ಅತ್ಯಾಚಾರಕ್ಕೊಳಗಾದ ಸ್ವಾಭಿಮಾನಿ ಮಹಿಳೆ ಆತ್ಮಹತ್ಯೆ ಮಾಡಿಕೊಳ್ಳಬೇಕು: ಕೇರಳ ಕಾಂಗ್ರೆಸ್ ಅಧ್ಯಕ್ಷ ವಿವಾದಾತ್ಮಕ ಹೇಳಿಕೆ
ಅತ್ಯಾಚಾರಕ್ಕೆ ಒಳಗಾದ ಮಹಿಳೆ ಸ್ವಾಭಿಮಾನಕ್ಕಾಗಿ ಆತ್ಮಹತ್ಯೆ ಮಾಡಿಕೊಳ್ಳಬೇಕು ಅಥವಾ ಆಕೆಗೆ ರಕ್ಷಣೆಯಿಲ್ಲ ಎಂಬ ಆತಂಕದಿಂದ ಜೀವನವನ್ನು ಕಳೆದುಕೊಳ್ಳಬೇಕು ಎಂದು ಕೇರಳ ಕಾಂಗ್ರೆಸ್ ಅಧ್ಯಕ್ಷ ಹೇಳಿದ್ದು, ವಿವಾದ ಸೃಷ್ಟಿಸಿಕೊಂಡಿದ್ದಾರೆ.
ರಾಜ್ಯ ಸರ್ಕಾರದ ವಿರುದ್ಧ ರಾಜಧಾನಿ ತಿರುವನಂತಪುರಂನಲ್ಲಿ ಯುಡಿಎಫ್ “ರಾಜದ್ರೋಹ” ದಿನ ಕಾರ್ಯಕ್ರಮದಲ್ಲಿ ಸೋಲಾರ್ ಹಗರಣದ ಆರೋಪಿ ಮಹಿಳೆ ಹೇಳಿಕೆಗಳನ್ನು ಉಲ್ಲೇಖಿಸಿ ಮಾತನಾಡಿರುವ ಮಲ್ಲಪಲ್ಲಿ ರಾಮಚಂದ್ರನ್ ಅವರು, ”ಸ್ವಾಭಿಮಾನ ಇರುವ ಮಹಿಳೆ ಅತ್ಯಾಚಾರಕ್ಕೆ ಒಳಗಾದರೆ ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ ಅಥವಾ ಮತ್ತೆ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಬಾರದು ಎನ್ನುವ ಆತಂಕದಿಂದಲಾದರೂ ಸಂತ್ರಸ್ತ ಮಹಿಳೆ ಸಾಯುತ್ತಾಳೆ. ಆದರೆ ಈಕೆ ಮಾತ್ರ ದಿನಾ ತನ್ನ ಮೇಲೆ ಅತ್ಯಾಚಾರ ಆಗುತ್ತಿದೆ ಎಂದು ಬಾಯಿ ಬಡಿದುಕೊಳ್ಳುತ್ತಿದ್ದಾರೆ” ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಸಿಎಂ ಪಿಣರಾಯಿ ನೇತೃತ್ವದ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ರಾಮಚಂದ್ರನ್, ತಮ್ಮ ಹಗರಣಗಳನ್ನು ಮುಚ್ಚಿಕೊಳ್ಳಲು ಎಲ್ಡಿಎಫ್ ಆಡಳಿತ ಕೂಟವು ಲೈಂಗಿಕ ಕಾರ್ಯಕರ್ತೆಯರನ್ನು ಮುಂಚೂಣಿಗೆ ತಂದು ನಿಲ್ಲಿಸಿದೆ. ಅವರನ್ನು ಮುಂದಿಟ್ಟುಕೊಂಡು ವಿಷಯದ ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ. ಇದು ನಾಚೀಕೆಗೇಡಿನ ಸಂಗತಿ. ಅತ್ಯಾಚಾರಕ್ಕೆ ಒಳಗಾದವರು ಜೀವನ ಕಳೆದುಕೊಳ್ಳುತ್ತಾರೆ. ಈ ರೀತಿ ಅತ್ಯಾಚಾರ ಆಗುತ್ತಿದೆ ಎಂದು ಕೂಗಾಡುವುದಿಲ್ಲ ಎಂದು ಹೇಳಿದ್ದಾರೆ.
ಕೇರಳದ ಕಾಂಗ್ರೆಸ್ ಸರಕಾರವನ್ನು ಅವನತಿಗೆ ತಳ್ಳಿದ ಸೋಲಾರ್ ಹಗರಣದಲ್ಲಿ ಮಾಜಿ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಅವರ ಅತ್ಯಾಪ್ತೆಯಾಗಿದ್ದ ಸರಿತಾ ನಾಯರ್ ಭಾಗಿಯಾಗಿದ್ದು, ಸದ್ಯ ಜೈಲಿನಲ್ಲಿದ್ದಾರೆ. ಮಾಜಿ ಸಿಎಂ ಉಮ್ಮನ್ ಚಾಂಡಿ ವಿರುದ್ಧವೂ ಆರೋಪವಿದೆ.
ಇದನ್ನೂ ಓದಿ: ಉತ್ತಮ ಆಡಳಿತದಲ್ಲಿ ನಂ.1 ರಾಜ್ಯ ಕೇರಳ: ಕೊನೆಯ ಸ್ಥಾನದಲ್ಲಿ ಉತ್ತರ ಪ್ರದೇಶ!