ನಟಿ ತಾಪ್ಸಿ ಪನ್ನು, ನಿರ್ಮಾಪಕ ಕಶ್ಯಪ್ ವಿರುದ್ಧ ತೆರಿಗೆ ವಂಚನೆ ಆರೋಪ; ಅಧಿಕಾರಿಗಳಿಂದ ಶೋಧ!
ತೆರಿಗೆ ವಂಚನೆ ಆರೋಪದ ಮೇಲೆ ಮುಂಬೈನ ಚಲನಚಿತ್ರ ನಿರ್ಮಾಪಕ ಅನುರಾಗ್ ಕಶ್ಯಪ್ ಮತ್ತು ನಟ ತಾಪ್ಸಿ ಪನ್ನು ಅವರಿಗೆ ಸೇರಿದೆ ಆಸ್ತಿ-ಕಚೇರಿಗಳ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ಶೋಧ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮುಂಬೈ ಮತ್ತು ಪುಣೆಯ ಸುಮಾರು 20 ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ನಡೆಯುತ್ತಿವೆ ಎಂದು ತಿಳಿದುಬಂದಿದೆ.
ಜೆಎನ್ಯು, ರೈತ ಹೋರಾಟ ಸೇರಿದಂತೆ ಹಲವಾರು ವಿಚಾರಗಳ ಬಗ್ಗೆ ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ಕಶ್ಯಪ್ ಮತ್ತು ತಾಪ್ಸಿ ಪನ್ನು ಅವರು ದನಿ ಎತ್ತಿದ್ದರು.
ಅಲ್ಲದೆ, ರೈತ ಹೋರಾಟವನ್ನು ಬೆಂಬಲಿಸಿದ್ದ ಅಂತಾರಾಷ್ಟ್ರೀಯ ಪಾಪ್ ತಾರೆ ರಿಹಾನ್ನಾ ಅವರ ವಿರುದ್ಧ ಬಿಜೆಪಿ ಬೆಂಬಲಿಗ ಸೆಲೆಬ್ರೆಟಿಗಳು ಕಿಡಿಕಾರಿದ್ದರು. ಈ ವೇಳೆ ಪ್ರತಿಕ್ರಿಯೆ ನೀಡಿದ್ದ ಪನ್ನು, “ಒಂದು ಟ್ವೀಟ್ ನಿಮ್ಮ ಐಕ್ಯತೆಯನ್ನು ಅಲ್ಲಾಡಿಸುವುದಾದರೆ, ಒಂದು ಜೋಕ್ ನಿಮ್ಮ ನಂಬಿಕೆಯನ್ನು ಅಲ್ಲಾಡಿಸುವುದಾದರೆ, ಒಂದು ಕಾರ್ಯಕ್ರಮ ನಿಮ್ಮ ಧಾರ್ಮಿಕ ನಂಬಿಕೆಯನ್ನು ಅಲ್ಲಾಡಿಸುವುದಾದರೆ… ಮೊದಲು ನೀವು ನಂಬಿರುವ ಮೌಲ್ಯಗಳನ್ನು ಗಟ್ಟಿಗೊಳಿಸಲು ಕೆಲಸ ಮಾಡಿ. ಬದಲಿಗೆ ಉಳಿದವರಿಗೆ ಪ್ರೊಪಗಂಡಾ ಪಾಠ ಮಾಡಲು ಬರಬೇಡಿ” ಎಂದು ಬಿಜೆಪಿ ವಿರುದ್ದ ಟ್ವೀಟ್ ಮಾಡಿದ್ದರು.
ಇದಾದ ಹಲವು ದಿನಗಳ ನಂತರ, ಇದೀಗ ತೆರಿಗೆ ಅಧಿಕಾರಿಗಳು ತಾಪ್ಸಿ ಪನ್ನು ಅವರ ಆಸ್ತಿ-ಪಾಸ್ತಿಯ ಮೇಲೆ ರೇಡ್ ಮಾಡಿದ್ದಾರೆ.
ಇದನ್ನೂ ಓದಿ: ಒಂದು ಟ್ವೀಟ್ ನಿಮ್ಮ ಐಕ್ಯತೆಯನ್ನು ಅಲ್ಲಾಡಿಸುವುದಾದರೆ; ನೀಮ್ಮ ಮೌಲ್ಯ ಪೊಳ್ಳಾಗಿದೆ: ತಾಪ್ಸಿ ಪನ್ನು