ಹನುಮ ಹುಟ್ಟಿದ್ ಡೇಟ್ ಗೊತ್ತೇನ್ಲಾ? ಸುಮ್ನೆ ಚಿಕ್ಕನ್ ತಿನ್ಲಾ!: ಸಿದ್ದರಾಮಯ್ಯ
ಭಾರತದಲ್ಲಿ ಚೈತ್ರ ಮಾಸದ ಪೌರ್ಣಮಿಯ ದಿನ ಹನುಮಂತ ಹುಟ್ಟಿದ ದಿನವೆಂದು, ಹನುಮ ಜಯಂತಿ ಆಚರಿಸಲಾಗುತ್ತದೆ. ಹಲವಾರು ಜನರು ಹನುಮ ಜಯಂತಿಯನ್ನು ಆಚರಿಸುವುದರಿಂದ ಮಾಂಸಾಹಾರವನ್ನು ತಿನ್ನುವುದಿಲ್ಲ. ಹೀಗಾಗಿ ಸ್ನೇಹಿತರೊಬ್ಬರು ಇಂದು ಹನುಮ ಜಯಂತಿ ಮಟನ್ ತಿನ್ನಬಾರದು ಎಂದಾಗ, ‘ಯಾವ ಜಯಂತಿನ್ಲಾ? ಹನುಮ ಹುಟ್ಟಿದ ತಾರೀಖು ನಿನಗೆ ಗೊತ್ತಾ? ಸುಮ್ನೆ ಚಿಕಿನ್ ತಿನ್ಲಾ…’ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ರಾಜ್ಯದಲ್ಲಿ ನಡೆಯುತ್ತಿರುವ 2ನೇ ಹಂತದ ಗ್ರಾಮ ಪಂಚಾಯತಿ ಚುನಾವಣೆ ಭಾನುವಾರ (ಇಂದು) ನಡೆಯುತ್ತಿದ್ದು, ಮತಚಲಾಯಿಸಲು ತಮ್ಮ ಹುಟ್ಟೂರು ಸಿದ್ದರಾಮನಹುಂಡಿಗೆ ತೆರಳಿದ್ದ ಸಿದ್ದರಾಮಯ್ಯ, ಮತ ಚಲಾಯಿಸಿ, ಮಾಂಸಾಹಾರ ತಿಂದು ರಿಲ್ಯಾಕ್ಸ್ ಮಾಡಿದ್ದಾರೆ.
ಅವರ ಬಾಲ್ಯದ ಸ್ನೇಹಿತ ಕೆಂಪೀರಯ್ಯರ ಮನೆಯಲ್ಲಿ ಊಟಕ್ಕೆ ತೆರಳಿದ್ದ ಸಿದ್ದರಾಮಯ್ಯರಿಗೆ ಗ್ರಾಮಸ್ಥರೊಬ್ಬರು , ‘ಅಣ್ಣ ಇಂದು ಹನುಮ ಜಯಂತಿ. ಇವತ್ತು ನಾನ್ವೆಜ್ ತಿನ್ನೋದಾ?’ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿದ ಸಿದ್ದರಾಮಯ್ಯ, ‘ಯಾವ ಜಯಂತಿನ್ಲಾ? ಹನುಮ ಹುಟ್ಟಿದ ತಾರೀಖು ನಿನಗೆ ಗೊತ್ತಾ? ಏನೂ ಆಗಲ್ಲ ತಿನ್ಲಾ. ಹನುಮ ಹುಟ್ಟಿದ ದಿನಾಂಕ ಗೊತ್ತಿದ್ರೆ ಮಾಡಬೇಕು. ಗೊತ್ತಿಲ್ಲ ಅಂದ್ರೆ ಚಿಕನ್ ತಿನ್ನು’ ಎಂದು ತಮಾಷೆ ಮಾಡಿದ್ದಾರೆ.
ನಾನು ಮೊದಲು ದಿನಕ್ಕೆ ಮೂರು ಹೊತ್ತೂ ನಾನ್ವೆಜ್ ತಿನ್ನುತ್ತಿದ್ದೆ. ಈಗ ಕಡಿಮೆ ಮಾಡಿದ್ದೇನೆ. ಭಾನುವಾರ, ಬುಧವಾರ, ಶುಕ್ರವಾರ ನಾನ್ವೆಜ್ ತಿನ್ನುವುದನ್ನು ರೂಢಿಸಿಕೊಂಡಿದ್ದೇನೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಇದನ್ನೂ ಓದಿ: ಮೈಸೂರಿನಲ್ಲಿ ಸಿದ್ದರಾಮಯ್ಯರನ್ನು ಸೋಲಿಸಲು JDS-BJP ಒಳ ಒಪ್ಪಂದ ಮಾಡಿಕೊಂಡಿದ್ದವು: ಜೆಡಿಎಸ್ ಶಾಸಕ