ಬೆಂಗಳೂರಿನಲ್ಲಿ ನನ್ನ ಹತ್ಯೆಗೆ ಯತ್ನಿಸಲಾಗಿತ್ತು: ಇಸ್ರೋ ವಿಜ್ಞಾನಿ ತಪನ್ ಮಿಶ್ರ ಆರೋಪ
ಮೂರು ವರ್ಷಗಳ ಹಿಂದೆ ನನನ್ನು ಕೊಲ್ಲಲು ಯತ್ನಿಸಲಾಗಿತ್ತು. ಊಟದಲ್ಲಿ ಆರ್ಸೆನಿಕ್ ಟ್ರೈ ಆಕ್ಸೈಡ್ ಎಂಬ ವಿಷವನ್ನು ಬೆರೆಸಿ ಕೊಟ್ಟಿದ್ದರು. ವಿಷ ಸೇವಿಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರೂ ತಮ್ಮ ದೇಹದಲ್ಲಿ ಹಲವು ಬದಲಾವಣೆಗಳಾಗಿವೆ ಎಂದು ಇಸ್ರೋ ವಿಜ್ಞಾನಿ ತಪನ್ ಮಿಶ್ರಾ ಅವರು ಹೇಳಿದ್ದಾರೆ.
ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ಅವರು, ಹಲವು ಫೋಟೋಗಳನ್ನು ಅಪ್ಲೋಡ್ ಮಾಡಿದ್ದಾರೆ.
2017 ಮೇ 23ರಂದು ಪ್ರಚಾರ ಸಂದರ್ಶನದ ವೇಳೆ ಬೆಂಗಳೂರಿನಲ್ಲಿರುವ ಇಸ್ರೋದ ಪ್ರಧಾನ ಕಚೇರಿಯಲ್ಲಿ ನೀಡಿದ ದೋಸೆ ಮತ್ತು ಚಟ್ನಿಯಲ್ಲಿ ಆರ್ಸೆನಿಕ್ ವಿಷವನ್ನು ಬೆರೆಸಲಾಗಿದ್ದಿರಬಹುದು. ವಿಷ ತಿಂದ ದಿನದ ನಂತರ ತಮಗೆ ಉಸಿರಾಟದ ತೊಂದರೆ, ಚರ್ಮ ಸಮಸ್ಯೆ, ಚರ್ಮ ಕಿತ್ತುಬರುವುದು, ಫಂಗಲ್ ಸೋಂಕು ಇತ್ತಾದಿ ತೀವ್ರತರದ ಆರೋಗ್ಯ ಸಮಸ್ಯೆಗಳು ಎದುರಾದವು ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ರಾತ್ರಿ ವೇಳೆಯಲ್ಲಿ ಸೂರ್ಯಗ್ರಹಣ; ಇದು ಮಾಧ್ಯಮಗಳಿಂದ ಮಾತ್ರ ಸಾಧ್ಯ!
ತಮಗೆ ಅರ್ಸೆನಿಕ್ ವಿಷ ನೀಡಿರಬಹುದಾದ ಬಗ್ಗೆ ಜುಲೈ ತಿಂಗಳಲ್ಲಿ ಗೃಹ ವ್ಯವಹಾರಗಳ ಇಲಾಖೆಯ ಭದ್ರತಾ ಸಿಬ್ಬಂದಿಯೊಬ್ಬರು ತಿಳಿಸಿದರು. ಅಲ್ಲದೆ, ತಮಗೆ ಚಿಕಿತ್ಸೆ ಕೊಡಿಸಿದರು. ದೆಹಲಿಯ ಏಮ್ಸ್ ಆಸ್ಪತ್ರೆಯ ವರದಿಯಲ್ಲಿ ತಮ್ಮ ಆರ್ಸೆನಿಕ್ ವಿಷ ಇರುವುದು ಖಚಿಪಡಿಸಲಾಗಿತ್ತು. ಅಮೆರಿಕ ದೇಶದವರು ಈ ಸಂಚಿನ ಹಿಂದಿರಬಹುದು ಎಂದು ತಪನ್ ಮಿಶ್ರಾ ಅನುಮಾನ ವ್ಯಕ್ತಪಡಿಸಿದ್ದಾರೆ.
“ಇದು ಗೂಢಚಾರಿಕೆ ಉದ್ದೇಶದಿಂದ ಮಾಡಿದ ಕೃತ್ಯದಂತೆ ಕಾಣುತ್ತಿದೆ. ಸಿಂಥೆಟಿಕ್ ಅಪರ್ಚರ್ ರಾಡಾರ್ ನಿರ್ಮಾಣದ ನೈಪುಣ್ಯತೆ ಸೇರಿದಂತೆ ಬಹಳ ಮುಖ್ಯ ಮಿಲಿಟರಿ ತಂತ್ರಜ್ಞಾನದಲ್ಲಿ ಸಿದ್ಧಹಸ್ತರಾಗಿರುವ ವಿಜ್ಞಾನಿಯನ್ನ ಸಾಯಿಸುವ ಉದ್ದೇಶ ಇದ್ದಂತಿದೆ… ಈ ಘಟನೆಗಳನ್ನ ಭಾರತ ಸರ್ಕಾರ ತನಿಖೆಗೆ ಒಳಪಡಿಸಬೇಕು” ಎಂದು ತಪನ್ ಮಿಶ್ರಾ ಆಗ್ರಹಿಸಿದ್ದಾರೆ.
ಮಿಶ್ರಾ ಅವರ ಈ ಆರೋಪದ ಬಗ್ಗೆ ಇಸ್ರೋ ಸಂಸ್ಥೆಯಿಂದ ಯಾವುದೇ ಅಧಿಕೃತ ಪ್ರತಿಕ್ರಿಯೆ ಬಂದಿಲ್ಲ. ಇಸ್ರೋದ ಸೀನಿಯರ್ ಅಡ್ವೈಸರ್ ಆಗಿ ಕೆಲಸ ನಿರ್ವಹಿಸುತ್ತಿರುವ ತಪನ್ ಮಿಶ್ರಾ ಈ ತಿಂಗಳ ಕೊನೆಗೆ ನಿವೃತ್ತಿ ಹೊಂದಲಿದ್ದಾರೆ. ಈ ಮುಂಚೆ ಅವರು ಅಹ್ಮದಾಬಾದ್ನಲ್ಲಿರುವ ಇಸ್ರೋದ ಸ್ಪೇಸ್ ಅಪ್ಲಿಕೇಶನ್ ಸೆಂಟರ್ನಲ್ಲಿ ನಿರ್ದೇಶಕರಾಗಿ ಜವಾಬ್ದಾರಿ ನಿಭಾಯಿಸಿದ್ದರು.
ಇದನ್ನೂ ಓದಿ: ಮತ್ತೊಂದು ಹಿರಿಮೆಗೆ ಪಾತ್ರವಾದ ಇಸ್ರೋ : ಪಿಎಸ್ಎಲ್ವಿ 48 ಉಪಗ್ರಹ ಉಡಾವಣೆ