ಮಾನಹಾನಿಕರ ಸುದ್ದಿ ಪ್ರಸಾರಕ್ಕೆ ತಡೆ ಕೋರಿ 6 ಸಚಿವರಿಂದ ಕೋರ್ಟ್ ಮೊರೆ..!
ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿ ಬಿಡುಗಡೆಯಾಗುತ್ತಿದ್ದಂತೆ ಇನ್ನುಳಿದ ಸಚಿವರು ನಿದ್ದೆ ಕಳೆದುಕೊಂಡಿದ್ದಾರೆ. ಹೀಗಾಗಿ ಮಾಧ್ಯಮಗಳಲ್ಲಿ ಯಾವುದೇ ಮಾನಹಾನಿಯಾಗುವಂತಹ ವಿಡಿಯೋಗಳನ್ನು ಪ್ರಸಾರ ಮಾಡದಂತೆ ತಡೆಯಲು ಕೋರ್ಟ್ ಮೊರೆ ಹೋಗಿದ್ಧಾರೆ.
ಹೌದು.. ನಿನ್ನೆ ಮತ್ತು ಇಂದು ಆರು ಮಂದಿ ಸಚಿವರು ತೇಜೋವಧೆಯಾಗುವಂತ ಸಿಡಿಗಳನ್ನು ಮಾದ್ಯಮದಲ್ಲಿ ಪ್ರಸಾರ ಮಾಡದಂತೆ ಕೋರ್ಟ್ ಮೊರೆ ಹೋಗಿದ್ದಾರೆ. ವಿಶೇಷವೇನೆಂದರೆ ಮನವಿ ಸಲ್ಲಿಸಿದ 6 ಮಂದಿ ಸಚಿವರು ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರವನ್ನು ಬೀಳಿಸಿ ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತಂದವರಾಗಿದ್ದಾರೆ. ಹೀಗಾಗಿ ಇವರ ಬುಡಕ್ಕೂ ಸಿಡಿ ಬಾಂಬ್ ಸಿಡಿಯೋ ಆತಂಕವೋ? ಅಥವಾ ನಿಜವಾಗಲೂ ಇವರುಗಳು ರಮೇಶ್ ಜಾರಕಿಹೊಳಿಯಂತೆ ರಾಸಲೀಲೆ ಪ್ರಕರಣದಲ್ಲಿ ಭಾಗಿಯಾಗಿದ್ದಾರೋ ಎನ್ನುವ ಅನುಮಾನಗಳು ಶುರುವಾಗಿವೆ.
ಮೈತ್ರಿ ಸರ್ಕಾರ ಬಿಟ್ಟು ಬಿಜೆಪಿ ಸೇರಿದವರೇ ಈ ಆತಂಕವನ್ನು ವ್ಯಕ್ತಪಡಿಸುತ್ತಿದ್ದಾರೆ. ಆರೋಗ್ಯ ಸಚಿವ ಡಾ. ಕೆ ಸುಧಾಕರ್, ಸಹಕಾರ ಸಚಿವ ಎಸ್ ಟಿ ಸೋಮಶೇಖರ್, ಕ್ರೀಡಾ ಸಚಿವ ಕೆ.ಸಿ ನಾರಾಯಣ್, ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್, ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್,ಬಿಸಿ ಪಾಟೀಲ್ ಕೃಷಿ ಸಚಿವ, ಸಿಟಿ ಸಿವಿಲ್ ಕೋರ್ಟ್ ಗೆ ಅರ್ಜಿ ಹಾಕಿದ್ದಾರೆ.
ಮತ್ತಷ್ಟು ಸಚಿವರು ಈ ಲಿಸ್ಟ್ ಗೆ ಸೇರಿಕೊಳ್ಳುವ ಸಾಧ್ಯತೆ ಇದೆ ಎನ್ನುವ ಸುಳಿವು ಕೂಡ ಎಸ್ ಟಿ ಸೋಮಶೇಖರ್ ನೀಡಿದ್ದಾರೆ. ಇನ್ನು 2-3 ದಿನಗಳಲ್ಲಿ 15 ಮಂದಿ ಸಚಿವರು ಸೇರಿ ಸುದ್ದಿಗೋಷ್ಠಿ ಮಾಡುತ್ತೇವೆಂದು ಹೇಳಿದ್ದಾರೆ.
ಕಾಂಗ್ರೆಸ್ ನವರು ನಮ್ಮನ್ನು ಟಾರ್ಗೇಟ್ ಮಾಡುತ್ತಿದ್ದಾರೆ. ಯಾರು ಈ ವೀಡಿಯೋಗಳನ್ನು ಸಂಗ್ರಹ ಮಾಡುತ್ತಿದ್ದಾರೆ ಎನ್ನುವ ವಿಚಾರ ನಮಗೆ ತಿಳಿದಿದೆ ಎಂದು ಸಚಿವ ಎಸ್ ಟಿ ಸೋಮಶೇಖರ್ ಆತಂಕದಲ್ಲೇ ಕೋರ್ಟ್ ಮೊರೆ ಹೋಗಿದ್ದಾರೆ.
ವಿಶೇಷವೆಂದರೆ ತಪ್ಪು ಮಾಡಿದವರೇ ಅಲರ್ಟ್ ಆಗಿದ್ದಾರೆ ಎನ್ನುವ ಅನುಮಾನ ಶುರುವಾಗಿದೆ. ಬಿಜೆಪಿ ಸರ್ಕಾರ ಬಂದ ಸಮಯದ ಆಸು ಪಾಸಿನಲ್ಲೇ ಕೆಲ ಎಡವಟ್ಟುಗಳಾಗಿವೆ ಎನ್ನುವ ಅನುಮಾನ ಸಚಿವರು ವ್ಯಕ್ತಪಡಿಸಿದ್ದಾರೆ.