ಶಿವಮೊಗ್ಗ ಸ್ಪೋಟದಲ್ಲಿ ಟ್ವಿಸ್ಟ್: ಸತ್ತಿದ್ದಾನೆಂದು ಭಾವಿಸಿದ್ದ ಚಾಲಕ ಬದುಕಿಬಂದ!
ಶಿವಮೊಗ್ಗ ಜಿಲ್ಲೆಯಲ್ಲಿ ಸಂಭವಿಸಿದ್ದ ಜಿಲೆಟಿನ್ ಸ್ಫೋಟ ಪ್ರಕರಣದಲ್ಲಿ ಸ್ಫೋಟದ ವೇಳೆ ಸ್ಫೋಟಕ ಸಾಗಿದ್ದ ಚಾಲಕ ಸಾವನ್ನಪ್ಪಿದ್ದಾನೆ ಎಂದು ಹೇಳಲಾಗಿತ್ತು. ಆದರೆ, ಆತ ಬದುಕಿದ್ದಾನೆ ಎಂದು ತಿಳಿದು ಬಂದಿದೆ.
ಶಿವಮೊಗ್ಗದ ಹುಣಸೋಡಿನಲ್ಲಿ ಬುಲೆರೋ ವಾಹನ ಸಮೇತ ಸ್ಫೋಟಕ ಬ್ಲಾಸ್ಟ್ ಆಗಿತ್ತು. ಸ್ಫೋಟದಲ್ಲಿ ಐವರು ಸಾವನ್ನಪ್ಪಿದ್ದರು.
ಸಾವನ್ನಪ್ಪಿದವರ ಪೈಕಿ ಸ್ಫೋಟಕ ವಸ್ತು ತುಂಬಿದ್ದ ಬುಲೆರೋವನ್ನು ಚಾಲನೆ ಮಾಡುತ್ತಿದ್ದ ಚಾಲಕ ಶಶಿ ಕೂಡ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಆತ ತಾನು ಬದುಕಿರುವುದಾಗಿ ತಿಳಿಸಿದ್ದಾನೆ. ಈ ಬಗ್ಗೆ ಶಶಿ ತಂದೆ ಬೋರೇಗೌಡ ವಿಚಾರಣೆ ವೇಳೆ ಪೊಲೀಸರಿಗೆ ಮಾಹಿತಿ ನೀಡಿದ್ದು, ತನ್ನ ಮಗ ಬದುಕಿದ್ದಾನೆ ಎಂದು ತಿಳಿಸಿದ್ದಾರೆ.
ಶಶಿ ತನ್ನ ವಾಹನದಲ್ಲಿ ತುಂಬಿದ್ದ ಸ್ಫೋಟಕವನ್ನು ಬೇರೊಂದು ವಾಹನಕ್ಕೆ ಡಂಪ್ ಮಾಡಿದ್ದ. ಮತ್ತೊಂದು ವಾಹನದಲ್ಲಿ ಪ್ರವೀಣ್ ಹಾಗೂ ಮಂಜುನಾಥ್ ಎಂಬುವವರು ಸ್ಫೋಟಕ ಕೊಂಡೊಯ್ದಿದ್ದರು. ಈ ವೇಳೆ ವಾಹನ ಸ್ಫೋಟಗೊಂಡಿತ್ತು ಎಂದು ಶಶಿ ತಂದೆ ಹೇಳಿದ್ದಾರೆ.
ಶಶಿ ತನ್ನ ತಂದೆಗೆ ಕರೆ ಮಾಡಿ ತಾನು ಬದುಕಿರುವುದಾಗಿ ತಿಳಿಸಿದ್ದು, ನಂತರ ತನ್ನ ಮೊಬೈಲ್ಅನ್ನು ಸ್ವಿಚ್ಡ್ ಆಫ್ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.
ಇದರಿಂದಾಗಿ ಸ್ಫೋಟ ಪ್ರಕರಣದಲ್ಲಿ ಮತ್ತೊಂದು ಟ್ವಿಟ್ಸ್ ಸಿಕ್ಕಿದ್ದು, ಕೆಲವು ಅನುಮಾನಗಳನ್ನು ಹುಟ್ಟುಹಾಕಿದೆ ಎನ್ನಲಾಗಿದೆ. ಪೊಲೀಸರು ಶಶಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಶಶಿ ಸಿಕ್ಕ ನಂತರ ಸ್ಫೋಟಕದ ರಹಸ್ಯ ಗೊತ್ತಾಗಬಹುದಾದ ಸಾಧ್ಯತೆ ಇದೆ.
ಇದನ್ನೂ ಓದಿ: ಶಿವಮೊಗ್ಗದಲ್ಲಿ ಭಾರೀ ಸ್ಪೋಟ: ಡೈನಾಮೈಟ್ ಸಿಡಿತದಿಂದ ಸಾವು; ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ!