ಮಹಾರಾಷ್ಟ್ರ ಮಳೆಗೆ 100 ಕ್ಕೂ ಹೆಚ್ಚು ಜನ ಸಾವು : 80,000 ಮಂದಿ ರಕ್ಷಣೆ!
ಮಹಾಷ್ಟ್ರದಲ್ಲಿ ಭಾರೀ ಮಳೆಯಿಂದಾಗಿ 100 ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು ಸುಮಾರು 80,000 ಜನರನ್ನು ರಕ್ಷಣೆ ಮಾಡಲಾಗಿದೆ.
ರಾಜ್ಯ ರಾಜಧಾನಿ ಮುಂಬೈನಿಂದ 70 ಕಿ.ಮೀ ದೂರದಲ್ಲಿರುವ ಕರಾವಳಿ ರಾಯಗಡ್ ಜಿಲ್ಲೆಯಲ್ಲಿ ಭೂಕುಸಿತದಿಂದಾಗಿ ಸಾವನನ್ಪಪ್ಪಿದ 36 ಜನರು ಸೇರಿದಂತೆ ಮಳೆ ಸಂಬಂಧಿತ ಘಟನೆಗಳಲ್ಲಿ 100 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ.
ರಾಜ್ಯದ ಹಲವಾರು ಜಿಲ್ಲೆಗಳು ಮುಖ್ಯವಾಗಿ ಕೊಂಕಣ ಪ್ರದೇಶದಲ್ಲಿ ಕಳೆದ ಕೆಲವು ದಿನಗಳಿಂದ ನಿರಂತರ ಮಳೆಯಾಗುತ್ತಿದ್ದು, ಸಾವಿರಾರು ಜನರು ಪ್ರವಾಹ ಮತ್ತು ಭೂಕುಸಿತದಲ್ಲಿ ಸಿಲುಕಿದ್ದಾರೆ. ಒಟ್ಟು 32 ಮನೆಗಳು ನಾಶವಾಗಿದ್ದು ಇನ್ನೂ 52 ಜನ ಕಾಣೆಯಾದ್ದಾರೆ.
ಇನ್ನೂ ಪಶ್ಚಿಮ ಮಹಾರಾಷ್ಟ್ರದ ಸತಾರಾ ಜಿಲ್ಲೆಯೂ ಮಳೆಯಿಂದ ಜರ್ಜರಿತವಾಗಿದೆ. ಹಲವಾರು ಜನರು ಪ್ರವಾಹದ ನೀರಿನಿಂದ ಕೊಚ್ಚಿ ಹೋಗಿದ್ದಾರೆ. ಸಾತಾರಾದಲ್ಲಿ ಸಾವಿನ ಸಂಖ್ಯೆ 27 ಕ್ಕೆರಿಕೆಯಾಗಿದೆ. ಜೊತೆಗೆ ಪೂರ್ವ ಜಿಲ್ಲೆಗಳಾದ ಗೊಂಡಿಯಾ ಮತ್ತು ಚಂದ್ರಪುರದಿಂದಲೂರ ಸಾವುನೋವುಗಳು ವರದಿಯಾಗಿವೆ.
ಪಶ್ಚಿಮ ಮಹಾರಾಷ್ಟ್ರದ ಪುಣೆ ವಿಭಾಗದ ಕೊಲ್ಹಾಪುರ ಜಿಲ್ಲೆಯ 40,000 ಕ್ಕೂ ಹೆಚ್ಚು ಜನರನ್ನು ಒಳಗೊಂಡಂತೆ ಕನಿಷ್ಠ 84,452 ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. 2019 ರಲ್ಲಿ ಸಂಭವಿಸಿದ ಪ್ರವಾಹಕ್ಕಿಂತಲೂ ಹೆಚ್ಚಿನ ಮಟ್ಟದಲ್ಲಿ ಪಂಚಗಂಗಾ ನದಿ ಹರಿಯುತ್ತಿರುವ ಕೊಲ್ಹಾಪುರದಲ್ಲಿ ಕನಿಷ್ಠ 54 ಗ್ರಾಮಗಳು ಪ್ರವಾಹದಿಂದಾಗಿ ಆವೃತವಾಗಿವೆ.
ಕೊಲ್ಹಾಪುರ, ರಾಯಗಡ್ ಜಿಲ್ಲೆಯ, ಸತಾರಾದ ಅಂಬೇಘರ್ ಮತ್ತು ಮಿರ್ಗಾಂವ್ ಗ್ರಾಮಗಳಲ್ಲಿ ಗುರುವಾರ ರಾತ್ರಿ ಭೂಕುಸಿತ ಸಂಭವಿಸಿದೆ.
ಪರಿಹಾರ ಕಾರ್ಯಗಳಿಗೆ ನೆರವಾಗಲು ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ, ರಾಜ್ಯ ವಿಪತ್ತು ಪ್ರತಿಕ್ರಿಯೆ ಪಡೆ ಮತ್ತು ಇತರ ಏಜೆನ್ಸಿಗಳ ರಕ್ಷಣಾ ತಂಡಗಳು ಈಗಾಗಲೇ ರಾಜ್ಯದಲ್ಲಿವೆ. ಭಾರತೀಯ ಸೇನೆ ಮತ್ತು ನೌಕಾಪಡೆಯ ಆರು ತಂಡಗಳು ಇಂದು ರಕ್ಷಣಾ ಕಾರ್ಯಕ್ಕೆ ಸೇರುವ ನಿರೀಕ್ಷೆಯಿದೆ.
ಸಾವನ್ನಪ್ಪಿದವರ ಕುಟುಂಬಗಳಿಗೆ ಮಹಾರಾಷ್ಟ್ರ ಸರ್ಕಾರ ತಲಾ ಐದು ಲಕ್ಷ ರೂ. ಗಾಯಾಳುಗಳಿಗೆ ಸರ್ಕಾರಿ ವೆಚ್ಚದಲ್ಲಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಕಚೇರಿಯ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಕಳೆದ ಎರಡು ದಿನಗಳಿಂದ ಭಾರಿ ಮಳೆಯಿಂದಾಗಿ ರಾಯ್ಗಡ್, ರತ್ನಾಗಿರಿ, ಪಾಲ್ಘರ್, ಥಾಣೆ, ಸಿಂಧುದುರ್ಗ್, ಕೊಲ್ಹಾಪುರ, ಸಾಂಗ್ಲಿ ಮತ್ತು ಸತಾರಾ ಜಿಲ್ಲೆಗಳಲ್ಲಿ ಭಾರಿ ಪ್ರವಾಹ ಉಂಟಾಗಿದೆ.
ಭಾರತ ಹವಾಮಾನ ಇಲಾಖೆ ಅಥವಾ ಐಎಂಡಿ ಆರು ಜಿಲ್ಲೆಗಳಿಗೆ ಈಗಾಗಲೇ ರೆಡ್ ಅಲರ್ಟ್ ನೀಡಿದ್ದು, ಈಗಾಗಲೇ ಸುರಿಯುತ್ತಿರುವ ಮಳೆಯಿಂದಾಗಿ, “ಅತಿ ಹೆಚ್ಚು” ಮಳೆಯಾಗುವ ಮುನ್ಸೂಚನೆ ಮತ್ತು ತಡೆಗಟ್ಟುವ ಕ್ರಮಗಳನ್ನು ಶಿಫಾರಸು ಮಾಡಿದೆ.