ಬೆಂಗಳೂರು ನಗರಾಭಿವೃದ್ಧಿ ಖಾತೆಯ ಮೇಲೆ ಎಂಟಿಬಿ ನಾಗರಾಜ್ ಕಣ್ಣು…!
ಸಚಿವ ಸ್ಥಾನ ಹಂಚಿಕೆ ಆಯ್ತು, ಖಾತೆ ಕೂಡ ಹಂಚಿಕೆಯಾಯ್ತು. ಆದರೂ ಇನ್ನೂ ಕೂಡ ಬಿಜೆಪಿಯಲ್ಲಿ ಅಸಮಧಾನ ಶಮನಗೊಳಿಸುವ ಪ್ರಕ್ರಿಯೆ ಜೊತೆಗೆ ಸಚಿವರಲ್ಲಿ ಬೇಸರ ಭುಗಿಲೇಳುತ್ತಲೇ ಇದೆ. ಈ ನಡುವೆ ಸಚಿವ ಎಂಟಿಬಿ ನಾಗರಾಜ್ ಬೆಂಗಳೂರು ನಗರಾಭಿವೃದ್ಧಿ ಖಾತೆಯನ್ನು ಪಡೆಯುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ.
ಇಂದು ವಿಧಾನ ಸೌಧದಲ್ಲಿ ಕೊಠಡಿ ಪೂಜೆ ಬಳಿಕ ಮಾತನಾಡಿದ ಸಚಿವ ಎಂಟಿಬಿ ನಾಗರಾಜ್, ” ಬೆಂಗಳೂರು ನಗರಾಭಿವೃದ್ಧಿ ಖಾತೆ ಕೊಟ್ಟರೆ ನಾನು ನಿಭಾಯಿಸಿಕೊಂಡು ಹೋಗುತ್ತೇನೆ. ಮುಂದೆ ಈ ಬಗ್ಗೆ ಸಿಎಂ ತೀರ್ಮಾನಿಸುತ್ತಾರೆ ಎಂದಿದ್ದಾರೆ. ಸದ್ಯ ಪೌರಾಡಳಿತ ಮತ್ತು ಸಕ್ಕರೆ ಖಾತೆ ಕೊಟ್ಟಿದ್ದಾರೆ. ಆದರೆ ಅದೂ ಕೊಟ್ಟರೆ ನಿಭಾಯಿಸುತ್ತೇನೆ” ಎಂದಿದ್ದಾರೆ.
ಮೊದಲೇ ಸಿಎಂ ಯಡಿಯೂರಪ್ಪ ಕೊಟ್ಟ ಖಾತೆಗಳನ್ನು ಅದಲು ಬದಲು ಮಾಡಿ ಅಸಮಧಾನಗೊಂಡವರ ಕೋಪ ಶಮನ ಮಾಡಲು ಮುಂದಾಗಿರುವಾಗ ಇಂತಹ ಹೇಳಿಕೆಗೆ ಯಾವ ರೀತಿ ಪ್ರತಿಕ್ರಿಯಿಸುತ್ತಾರೋ ಗೊತ್ತಿಲ್ಲ. ಈಗಾಗಲೇ ಅದಲು ಬದಲು ಆಟದಲ್ಲಿ ಸಚಿವ ಮಾಧುಸ್ವಾಮಿ ಹಾಗೂ ಆನಂದ್ ಸಿಂಗ್ ಬೇಸರ ವ್ಯಕ್ತ ಪಡಿಸಿದ್ದಾರೆ. ಕಾಮಿಡಿ ಖಾತೆ ಶೋಗೆ ಬೇಸತ್ತ ಆನಂದ್ ಸಿಂಗ್ ರಾಜೀನಾಮೆ ನೀಡುವ ಬಗ್ಗೆ ಆಪ್ತರೊಂದಿಗೆ ಹಂಚಿಕೊಂಡಿದ್ದಾರೆ.
ಈ ಹೊತ್ತಿನಲ್ಲಿ ಇದ್ದ ಖಾತೆಯನ್ನೇ ನೋಡಿಕೊಂಡು ಹೋದರೆ ಆ ಖಾತೆ ಕೈಗೆಟುಕೊತ್ತೋ ಇಲ್ವೋ ಗೊತ್ತಿಲ್ಲ. ಹೀಗಿರುವಾಗ ಇದ್ದ ಖಾತೆಯನ್ನು ನೋಡಿಕೊಂಡು ಹೋಗುವ ಬದಲಿಗೆ ಇದೇ ಖಾತೆ ಬೇಕು ಎಂದು ಆಸೆ ಪಡುವುದು ಎಷ್ಟು ಸೂಕ್ತ ಎನ್ನುವ ಪ್ರಶ್ನೆ ಮೂಡಿದೆ. ಬೆಂಗಳೂರು ನಗರಾಭಿವೃದ್ಧಿ ಖಾತೆ ಮೇಲೆ ಸಚಿವರ ಕಣ್ಣು ಬಿದ್ದಿದ್ದರಿಂದಲೇ ಈ ಖಾತೆಯನ್ನು ಯಾರಿಗೂ ಕೊಡದೇ ಸಿಎಂ ತಮ್ಮ ಬಳಿ ಇಟ್ಟುಕೊಂಡಿದ್ದಾರೆ.
ಪ್ರಮುಖ ಖಾತೆಗಾಗಿ ಸಚಿವರಾದ ಮಾಧುಸ್ವಾಮಿ, ಆನಂದ್ ಸಿಂಗ್ ಮತ್ತು ಸುಧಾಕರ್ ಪಟ್ಟು ಹಿಡಿದಿದ್ದು ನೇರವಾಗಿ ಅಸಮಾಧಾನ ಹೊರಹಾಕಿದ್ದಾರೆ. ಯಾಕೆಂದರೆ ಡಾ. ಸುಧಾಕರ್ ಅವರ ಒತ್ತಡಕ್ಕೆ ಮಣಿದು ಸಿಎಂ ಯಿಡಿಯೂರಪ್ಪ ಸಚಿವ ಮಾಧುಸ್ವಾಮಿಯಿಂದ ವೈದ್ಯಕೀಯ ಶಿಕ್ಷಣ ಖಾತೆ ಹಿಂಪಡೆದು ಸುಧಾಕರ್ ಅವರಿಗೆ ನಿಡಲು ನಿರ್ಧಾರಿಸಿದ್ದಾರೆ. ಇನ್ನೂ ಮಾಧುಸ್ವಾಮಿ ಅಸಮಧಾನ ಶಮಕ್ಕಾಗಿ ಸಚಿವ ಆನಂದ ಸಿಂಗ್ ಬಳಿ ಇದ್ದ ಖಾತೆಯನ್ನು ನೀಡಲು ಸಿಎಂ ಯೋಚಿಸಿದ್ದಾರೆ. ಹೀಗಾಗಿ ಸಚಿವ ಆನಂದ್ ಸಿಂಗ್ ತಾವು ರಾಜೀನಾಮೆ ನೀಡುವ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ಖಾತೆ ಅದಲು ಬದಲು ಆಟದಲ್ಲಿ ಸಚಿವರು ಸುಸ್ತಾಗಿ ಹೋಗಿದ್ದಾರೆ. ಮಿಂದಿನ ದಿನ ಸಿಎಂ ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆಂದು ಕಾದು ನೋಡಬೇಕಿದೆ.