ಎಮ್ಮೆ ಖರೀದಿಸಿ ಮನೆಗೆ ತೆರಳುತ್ತಿದ್ದ ಯುವಕನನ್ನು ಥಳಿಸಿ ಹತ್ಯೆಗೈದ ಗುಂಪು; ಗೋರಕ್ಷಕರಿಂದ ಕೃತ್ಯ ಎಂದು ಸ್ಥಳೀಯರ ಆರೋಪ!
ಎಮ್ಮೆ ಖರೀದಿಸಿ ಮನೆಗೆ ಮರಳುತ್ತಿದ್ದ 24 ವರ್ಷದ ಯುವಕನನ್ನು ಗೋರಕ್ಷರ ಗುಂಪೊಂದು ಅಮಾನವೀಕವಾಗಿ ಥಳಿಸಿ, ಹತ್ಯೆಗೈದಿರುವ ಘಟನೆ ಜಮ್ಮು ಮತ್ತು ಕಾಶ್ಮೀರದ ರಜೌರಿ ಜಿಲ್ಲೆಯ ಥಾನಾಮಂಡಿ ಪ್ರದೇಶದಲ್ಲಿ ನಡೆದಿದೆ.
ಮುರಾದ್ಪುರ್ ಎಂಬಲ್ಲಿನ ನಿರ್ಜನ ಪ್ರದೇಶದಲ್ಲಿ ಮೂವರ ಮೇಲೆ ಜನರ ಗುಂಪೊಂದು ಹಲ್ಲೆ ನಡೆಸಿದ್ದು, ಯುವಕ ಐಜಾಝ್ ಡರ್ ಸಾವನ್ನಪ್ಪಿದ್ದರೆ, ಇಬ್ಬರಿಗೆ ಗಂಭೀರ ಗಾಯಗಳಾಗಿವೆ. ಘಟನೆಯ ವಿರುದ್ದ ಸ್ಥಳೀಯರು ಪ್ರತಿಭಟನೆ ನಡೆಸಿದ್ದು, ಯುವಕನ ಸಾವಿಗೆ ಗೋ ರಕ್ಷಕರೇ ಕಾರಣ ಎಂದು ದೂರಿದ್ದಾರೆ.
ಘಟನೆಯ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ನಾಲ್ಕು ಮಂದಿ ಆರೋಪಿಗಳನ್ನು ಗುರುತಿಸಿದ್ದಾರೆ. ಅವರೆಲ್ಲರೂ ತಲೆಮರೆಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಆರು ಜನರಿರುವ ಕುಟುಂಬಕ್ಕೆ ಐಜಾರ್ಝ ಡರ್ ಒಬ್ಬನೇ ಆಧಾರವಾಗಿದ್ದ, ಆತನ ತಂದೆ ಅನಾರೋಗ್ಯಕ್ಕೆ ತುತ್ತಾಗಿದ್ದಾರೆ, ಮೂವರು ಸೋದರಿಯರಿದ್ದಾರೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಘಟನೆಯಲ್ಲಿ ಗಾಯಗೊಂಡ ಇಬ್ಬರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಅವರಿಬ್ಬರ ಸ್ಥಿತಿ ಗಂಭೀರವಾಗಿದೆ. ಆರೋಪಿಗಳ ಬಂಧನಕ್ಕೆ ವಿಶೇಷ ಪೊಲೀಸ್ ತಂಡಗಳನ್ನು ರಚಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ತಪ್ಪು ಮಾಡಿದ್ದೇವೆಂದು ತಲೆ ಬೋಳಿಸಿಕೊಂಡು, ಬಿಜೆಪಿ ತೊರೆದು ಟಿಎಂಸಿ ಸೇರಿದ 200 ಕಾರ್ಯಕರ್ತರು!