ಆಮ್ಲಜನಕ ಕೊರತೆ: ಕೇಂದ್ರ ಆರೋಗ್ಯ ಸಚಿವರ ವಿರುದ್ದ ನ್ಯಾಯಾಲಯದಲ್ಲಿ ಅರ್ಜಿ!
ಕೊರೊನಾ 2ನೇ ಅಲೆಯ ಸಮಯದಲ್ಲಿ ಆಮ್ಲಜನಕ ಕೊರತೆಯಿಂದಾಗಿ ಯಾವುದೆ ಸಾವುಗಳು ಸಂಭವಿಸಿಲ್ಲ ಎಂದು ಹೇಳಿರುವ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡ್ವಿಯಾ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಕೋರಿ ಬಿಹಾರ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲಾಗಿದೆ.
ಬಿಹಾರದ ಮುಜಫರ್ಪುರದ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ (ಚೀಫ್ ಜುಡಿಷಿಯಲ್ ಮ್ಯಾಜಿಸ್ಟ್ರೇಟ್) ನ್ಯಾಯಾಲಯದಲ್ಲಿ ಸ್ಥಳೀಯ ಸಾಮಾಜಿಕ ಕಾರ್ಯಕರ್ತ ತಮನ್ನಾ ಹಶ್ಮಿ ಎಂಬುವವರು ಅರ್ಜಿ ಸಲ್ಲಿಸಿದ್ದಾರೆ.
ಹಲವು ರಾಜಕಾರಣಿಗಳ ವಿರುದ್ದ ಅರ್ಜಿಗಳನ್ನು ಸಲ್ಲಿಸುತ್ತ ಆಗಾಗ್ಗೆ ಸಿದ್ದಿಯಲ್ಲಿರುವ ಹಶ್ಮಿ, ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ರಾಜ್ಯ ಸಚಿವೆಯಾಗಿರುವ ಭಾರತಿ ಪ್ರವೀಣ್ ಪವಾರ್ ಅವರನ್ನೂ ಎಫ್ಐಆರ್ನಲ್ಲಿ ಹೆಸರಿಸಬೇಕೆಂದು ಕೋರಿದ್ದಾರೆ.
ಮಂಗಳವಾರ ರಾಜ್ಯಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಪವಾರ್, ಸ್ವತಃ ಅರ್ಹ ವೈದ್ಯರಾಗಿದ್ದು, ದೇಶದಲ್ಲಿ ಆಕ್ರಂದನಕ್ಕೆ ಕಾರಣವಾದ ಕೊರೊನಾ 2ನೇ ಅಲೆಯ ಸಂದರ್ಭದಲ್ಲಿ ಆಮ್ಲಜನಕದ ಕೊರತೆಯಿಂದಾಗಿ ಯಾವುದೇ ಸಾವುಗಳು ಸಂಭವಿಸಿಲ್ಲ. ಈ ಬಗ್ಗೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳೂ “ನಿರ್ದಿಷ್ಟವಾಗಿ ವರದಿ ಮಾಡಿಲ್ಲ” ಎಂದು ಹೇಳಿದ್ದಾರೆ.
ಹೇಳಿಕೆಯ ಪರಿಣಾಮವಾಗಿ ತಮಗೆ “ನೋವಾಗಿದೆ” ಎಂದು ಹಶ್ಮಿ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: ಕೊರೊನಾ 2ನೇ ಅಲೆಯಲ್ಲಿ ಆಕ್ಸಿಜನ್ ಕೊರತೆಯಿಂದ ಸಾವುಗಳು ಸಂಭವಿಸಿಲ್ಲವೇ? ಸುಳ್ಳು ಹೇಳಿದ ಕೇಂದ್ರ ಸರ್ಕಾರ; ಸಾಕ್ಷ್ಯಗಳು ಹೀಗಿವೆ!