ಸಚಿವೆಯನ್ನು ಐಟಂ ಎಂದು ಕರೆದ ಮಾಜಿ ಸಿಎಂ: ಬಿಜೆಪಿಗರಿಂದ ತರಾಟೆ!
ಮಧ್ಯ ಪ್ರದೇಶ BJP ಸರ್ಕಾರದ ಸಚಿವೆ ಇಮರ್ತಿ ದೇವಿ ಅವರನ್ನು ಐಟಮ್ ಎಂದು ಕರೆದು ಮಾಜಿ ಮುಖ್ಯಮಂತ್ರಿ ಹಾಗೂ ಮ.ಪ್ರ ಕಾಂಗ್ರೆಸ್ ಅಧ್ಯಕ್ಷ ಕಮಲ್ ನಾಥ್ ವಿವಾದಕ್ಕೆ ಸಿಲುಕ್ಕಿದ್ದಾರೆ.
ಶಿವರಾಜ್ ಸಿಂಗ್ ಚೌಹಾಣ್ ಸರ್ಕಾರದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ಸಚಿವೆಯಾಗಿರುವ ಇಮರ್ತಿ ದೇವಿ ಅವರು ಗ್ವಾಲಿಯರ್ ನ ದಬ್ರಾ ಕ್ಷೇತ್ರದಿಂದ ಉಪ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಿದ್ದಾರೆ. ಈ ಮೊದಲು ಅದೇ ಕ್ಷೇತ್ರದಲ್ಲಿ ಕಾಂಗ್ರೆಸ್ ನಿಂದ ಮೂರು ಬಾರಿ ಗೆದ್ದು ಶಾಸಕಿಯಾಗಿ ಆಯ್ಕೆಯಾಗಿದ್ದರು, ಸಚಿವೆಯೂ ಆಗಿದ್ದರು.
ಇಮರ್ತಿ ದೇವಿ ಕಮಲ್ ನಾಥ್ ಸರ್ಕಾರದಲ್ಲೂ ಕೂಡ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆಯಾಗಿದ್ದರು. ಕಾಂಗ್ರೆಸ್ ಆಡಳಿತವಿದ್ದಾಗಲೇ ಕಾಂಗ್ರೆಸ್ ತೊರೆದು 23 ಕಾಂಗ್ರೆಸ್ ಶಾಸಕರ ಜೊತೆಗೆ ಬಿಜೆಪಿ ಸೇರಿದ್ದರು. ಇದರಿಂದಾಗಿ ಏಳು ತಿಂಗಳ ಹಿಂದೆ ಕಮಲ್ ನಾಥ್ ಸರ್ಕಾರ ಬಿದ್ದು ಹೋಯಿತು.
ನಿನ್ನೆ ದಬ್ರಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ಸುರೇಶ್ ರಾಜೆ ಅವರ ಪರ ಮತ ಯಾಚನೆ ಮಾಡುತ್ತಾ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಕಮಲ್ ನಾಥ್, ನಮ್ಮ ಅಭ್ಯರ್ಥಿ ಸುರೇಶ್ ರಾಜೆ ಸರಳ ಮನುಷ್ಯ, ಆಕೆಯಂಥಲ್ಲ, ಆಕೆಯ ಹೆಸರೇನು, ನಿಮಗೆಲ್ಲಾ ಆಕೆಯ ಬಗ್ಗೆ ನನಗಿಂತ ಚೆನ್ನಾಗಿ ಗೊತ್ತಿದೆ. ನೀವೆಲ್ಲಾ ನನಗೆ ಮೊದಲೇ ಎಚ್ಚರಿಕೆ ನೀಡಬೇಕಾಗಿತ್ತು, ಆಕೆ ಎಂತಹ ಐಟಮ್ ಎಂದು ಕರೆದಿದ್ದು, ವಿವಾದಕ್ಕೆ ಗುರಿಯಾಗಿದ್ದಾರೆ.
ಇದನ್ನೂ ಓದಿ: ಮಧ್ಯಪ್ರದೇಶ: ನೀತಿಸಂಹಿತೆ ಉಲ್ಲಂಘನೆ ಆರೋಪ, ಬಿಜೆಪಿಯ 14 ಸಚಿವರನ್ನು ವಜಾಗೊಳಿಸಲು ಕಾಂಗ್ರೆಸ್ ಆಗ್ರಹ!
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಿಎಂ ಶಿವರಾಜ್ ಸಿಂಗ್ ಚೌಹಾಣ್, ಹಿರಿಯ ರಾಜಕಾರಿಣಿಯಾಗಿ ಕಮಲ್ ನಾಥ್ ಅವರ ಹೇಳಿಕೆ ನಿಜಕ್ಕೂ ಆಘಾತವನ್ನುಂಟುಮಾಡಿದೆ. ನಮ್ಮ ಸಂಪುಟದ ಸಚಿವೆ ಅದರಲ್ಲೂ ಮಹಿಳೆ ಬಗ್ಗೆ ಈ ರೀತಿ ಅಗೌರವವಾಗಿ ಮಾತನಾಡುವುದು ಸರಿಯಲ್ಲ, ಇದು ನಿಜಕ್ಕೂ ನಾಚಿಕೆಗೇಡಿನ ಸಂಗತಿಯಾಗಿದ್ದು, ಮಹಿಳೆಯರಿಗೆ ಮತ್ತು ದಲಿತರಿಗೆ ಅವಮಾನ ಎಂದಿದ್ದಾರೆ.
ಇನ್ನೂ ಹಲವು ಬಿಜೆಪಿ ನಾಯಕರು ಕಮಲ್ ನಾಥ್ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ನಂತರ ಬಿಜೆಪಿ ನಿಯೋಗ ಭೋಪಾಲ್ ನಲ್ಲಿ ಚುನಾವಣಾ ಆಯೋಗದ ಅಧಿಕಾರಿಗಳನ್ನು ಭೇಟಿ ಮಾಡಿ ಮಹಿಳೆ ಮತ್ತು ದಲಿತರ ವಿರುದ್ಧ ಕಮಲ್ ನಾಥ್ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂದು ದೂರು ಸಲ್ಲಿಸಿದರು.
ಇದನ್ನೂ ಓದಿ: ಸಿಂಧಿಯಾ ಭದ್ರಕೋಟೆ ಭೇದಿಸಲು ಕಾಂಗ್ರೆಸ್ ಪರವಾಗಿ ಸಚಿನ್ ಮಧ್ಯಪ್ರದೇಶದಲ್ಲಿ ಪ್ರಚಾರ!