ಅತ್ಯಾಚಾರ ಪ್ರಕರಣದಲ್ಲಿ ಪಂಜಾಬ್ ಸರ್ಕಾರ ಉತ್ತರ ಪ್ರದೇಶದಂತೆ ನಡೆದುಕೊಂಡಿಲ್ಲ: ರಾಹುಲ್ಗಾಂಧಿ
ಪಂಜಾಬ್ ನ ಹೋಶಿಯಾರ್ಪುರ್ನಲ್ಲಿ ದಲಿತ ಯುವತಿಯ ಮೇಲೆ ಅತ್ಯಾಚಾರ ನಡೆದಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಹುಲ್ಗಾಂಧಿ ಮತ್ತು ಪ್ರಿಯಾಂಕಾಗಾಂಧಿ ಏಕೆ ಮಾತನಾಡುತ್ತಿಲ್ಲ ಎಂದು ಟ್ವಿಟರ್ನಲ್ಲಿ ಭಾರೀ ಟೀಕೆಗಳು ವ್ಯಕ್ತವಾಗುತ್ತಿವೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ರಾಹುಲ್ಗಾಂಧಿ, ಹತ್ರಾಸ್ ಪ್ರಕರಣದಲ್ಲಿ ಉತ್ತರ ಪ್ರದೇಶ ಸರ್ಕಾರ ತೋರಿದ ನಿರ್ಲಜ್ಜತನವನ್ನು ಪಂಜಾಬ್ ಸರ್ಕಾರ ತೋರಿಸಿಲ್ಲ. ಉತ್ತರ ಪ್ರದೇಶದಂತೆ ಆರೋಪಿಗಳ ಪರ ಪಿತೂರಿಯನ್ನು ಪಂಜಾಬ್ ಸರ್ಕಾರ ನಡೆಸಿಲ್ಲ. ಒಂದು ವೇಳೆ ಅಂತಹ ನೀಚತನಕ್ಕೆ ಪಂಜಾಬ್ ಸರ್ಕಾರ ಇಳಿದ್ದಿದ್ದರೆ ಅಲ್ಲಿಯೂ ಹೋಗಿ ಪ್ರತಿಭಟಿಸುತ್ತಿದ್ದೆ. ಆದರೆ, ಪಂಜಾಬ್ನಲ್ಲಿರುವುದು ಜವಾಬ್ದಾರಿಯುತ ಸರ್ಕಾರ ಎಂದು ಬಿಜೆಪಿಗೆ ತಿರುಗೇಟು ನೀಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, ‘ಪಂಜಾಬ್ ಮತ್ತು ರಾಜಸ್ಥಾನ ಸರಕಾರಗಳು, ಉತ್ತರಪ್ರದೇಶ ಸರಕಾರದಂತೆ ಹೆಣ್ಣುಮಕ್ಕಳ ಅತ್ಯಾಚಾರ ಪ್ರಕರಣವನ್ನು ಕಡೆಗಣಿಸುತ್ತಿಲ್ಲ. ಸಂತ್ರಸ್ತೆಯ ಕುಟುಂಬಕ್ಕೆ ಬೆದರಿಕೆ ಹಾಕುತ್ತಿಲ್ಲ. ಆ ಕುಟುಂಬಕ್ಕೆ ನ್ಯಾಯ ದೊರೆಯುವುದನ್ನು ತಡೆಯುತ್ತಿಲ್ಲ. ಒಂದು ವೇಳೆ ಹಾಗೇನಾದರೂ ಆದರೆ, ನಾನೇ ಅಲ್ಲಿಗೆ ಹೋಗಿ ನ್ಯಾಯಕ್ಕಾಗಿ ಹೋರಾಡುತ್ತೇನೆ ಎಂದು ಹೇಳಿದ್ದಾರೆ.
Unlike in UP, the governments of Punjab and Rajasthan are NOT denying that the girl was raped, threatening her family and blocking the course of justice.
If they do, I will go there to fight for justice. #Hathras
— Rahul Gandhi (@RahulGandhi) October 24, 2020
ರಾಹುಲ್ ಗಾಂಧಿಯವರ ಟ್ವೀಟ್ ಅನ್ನು ಚಿತ್ರನಟ ಪ್ರಕಾಶ್ ರಾಜ್ ಅವರು ಮರು ಟ್ವೀಟ್ ಮಾಡಿದ್ದು, ‘ದಟ್ಸ್ ದ ವೇ’ (ಅದೊಂದೇ ದಾರಿ) ಎಂದು ಬೆಂಬಲ ಸೂಚಿಸಿದ್ದಾರೆ.
ಇದನ್ನೂ ಓದಿ: ಹತ್ರಾಸ್ ಅತ್ಯಾಚಾರ ಪ್ರಕರಣವನ್ನು ಮುಚ್ಚಿಹಾಕಲು ಸರ್ಕಾರ ಸಿದ್ದತೆ ನಡೆಸಿತ್ತು: ಸತ್ಯಶೋಧನಾ ವರದಿ