ಮಸೀದಿಗಳಿಗೆ ಅಳವಡಿಸುವ ಧ್ವನಿವರ್ಧಕ ತೆರವುಗೊಳಿಸುವ ವಿಚಾರ : ಪೊಲೀಸ್ ಇಲಾಖೆ ಸ್ಪಷ್ಟನೆ!
ರಾಜ್ಯಾದ್ಯಂತ ಇರುವ ಮಸೀದಿಗಳಿಗೆ ಅಳವಡಿಸಿರುವ ಧ್ವನಿವರ್ಧಕಗಳನ್ನು ತೆರವುಗೊಳಿಸಲು ಸೂಚನೆ ನೀಡಬೇಕು ಎಂದು ಬೆಂಗಳೂರಿನ ನ್ಯಾವಾದಿ ಹರ್ಷ ಮುತಾಲಿಕ್ ಸಲ್ಲಿಸಿದ್ದ ಮನವಿಗೆ ಸಂಬಂಧಿಸಿದಂತೆ ಸಾಕಷ್ಟು ಊಹಾಪೋಹಗಳು ಹರಿದಾಡುತ್ತಿವೆ.
ಹರ್ಷ ಮುತಾಲಿಕ್ ಮನವಿಯಲ್ಲಿ ರಾಜ್ಯಾದ್ಯಂತ ಎಲ್ಲಾ ಮಸೀದಿಗಳಲ್ಲಿ ಮುಸ್ಲಿಂ ಬಾಂಧವರು ಸಲ್ಲಿಸುವ ಪ್ರಾರ್ಥನೆಯಲ್ಲಿ ಹೆಚ್ಚು ಧ್ವನಿ ಉಂಟಾಗುತ್ತಿರುವುದರಿಂದ ಅನೇಕ ತೊಂದರೆಗಳು ಆಗುತ್ತಿವೆ. ಈ ಬಗ್ಗೆ ಮಸೀದಿಗಳಲ್ಲಿ ಧ್ವನಿವರ್ಧಕಗಳ ನಿರ್ಬಂಧ ಹೇರಿ ಅವುಗಳನ್ನು ತೆರವುಗೊಳಿಸಬೇಕೆಂದು ಮನವಿ ಮಾಡಿದ್ದರು. ಹೀಗಾಗಿ ಪೊಲೀಸ್ ಇಲಾಖೆ ಧ್ವನಿವರ್ಧಕಗಳ ತೆರವಿಗೆ ಆದೇಶ ಹೊರಡಿದೆ ಎನ್ನುವ ಮಾತುಗಳು ಎಲ್ಲೆಡೆ ಕೇಳಿ ಬರುತ್ತಿವೆ. ಸತ್ತೋಲೆ ಕುರಿತು ಪೊಲೀಸ್ ಇಲಾಖೆ ಸ್ಪಷ್ಟನೆ ನೀಡಿದೆ.
ಸುತ್ತೋಲೆ ಕುರಿತು ಪೊಲೀಸ್ ಇಲಾಖೆ ಸ್ಪಷ್ಟನೆ ಕೊಟ್ಟಿದ್ದು, ಈ ಪತ್ರವನ್ನು ಹಿರಿಯ ಅಧಿಕಾರಿಗಳ ಒಪ್ಪಿಗೆ ಇಲ್ಲದೆ ಗುಮಾಸ್ತರು ಕಿಡಿಗೇಡಿತನದಿಂದ ಕರ್ನಾಟಕ ರಾಜ್ಯದ ಪೊಲೀಸ್ ಕಮೀಷನರ್ಗಳು ಹಾಗೂ ಜಿಲ್ಲಾ ಎಸ್ಪಿಗಳಿಗೆ ಕಳುಹಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಮಸೀದಿಗಳಲ್ಲಿರುವ ಧ್ವನಿ ವರ್ಧಕಗಳನ್ನು ತೆಗೆಯುವಂತ ಯಾವುದೇ ನಿರ್ದೇಶನವನ್ನು ಪೊಲೀಸ್ ಇಲಾಖೆಯಿಂದ ನೀಡಿರುವುದಿಲ್ಲ ಎಂದು ಪೊಲೀಸ್ ಇಲಾಖೆ ಸ್ಪಷ್ಟನೆ ಕೊಟ್ಟಿದೆ. ಈ ಬಗ್ಗೆ ಮುಂದಿನ ವಿಚಾರಣೆಗೆ ಆದೇಶಿಸಲಾಗಿದೆ ಸಾರ್ವಜನಿಕರು ಇಂತಹ ಗಾಳಿಸುದ್ದಿ ಅಥವಾ ಹಾದಿ ತಪ್ಪಿಸುವಂತಹ ಸುದ್ದಿಗಳಿಗೆ ಗಮನ ಕೊಡದಂತೆ ಸೂಚಿಸಲಾಗಿದೆ.
ಈ ಹಿಂದೆಯೇ ಸುಪ್ರೀಂಕೋರ್ಟ್ ಮಸೀದಿಗಳಲ್ಲಿ ಧ್ವನಿವರ್ಧಕ ಬಳಕೆ ಬಗ್ಗೆ ವಿವರವಾದ ಮಾರ್ಗಸೂಚಿ ಹೊರಡಿಸಿದೆ. ರಾತ್ರಿ 10 ರಿಂದ ಬೆಳಗ್ಗೆ 6 ಗಂಟೆ ವರೆಗೆ ಧ್ವನಿವರ್ಧಕ ಬಳಕೆ ಮಾಡಲು ನಿರ್ಬಂಧ ವಿಧಿಸಿದೆ. ಜೊತೆಗೆ ಧ್ವನಿವರ್ಧಕದಲ್ಲಿನ ಶಬ್ದದ ಪ್ರಮಾಣ 75 ಡೆಸಿಬಲ್ಗಿಂತ ಹೆಚ್ಚಿರಬಾರದು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.