಆದರೆ, ಎರಡೂ ಪಕ್ಷಗಳೂ ಕೃಷಿ ನೀತಿಯನ್ನು ತೀವ್ರವಾಗಿ ವಿರೋಧಿಸಿರುವುದರಿಂದ ಮಹಾರಾಷ್ಟ್ರ ಸಿಎಂ ಉದ್ದವ್ ಠಾಕ್ರೆ, ಕೃಷಿ ಕಾಯ್ದೆಗಳನ್ನು ಜಾರಿ ಮಾಡುವುದಿಲ್ಲ ಎಂದು ಘೋಷಿಸಿದ್ದಾರೆ.
ಕಾಂಗ್ರೆಸ್, ಅಕ್ಟೋಬರ್ 03ರಿಂದ ನವೆಂಬರ್ 14ರ ವರೆಗೆ ಪಂಜಾಬ್ನಿಂದ ದೆಹಲಿಗೆ ಕಿಸಾನ್ ಯಾತ್ರಾವನ್ನು ಹಮ್ಮಿಕೊಂಡಿದೆ.
ಇದನ್ನೂ ಓದಿ: ಮೋದಿ ಸರ್ಕಾರದ ಕೃಷಿ ನೀತಿಗಳನ್ನು ವಿರೋಧಿಸಿ ಪಂಜಾಬ್ನಿಂದ ಕಾಂಗ್ರೆಸ್ ಕಿಸಾನ್ ಯಾತ್ರಾ!