ಅಂಬಾನಿ ನಿವಾಸದ ಬಳಿ ಸ್ಪೋಟಕ ಪ್ರಕರಣ: ಮುಂಬೈ ಪೊಲೀಸ್ ಅಧಿಕಾರಿ ಅರೆಸ್ಟ್!
ಮುಂಬೈನಲ್ಲಿರುವ ಉದ್ಯಮಿ ಮುಕೇಶ್ ಅಂಬಾನಿ ಅವರ ನಿವಾಸದ ಬಳಿ ಸ್ಫೋಟಕ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಅಧಿಕಾರಿ ಸಚಿನ್ ವಾಜೆ ಅವರನ್ನು ರಾಷ್ಟ್ರೀಯ ತನಿಖಾ ದಳ(ಎನ್ಐಎ) ಶನಿವಾರ ರಾತ್ರಿ ಬಂಧಿಸಿದೆ.
ಅಂಬಾನಿ ನಿವಾಸದ ಬಳಿ ಸ್ಪೋಟಕ ಪತ್ತೆಯಾಗಿದ್ದ ಪ್ರಕರಣದ ತನಿಖೆಯನ್ನು ಎನ್ಐಎ ನಡೆಸುತ್ತಿದೆ. ಶನಿವಾರ ಬೆಳಗ್ಗೆ ಸಚಿನ್ ವಾಜೆ ಅವರನ್ನು ಎನ್ಐಎ ವಿಚಾರಣೆಗೆ ಕರೆದಿತ್ತು. ಸುಮಾರು 12 ಗಂಟೆಗಳ ವಿಚಾರಣೆ ನಡೆಸಿದ ನಂತರ ಸಚಿನ್ ವಾಜೆ ಅವರನ್ನು ಶನಿವಾರ ರಾತ್ರಿ ಎನ್ಐಎ ಬಂಧಿಸಿದೆ ಎಂದು ಮಾಹಿತಿ ನೀಡಿದೆ.
ಫೆ. 25ರಂದು ಮುಕೇಶ್ ಅಂಬಾನಿ ಅವರ ನಿವಾಸದ ಬಳಿ ಸ್ಫೋಟಕ ತುಂಬಿದ್ದ ವಾಹನ ಪತ್ತೆಯಾಗಿತ್ತು. ಈ ಕುರಿತು ಪ್ರಕರಣದ ತನಿಖೆಯನ್ನು ಎನ್ಐಎ ನಡೆಸುತ್ತಿದೆ. ಸ್ಫೋಟಕ ತುಂಬಿದ್ದ ವಾಹನದಲ್ಲಿ ಬೆದರಿಕೆಯ ಪತ್ರವೂ ಇತ್ತು.
ಮುಕೇಶ್ ಅವರ ನಿವಾದ ಬಳಿ ಪತ್ತೆಯಾಗಿದ್ದ ವಾಹನವು ಮನ್ಸುಖ್ ಹಿರೇನ್ ಅವರಿಗೆ ಸೇರಿದ್ದಾಗಿತ್ತು, ಈ ವಾಹನ ಕಳವಾಗಿದ್ದ ಕುರಿತು ವಾರದ ಹಿಂದೆಯಷ್ಟೇ ಹಿರೇನ್ ಅವರು ಪೊಲೀಸರಿಗೆ ದೂರು ನೀಡಿದ್ದರು. ಇದಾದ ಕೆಲವೇ ದಿನಗಳಲ್ಲಿ ಮಾರ್ಚ್ 5ರಂದು ಹಿರೇನ್ ಅವರ ಶವವು ಠಾಣೆ ಸಮೀಪ ಪತ್ತೆಯಾಗಿತ್ತು.
ಗಂಡನ ಅನುಮಾನಾಸ್ಪದ ಸಾವಿನಲ್ಲಿ ಪೊಲೀಸ್ ಅಧಿಕಾರಿ ಸಚಿನ್ ವಾಜೆ ಅವರ ಪಾತ್ರವಿದೆಯೆಂದು ಆರೋಪಿಸಿ ಹಿರೇನ್ ಅವರ ಪತ್ನಿ ಅನುಮಾನ ವ್ಯಕ್ತಪಡಿಸಿದ್ದರು. ಈ ಕಾರಣಕ್ಕಾಗಿ ಸಚಿನ್ ಅವರನ್ನು ಮುಂಬೈ ಅಪರಾಧ ತನಿಖಾ ದಳದಿಂದ ಹೊರಗಿಡಲಾಗಿತ್ತು.
ಇದನ್ನೂ ಓದಿ: ಗಡಿ ವಿವಾದ: ಬೆಳಗಾವಿಗೆ ಮಹಾರಾಷ್ಟ್ರದ ಸರ್ವಪಕ್ಷಗಳು ಭೇಟಿ ನೀಡಲು ಶಿವಸೇನಾ ಕರೆ!