ಬಂದೂಕು ಹಿಡಿದು ಹತ್ಯೆ ಮಾಡುವುದಾಗಿ ಬೆದರಿಸಿ ಯುವತಿ ಮೇಲೆ ಅತ್ಯಾಚಾರ!
ಗ್ರಾಮದ ಮುಖಂಡ ಸೇರಿದಂತೆ ಇಬ್ಬರು ಕಾಮುಕರು ಬಂದೂಕು ತೋರಿಸಿ, ಕೊಲೆ ಬೆದರಿಕೆ ಹಾಕಿ 22 ವರ್ಷದ ದಲಿತ ಯುವತಿಯ ಮೇಲೆ ಅತ್ಯಾಚಾರ ಮಾಡಿರುವ ಘಟನೆ ಉತ್ತರ ಪ್ರದೇಶದ ಕಾನ್ಪುರ್ ದೇಹತ್ ಜಿಲ್ಲೆಯಲ್ಲಿ ನಡೆದಿದೆ.
ಅತ್ಯಾಚಾರ ವಾರದ ಹಿಂದೆ ನಡೆದಿದ್ದು, ಅಕ್ಟೋಬರ್ 18 ರ ಭಾನುವಾರ ಪೊಲೀಸರಿಗೆ ದೂರು ನೀಡಲಾಗಿದೆ ಎಂದು ಪಿಟಿಐ ವರದಿ ಮಾಡಿದೆ.
“ಸಂತ್ರಸ್ತೆಯ ಪೋಷಕರು ಸಲ್ಲಿಸಿದ ದೂರಿನ ಪ್ರಕಾರ, 22 ವರ್ಷದ ಯುವತಿಯು ಒಬ್ಬಂಟಿಯಾಗಿರುವಾಗ ಮನೆಗೆ ನುಗ್ಗಿದ ಆರೋಪಿಗಳು ಬಂದೂಕು ಗುರಿಯಿಟ್ಟು ಅತ್ಯಾಚಾರ ಎಸಗಿದ್ದಾರೆ. ಈ ಘಟನೆಯ ಬಗ್ಗೆ ಯಾರೊಂದಿಗಾದರೂ ಹೇಳಿದರೆ ಭೀಕರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಯುವತಿಗೆ ಬೆದರಿಸಿದ್ದಾರೆ” ಎಂದು ಕಾನ್ಪುರ್ ದೇಹತ್ ಪೊಲೀಸ್ ವರಿಷ್ಠಾಧಿಕಾರಿ ಕೇಶವ್ ಕುಮಾರ್ ಚೌಧರಿ ಹೇಳಿದ್ದಾರೆ.
ಐಪಿಸಿ ಸೆಕ್ಷನ್ ಸೇರಿದಂತೆ ಪರಿಶಿಷ್ಟ ಜಾತಿ ಮತ್ತು ಬುಡಕಟ್ಟು (ದೌರ್ಜನ್ಯ ತಡೆ) ಕಾಯ್ದೆ 1989 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಆರೋಪಿಗಳು ಪರಾರಿಯಾಗಿದ್ದಾರೆ. ಪರಾರಿಯಾದ ಆರೋಪಿಗಳನ್ನು ಬಂಧಿಸಲು ದೇರಾಪುರ ಎಸ್ಎಚ್ಒ, ಸರ್ಕಲ್ ಅಧಿಕಾರಿ ಮತ್ತು ಹೆಚ್ಚುವರಿ ಎಸ್ಪಿ ನೇತೃತ್ವದ ಮೂರು ಪೊಲೀಸ್ ತಂಡಗಳ ಸ್ವಾಟ್(Swat) ತಂಡವೊಂದನ್ನು ರಚಿಸಲಾಗಿದೆ ಎಂದು IANS ವರದಿ ಮಾಡಿದೆ.
ದೇಶದಾದ್ಯಂತ ಆಕ್ರೋಶಕ್ಕೆ ಕಾರಣವಾದ ಸೆಪ್ಟೆಂಬರ್ 14 ರಂದು ನಡೆದ ಹತ್ರಾಸ್ ದಲಿತ ಯುವತಿ ಅತ್ಯಾಚಾರ ನಡೆದು ಒಂದು ತಿಂಗಳಲ್ಲಿ ಈ ಘಟನೆ ನಡೆದಿದೆ. ಹತ್ರಾಸ್ ಸಂತ್ರಸ್ತೆ ಸೆಪ್ಟೆಂಬರ್ 29 ರಂದು ದೆಹಲಿಯ ಆಸ್ಪತ್ರೆಯಲ್ಲಿ ನಿಧನರಾದರು. ಪ್ರಸ್ತುತ ಪ್ರಕರಣವನ್ನು ಸಿಬಿಐ ತನಿಖೆ ನಡೆಸುತ್ತಿದೆ.
ಇಷ್ಟೇ ಅಲ್ಲದೆ ಹತ್ರಾಸ್ ಘಟನೆ ನಡೆದ ಕೆಲವೇ ದಿನಗಳಲ್ಲಿ ಬರಾಬಂಕಿ ಜಿಲ್ಲೆಯಲ್ಲಿ ಮತ್ತೊಬ್ಬ ದಲಿತ ಬಾಲಕಿಯನ್ನು ಅತ್ಯಾಚಾರ ಮಾಡಿ ಕೊಲೆ ಮಾಡಲಾಗಿತ್ತು.
ಇದನ್ನೂ ಓದಿ: ಉಪಚುನಾವಣೆ: ಕೈ-ತೆನೆ ಪಕ್ಷಗಳಿಗೆ ಶಾಕ್; ಕಾಂಗ್ರೆಸ್, JDS ಮುಖಂಡರು BJPಗೆ ಪಕ್ಷಾಂತರ!