ನಿಹಾಂಗ್ ಸಿಖ್ಖರು ಬಸ್ ಮೇಲೆ ದಾಳಿ ಮಾಡುವ ವಿಡಿಯೋ ರೈತರ ಪ್ರತಿಭಟನೆಗೆ ಸಂಬಂಧಿಸಿದ್ದಾ?
ಕೃಷಿ ಕಾನೂನುಗಳನ್ನು ವಿರೋಧಿಸಿ ದೆಹಲಿ ಗಡಿ ಭಾಗದಲ್ಲಿ ಪ್ರತಿಭಟನೆಗೆ ಮುಂದಾದ ರೈತರು ಇಂದು ‘ಚಕ್ಕಾ ಜಾಮ್’ ಹೆದ್ದಾರಿ ತಡೆ ಕೈಗೊಂಡಿದ್ದಾರೆ. ಇದರಿಂದಾಗಿ ದೆಹಲಿ ಮತ್ತು ರಾಷ್ಟ್ರೀಯ ರಾಜಧಾನಿ ಪ್ರದೇಶ (ಎನ್ಸಿಆರ್) ದಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ. ಇದರ ಮಧ್ಯೆ ಸಾಮಾಜಿಕ ಜಾಲತಾಣದಲ್ಲಿ ರೈತರು ಸಾರ್ವಜನಿಕ ಆಸ್ತಿಯನ್ನು ಹಾಳು ಮಾಡುತ್ತಿದ್ದಾರೆಂದು ಬಿಂಬಿಸುವ ವಿಡಿಯೋವೋಂದು ಹರಿದಾಡುತ್ತಿದೆ.
ನಿಹಾಂಗ್ ಸಿಖ್ಖರ ಗುಂಪು ಬಸ್ ಚಾಲಕನೊಂದಿಗೆ ವಾಗ್ವಾದ ಮತ್ತು ಬಸ್ ಅನ್ನು ಕತ್ತಿಗಳಿಂದ ಹಲ್ಲೆ ಮಾಡುವ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಮಾಡಲಾಗಿದೆ. ಮಾತ್ರವಲ್ಲದೇ ಇದನ್ನು ರೈತರ ಪ್ರತಿಭಟನೆಯ ದೃಶ್ಯ ಎಂದು ಹೇಳಲಾಗುತ್ತಿದೆ.
ಅಂತಹ ಒಂದು ವೀಡಿಯೋದ ಶೀರ್ಷಿಕೆ ಹೀಗಿದೆ, “ರೈತರ ಸೋಗಿನಲ್ಲಿ ಸರ್ಕಾರಿ ಆಸ್ತಿಯನ್ನು ನೆಲಸಮ ಮಾಡಲಾಗಿದೆ. ಸರ್ಕಾರಿ ಬಸ್ಗಳ ಮೇಲೆ ದಾಳಿ ಮಾಡಲಾಗಿದೆ. ಕಳಪೆ ಮನಸ್ಥಿತಿ ಹೊಂದಿರುವ ಕೆಲವರು ಧರ್ಮದ ಹೆಸರಿನಲ್ಲಿ ಹಿಂಸಾಚಾರವನ್ನು ಆಶ್ರಯಿಸುತ್ತಾರೆ. ಈ ವೀಡಿಯೊದಲ್ಲಿ ಸ್ಪಷ್ಟವಾಗಿ ಅದು ಗೋಚರಿಸುತ್ತದೆ. ಪಿಆರ್ಟಿಸಿ ಬಸ್ನ ಚಾಲಕ ಬಸ್ನ್ನು ಪಕ್ಕಕ್ಕೆ ನಿಲ್ಲಿಸಿದ್ದಾನೆ” ಎಂದು ಬರೆಯಲಾಗಿದೆ.
ಸತ್ಯಾಸತ್ಯತೆ :-
ಇದು ಪಂಜಾಬ್ನ ಕಪುರ್ಥಾಲಾ ಜಿಲ್ಲೆಯ 2019 ರ ವಿಡಿಯೋ. ನಿಹಾಂಗ್ ಸಿಖ್ಖರು ಸವಾರಿ ಮಾಡುತ್ತಿದ್ದ ಕುದುರೆಗಳಲ್ಲಿ ಒಂದು ಕುದುರೆಗೆ ಬಸ್ ಡಿಕ್ಕಿ ಹೊಡೆದ ನಂತರ ಈ ಘಟನೆ ನಡೆದಿದೆ. 2019 ರ ಸೆಪ್ಟೆಂಬರ್ನಿಂದ ಈ ವೀಡಿಯೊವನ್ನು ಅನೇಕ ಯೂಟ್ಯೂಬ್ ಚಾನೆಲ್ಗಳಲ್ಲಿ ಅಪ್ಲೋಡ್ ಮಾಡಲಾಗಿದೆ.
ಪಿ 24 ನ್ಯೂಸ್ನ ಯೂಟ್ಯೂಬ್ ಚಾನೆಲ್ನಲ್ಲಿ ಸೆಪ್ಟೆಂಬರ್ 23, 2019 ರಂದು ಅಪ್ಲೋಡ್ ಮಾಡಿದ ವೀಡಿಯೊವನ್ನು ಕೆಳಗೆ ನೋಡಬಹುದು.
ಆದ್ದರಿಂದ ಈ ವೀಡಿಯೊ ಒಂದು ವರ್ಷಕ್ಕಿಂತ ಹಳೆಯದಾಗಿದೆ ಮತ್ತು ನಡೆಯುತ್ತಿರುವ ರೈತರ ಪ್ರತಿಭಟನೆಗೆ ಸಂಬಂಧಿಸಿಲ್ಲ ಎಂಬುದು ಸ್ಪಷ್ಟವಾಗಿದೆ.