ಇನ್ನೂ 40 ದಿನ ಜನರು ಮನೆಯಲ್ಲಿಯೇ ಇರುವುದು ಸೂಕ್ತ: ಸಚಿವ ಸುಧಾಕರ್
ದೇಶದಲ್ಲಿ ಕೊರೊನಾ ಎರಡನೇ ಅಲೆ ಆಕ್ರಮಿಸಿಕೊಂಡಿದೆ. ಕೊರೊನಾದ ಒಂದು ಅಲೆ 90 ದಿನಗಳವರೆಗೂ ಇರಲಿದೆ. ಇದರಿಂದಾಗಿ ಎರಡನೇ ಅಲೆಯು ಇನ್ನೂ 40 ದಿನ ಇರಲಿದೆ ಎಂದು ತಜ್ಞರು ಹೇಳಿದ್ದಾರೆ. ಹೀಗಾಗಿ ಜನರು ಅನಗತ್ಯವಾಗಿ ಹೊರಬರದೇ ಮನೆಯಲ್ಲಿ ಇರುವುದು ಸೂಕ್ತ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ತಿಳಿಸಿದ್ದಾರೆ.
ಬೇರೆ ದೇಶದವರು ನಾಲ್ಕನೇ ಹಂತದಲ್ಲಿದ್ದಾರೆ. ನಾವು ಕೊರೊನಾ ಎರಡನೇ ಅಲೆಯಲ್ಲಿದ್ದೇವೆ. ಎರಡನೇ ಅಲೆಯು ಗಂಭೀರ ಸ್ವರೋಪದಲ್ಲಿದೆ. ಹಾಗಾಗಿ ಅನಗತ್ಯವಾಗಿ ಮನೆಯಿಂದ ಹೊರಗೆ ಬರೋದು ಬೇಡ. ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು ಎಂದು ಅವರು ಹೇಳಿದ್ದಾರೆ.
ಕೆಲವರಿಗೆ ರೋಗದ ಲಕ್ಷಣ ಇರಲ್ಲ. ಆದರೂ ಪಾಸಿಟಿವ್ ಬಂದಿದೆ. ಅವರು ಕೂಡಲೇ ಆಸ್ಪತ್ರೆಗೆ ಧಾವಿಸುತ್ತಿದ್ದಾರೆ. ಹೀಗಾಗಿ ಆರೋಗ್ಯ ವ್ಯವಸ್ಥೆ ಮೇಲೆ ಹೆಚ್ಚಿನ ಹೊರೆ ಆಗ್ತಿದೆ. ಯಾವ ರೋಗದ ಲಕ್ಷಣ ಇಲ್ಲದವರು ಆಸ್ಪತ್ರೆಗೆ ಬರುವುದು ಬೇಡ. ಅವರು ಮನೆಯಲ್ಲೇ ಚಿಕಿತ್ಸೆ ಪಡೆಯಿರಿ. ಅನಗತ್ಯವಾಗಿ ಆಘಾತಕ್ಕೆ ಒಳಗಾಗಬೇಡಿ. ಪಾಸಿಟಿವ್ ಬಂದ ಕೂಡಲೇ ಹೆದರಬಾರದು ಎಂದು ಅವರು ಹೇಳಿದ್ದಾರೆ.
ಇನ್ನು ಇಂದು ಸಚಿವ ಸಂಪುಟದಲ್ಲಿ ಮುಂದಿನ ಕ್ರಮದ ಬಗ್ಗೆ ಗಂಭೀರ ಚರ್ಚೆ ಆಗಲಿದೆ. ಬೆಂಗಳೂರಿನಲ್ಲಿ 20 ಸಾವಿರಕ್ಕೂ ಹೆಚ್ಚು ಸೋಂಕಿತರು ಪತ್ತೆಯಾಗುತ್ತಿದ್ದಾರೆ. ಈ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಲಿದೆ. ಇಂದು ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದರು.
Read Also: ಸಂದರ್ಶನ: ಸಲಹಾ ಸಮಿತಿ ಮಾತು ಕೇಳದೇ ಎಡವಿತು ಸರ್ಕಾರ; ತಪ್ಪೊಪ್ಪಿಕೊಂಡ ಸಚಿವ ಸುಧಾಕರ್!