ಹೆಚ್ ಡಿ ಕುಮಾರಸ್ವಾಮಿಗೆ ಆತಿಥ್ಯ ನೀಡಿ ಪಕ್ಷದಿಂದ ಉಚ್ಚಾಟನೆಯಾದ ಬಿಜೆಪಿ ಮುಖಂಡ..!
ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರಿಗೆ ಆತಿಥ್ಯ ನೀಡಿ ಸತ್ಕರಿಸಿದ ಬಾಗಲಕೋಟೆ ಮತಕ್ಷೇತ್ರದಲ್ಲಿ ನಿಷ್ಠಾವಂತ ಕಾರ್ಯಕರ್ತರಾಗಿ ಕಾರ್ಯ ನಿರ್ವಹಿಸಿದ ಬಿಜೆಪಿ ಮುಖಂಡನನ್ನು ಪಕ್ಷದಿಂದ ಉಚ್ಛಾಟಿಸಲಾಗಿದೆ.
ಹೌದು… ಸಂತೋಷ್ ಹೊಕ್ರಾಣಿ ಅವರನ್ನು ಬಿಜೆಪಿ ಪಕ್ಷದಿಂದ 6 ವರ್ಷ ಉಚ್ಛಾಟಿಸಲಾಗಿದೆ. ಸಂತೋಷ್ ಹೊಕ್ರಾಣಿ ಅವರನ್ನು ಪಕ್ಷದಿಂದ ಹೊರಹಾಕಿರುವುದಕ್ಕೆ ಶಾಸಕ ವೀರಣ್ಣ ಚರಂತಿಮಠ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಾಗಲಕೋಟೆ ಶಾಸಕ ವೀರಣ್ಣ ಚರಂತಿಮಠ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಮಾತ್ರವಲ್ಲದೇ ಸಂತೋಷ್ ಹೊಕ್ರಾಣಿ ಬಾಗಲಕೋಟೆ ಮತಕ್ಷೇತ್ರದಲ್ಲಿ ನಿಷ್ಠಾವಂತ ಕಾರ್ಯಕರ್ತರಾಗಿ ಕಾರ್ಯ ನಿರ್ವಹಿಸಿದ್ದಾರೆ. ಆದರೆ ಚುನಾವಣೆ ಗೆಲುವಿನ ಬಳಿಕ ಶಾಸಕ ವೀರಣ್ಣ ಚರಂತಿಮಠ ಹಾಗೂ ಸಂತೋಷ್ ಹೊಕ್ರಾಣಿ ಮಧ್ಯೆ ಮುನಿಸು ಉಂಟಾಗಿತ್ತು, ಈ ಕಾರಣದಿಂದಾಗಿ ಸಂತೋಷ್ ಅವರನ್ನು ಉಚ್ಛಾಟಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸಂತೋಷ್ ಹೊಕ್ರಾಣಿ ಬಹಿರಂಗವಾಗಿ ಅಸಮಾಧಾನ ತೋಡಿಕೊಂಡಿದ್ದಾರೆ. ಶಾಸಕ ವೀರಣ್ಣ ಚರಂತಿಮಠ ಜೊತೆಗೆ ಅಂತರ ಕಾಯ್ದುಕೊಂಡು ದೂರವೇ ಉಳಿದಿದ್ದಾರೆ.