ಟೌಕ್ಟೇ ಚಂಡಮಾರುತ ಎಫೆಕ್ಟ್ : ಗುಜರಾತ್ನಲ್ಲಿ 4 ಮಂದಿ ಮೃತ..!
ಗುಜರಾತ್ ನಲ್ಲಿ ಅಪಾರ ಆಸ್ತಿ ಹಾನಿ ಮಾಡಿದ ಟೌಕ್ಟೇ ಚಂಡಮಾರುತದಿಂದಾಗಿ 4 ಮಂದಿ ಮೃತಪಟ್ಟಿದ್ದಾರೆ.
ಕರ್ನಾಟಕ, ಗೋವಾ, ಕೇರಳ ಹಾಗೂ ಮಹಾರಾಷ್ಟ್ರ ಕರಾವಳಿಗೂ ಸಾಕಷ್ಟು ವಿನಾಶ ಸೃಷ್ಟಿಸಿ ಮುನ್ನುಗ್ಗಿರುವ ‘ತೌಕ್ಟೇ ಚಂಡಮಾರುತ’ ಸೋಮವಾರ ರಾತ್ರಿ 8.30ರ ಸುಮಾರಿಗೆ ಗುಜರಾತ್ ನ ಪೋರಬಂದರ್ ಹಾಗೂ ಮಹುವಾ ಕಡಲತೀರದ ನಡುವೆ ಅಪ್ಪಳಿಸಿದೆ. ಗಂಟೆಗೆ 185 ಕಿ.ಮೀ. ವೇಗದಲ್ಲಿ ಅತಿ ತೀವ್ರ ಸ್ವರೂಪದ ಚಂಡಮಾರುತ ವಾಗಿ ಭಾರಿ ಬಿರುಗಾಳಿ ಹಾಗೂ ಮಳೆಯೊಂದಿಗೆ ಚಂಡಮಾರುತ ಅಪ್ಪಳಿಸಿದ್ದು, ಬಿರುಗಾಳಿಯ ತೀವ್ರತೆ 210 ಕಿ.ಮೀ.ವರೆಗೂ ಹೆಚ್ಚಬಹುದು ಎಂದು ಹವಮಾನ ಇಲಾಖೆ ಅಂದಾಜಿಸಿದೆ. ಚಂಡಮಾರುತದಿಂದ ಕನಿಷ್ಠ ನಾಲ್ಕು ಸಾವುಗಳು ಇಲ್ಲಿಯವರೆಗೆ ಅಧಿಕೃತವಾಗಿ ದೃಢಪಟ್ಟಿದೆ.
ಅತಿ ತೀವ್ರ ಸ್ವರೂಪದ ಚಂಡಮಾರುತದ ರೂಪದಲ್ಲಿ ತೌಕ್ಟೇ ಗುಜರಾತ್ ತೀರಕ್ಕೆ ರಾತ್ರಿ ಅಪ್ಪಳಿಸಿದೆ. ಆದರೆ ಇದಕ್ಕೂ ಮುನ್ನವೇ ಅಂದರೆ, ಭಾನುವಾರ ರಾತ್ರಿಯಿಂದಲೇ 21 ಜಿಲ್ಲೆಗಳಲ್ಲಿ ಮಳೆ ಸುರಿಯುತ್ತಿದೆ. ಮುಂಜಾಗ್ರತಾ ಕ್ರಮವಾಗಿ ಗುಜರಾತ್ ಕರಾವಳಿಯ 17 ಜಿಲ್ಲೆಗಳ 1.5 ಲಕ್ಷಕ್ಕೂ ಹೆಚ್ಚು ಜನರ ಸ್ಥಳಾಂತರ ಮಾಡಲಾಗಿದೆ. ಪೋರಬಂದರ್ ಕೋವಿಡ್ ಆಸ್ಪತ್ರೆಯಲ್ಲಿ ವೆಂಟಿಲೇಟರ್ ನಲ್ಲಿದ್ದ 17 ಸೋಂಕಿತರು ಬೇರೆ ಆಸ್ಪತ್ರೆಗೆ ವರ್ಗ ಮಾಡಲಾಗಿದೆ. ಕೋವಿಡ್ ಆಸ್ಪತ್ರೆಗಳಲ್ಲಿ ನಿರಂತರ ವಿದ್ಯತ್ ಸರಬರಾಜಿಗೆ ವ್ಯವಸ್ಥೆ ಏರ್ಪಡಿಸಲಾಗಿದೆ. ರಕ್ಷಣಾ ಕಾರ್ಯಕ್ಕೆ ಎನ್ ಡಿಆರ್ ಎಫ್ ನ 41 ತುಕಡಿ, ರಾಜ್ಯ ವಿಪತ್ತು ನಿರ್ವಹಣಾ ಪಡೆಯ 10 ತಂಡ ನಿಯೋಜನೆ ಮಾಡಲಾಗಿದೆ.
ಕೇಂದ್ರದ ೆಲ್ಲ ಸಹಕಾರದ ಭರವಸೆಯನ್ನು ಮೋದಿ ನೀಡಿದ್ದಾರೆ. ಭಾರತೀಯ ಸೇನೆ 180 ತಂಡಗಳು ಹಾಗೂ 9 ಎಂಜಿನಿಯರ್ ಟಾಸ್ಕ್ ಫೋರ್ಸ್ ಪಡೆಗಳನ್ನು ಸನ್ನದ್ಧ ಸ್ಥಿತಿಯನ್ನು ಇರಿಸಿದ್ದು, ಯಾವುದೇ ಕ್ಷಣದಲ್ಲೂ ರಕ್ಷಣಾ ಕಾರ್ಯಕ್ಕೆ ಧುಮುಕಲು ಸಿದ್ಧವಾಗಿದೆ.