ಚಿತ್ರ ನಿರ್ದೇಶಕ ತಿಪಟೂರು ರಘು ನಿಧನ: ನಿರ್ದೇಶಕ ನಾಗಾಭರಣ ಸಂತಾಪ!

ಖ್ಯಾತ ಹಿರಿಯ ಚಿತ್ರ ನಿರ್ದೇಶಕ ತಿಪಟೂರು ರಘು (83) ಅವರು ಕೊರೋನ ಸೋಂಕಿನಿಂದಾಗಿ ಇಹಲೋಕ ತ್ಯಜಿಸಿದ್ದಾರೆ. ಅವರಿಗೆ ಭಾವಪೂರ್ಣ ನಮನಗಳು ಎಂದು ಚಿತ್ರನಿರ್ದೇಶಕ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಟಿ ಎಸ್ ನಾಗಾಭರಣ ಅವರು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

ಡಾ.ರಾಜ್ ಕುಮಾರ್ ಅಭಿನಯದ ನಾಗಪೂಜಾ ಸಿನಿಮಾ ಮುಖಾಂತರ ಸಹ ನಿರ್ದೇಶಕನಾಗಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದ ತಿಪಟೂರು ರಘು ಅವರು ಊರ್ವಶಿ ಚಿತ್ರವನ್ನು ನಿರ್ದೇಶನ ಮಾಡುವ ಮೂಲಕ ಪೂರ್ಣ ಪ್ರಮಾಣದ ನಿರ್ದೇಶಕರಾಗಿ ನಂತರ ಕೆಂಪು ಹೋರಿ, ಸ್ವರ್ಣ ಮಹಲ್ ರಹಸ್ಯ, ನಾಗ ಕಾಳ ಭೈರವ, ಬೆಂಕಿ ಬಿರುಗಾಳಿ, ಬೆಟ್ಟದ ಹುಲಿ, ನಾಗರಪೂಜೆ ಸೇರಿದಂತೆ 16ಕ್ಕೂ ಹೆಚ್ಚು ಉತ್ತಮ ಚಿತ್ರಗಳನ್ನು ನಿರ್ದೇಶನ ಮಾಡಿದ್ದಾರೆ. ಆ ಮೂಲಕ ಚಿತ್ರರಸಿಕರ ಮನಗೆದ್ದ ರಘು ಅವರು, 1984 ರಲ್ಲಿ ನಿರ್ದೇಶಿಸಿ ತೆರೆಕಂಡ ವಿಷ್ಣುವರ್ಧನ್ ಮತ್ತು ಶಂಕರನಾಗ್ ಅಭಿನಯದ `ಬೆಂಕಿ ಬಿರುಗಾಳಿ’ ಚಿತ್ರವನ್ನು  ಅವರ ನಿರ್ದೇಶನದ ಪ್ರಮುಖ ಚಿತ್ರವಾಗಿದೆ. ಕೆಲವು ಚಿತ್ರಗಳಲ್ಲಿ ನಟನೆಯನ್ನು ಮಾಡಿದ್ದರು ಎಂದು ಪ್ರಕಟಣೆಯಲ್ಲಿ ಸ್ಮರಿಸಿದ್ದಾರೆ.

ತಿಪಟೂರು ರಘು ಅವರು ಕಳೆದ ಕೆಲವು ತಿಂಗಳುಗಳಿಂದ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಉಸಿರಾಟದ ಸಮಸ್ಯೆಯಿಂದಾಗಿ ಬೆಳಗಿನ ಜಾವ 4.30ಕ್ಕೆ ಅವರು ನಿಧನರಾಗಿದ್ದು, ಅವರಿಗೆ ಭಾವಪೂರ್ಣ ವಿದಾಯಗಳು ಎಂದು ಶ್ರದ್ಧಾಂಜಲಿ ಸಮರ್ಪಿಸಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights