ಸ್ವಾತಂತ್ರ್ಯ ದಿನ: 2 ವರ್ಷ ಅಮೃತ ಮಹೋತ್ಸವ ಆಚರಣೆಗೆ ಮೋದಿ ಕರೆ!
75 ನೇ ಸ್ವಾತಂತ್ರ್ಯ ದಿನಾಚರಣೆಯಂದು ಕೆಂಪುಕೋಟೆಯಲ್ಲಿ ಧ್ವಜಾರೋಹಣ ಮಾಡಿದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು, ದೇಶಾದ್ಯಂತ ಎರಡು ವರ್ಷ ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಣೆಗೆ ಕರೆ ನೀಡಿದ್ದಾರೆ.
ಸ್ವಾತಂತ್ರ್ಯಕ್ಕಾಗಿ ಸುದೀರ್ಘ ಮತ್ತು ಕಠಿಣ ಹೋರಾಟವನ್ನು ನಡೆಸಿದೆ ಎಲ್ಲಾ ಹಿಂದಿನ ನಾಯಕರಿಗೆ ಪ್ರಧಾನಿ ಗೌರವ ಸಲ್ಲಿಸಿದ್ದಾರೆ. ಜವಾಗಹರ್ ಲಾಲ್ ನೆಹರೂ, ಸರ್ದಾರ್ ಪಟೇಲ್, ಬಾಬಾಸಾಹೇಬ್ ಅಂಬೇಡ್ಕರ್, ಗಾಂಧಿ, ಚಂದ್ರಶೇಖರ್ ಆಜಾದ್, ಕಿತ್ತೂರು ರಾಣಿ ಚೆನ್ನಮ್ಮ ಮುಂತಾದ ಮಹನೀಯರನ್ನು ಸ್ಮರಿಸಿದ್ದಾರೆ. ಭಾರತಕ್ಕೆ ಭವಿಷ್ಯದ ಹಾದಿಯನ್ನು ತೋರಿಸಿದ ಇವರುಗಳಿಗೆ ದೇಶವು ಋಣಿಯಾಗಿದೆ ಎಂದಿದ್ದಾರೆ.
“ನಮ್ಮ ಹಳ್ಳಿಗಳಿಗೆ 100% ರಸ್ತೆಗಳಿವೆ, ಶೇ.100 ರಷ್ಟು ಮನೆಗಳಿಗೆ ಬ್ಯಾಂಕ್ ಖಾತೆಗಳಿವೆ, ಶೇ.100 ರಷ್ಟು ಫಲಾನುಭವಿಗಳಿಗೆ ಆಯುಷ್ಮಾನ್ ಭಾರತ್ ಕಾರ್ಡ್ ಇದೆ, ಶೇ.100 ರಷ್ಟು ಅರ್ಹ ವ್ಯಕ್ತಿಗಳಿಗೆ ಉಜ್ವಲ ಅನಿಲ ಯೋಜನೆಯ ಸಂಪರ್ಕವಿದೆ” ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಇದನ್ನೂ ಓದಿ: ದೆಹಲಿ: ದಲಿತ ಬಾಲಕಿ ಮೇಲೆ ಅತ್ಯಾಚಾರ ಖಚಿತ ಪಡಿಸಲು ಪುರಾವೆಯೇ ಇಲ್ಲ: ದೆಹಲಿ ಪೊಲೀಸರು
ಉತ್ಪಾದನೆ ಮತ್ತು ಉದ್ಯೋಗವನ್ನು ಉತ್ತೇಜಿಸಲು ಸರ್ಕಾರವು 100 ಕೋಟಿ ರೂ.ಮೌಲ್ಯದ ಗತಿ ಶಕ್ತಿ ಯೋಜನೆಯನ್ನು ಆರಂಭಿಸಲಿದೆ. “ಎಲ್ಲಾ ತಯಾರಕರು ಜಾಗತಿಕ ಮಾರುಕಟ್ಟೆಯನ್ನು ಗುರಿಯಾಗಿಸಿಕೊಳ್ಳಬೇಕು. ಭಾರತವು ಜಾಗತಿಕ ಮಾರುಕಟ್ಟೆಯ ಕೇಂದ್ರವಾಗಬೇಕು” ಎಂದು ಎಂದು ಪ್ರಧಾನಿ ಹೇಳಿದ್ದಾರೆ.
ಬಾಲಕಿಯರಿಗಾಗಿ ಸೈನಿಕ ಶಾಲೆಗಳನ್ನು ತೆರೆಯಲಾಗುವುದು. 75 ವಂದೇ ಭಾರತ್ ರೈಲುಗಳು ಅಮೃತ್ ಹಬ್ಬದ 75 ವಾರಗಳಲ್ಲಿ ದೇಶದ ಮೂಲೆ ಮೂಲೆಯನ್ನು ಸಂಪರ್ಕಿಸಲಿವೆ. ಇನ್ನು ಮುಂದೆ, ಆಗಸ್ಟ್ 14 ಅನ್ನು “ವಿಭಜನೆಯ ಕರಾಳ ದಿನ” ಎಂದು ಆಚರಿಸಲಾಗುತ್ತದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಒಲಂಪಿಕ್ಸ್ ನಲ್ಲಿ ನಮಗೆ ಹೆಮ್ಮೆ ತಂದ ಕ್ರೀಡಾಪಟುಗಳು ಇಂದು ನಮ್ಮ ನಡುವೆ ಇದ್ದಾರೆ. ಅವರ ಸಾಧನೆಯನ್ನು ಶ್ಲಾಘಿಸುವಂತೆ ನಾನು ರಾಷ್ಟ್ರವನ್ನು ಒತ್ತಾಯಿಸುತ್ತೇನೆ. ಅವರು ನಮ್ಮ ಹೃದಯವನ್ನು ಗೆಲ್ಲುವುದಲ್ಲದೆ ಭವಿಷ್ಯದ ಪೀಳಿಗೆಗೂ ಸ್ಫೂರ್ತಿ ನೀಡಿದ್ದಾರೆ” ಎಂದು ಹೇಳಿದ್ದಾರೆ.
“ಮುಂದಿನ 25 ವರ್ಷಗಳಲ್ಲಿ ಭಾರತದಲ್ಲಿ ಸ್ವಾತಂತ್ರ್ಯ ಶತಮಾನೋತ್ಸವ ಆಚರಿಸಲಾಗುತ್ತದೆ. ಅಲ್ಲಿಯವರೆಗೆ ನಮ್ಮ ಗುರಿ ಭಾರತದ ನಿರ್ಮಾಣ ಆಗಿರಬೇಕು. ಯಾವ ರಾಷ್ಟ್ರಕ್ಕೂ ನಾವು ಕಡಿಮೆ ಇಲ್ಲ ಎನ್ನುವಂತೆ ಬೆಳೆಯಬೇಕು. ನಮ್ಮ ಎಲ್ಲಾ ಗುರಿಗಳ ಸಾಧನೆಗೆ ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್ ಮತ್ತು ಸಬ್ ಕಾ ಪ್ರಯಾಸ್ ಬಹಳ ಮುಖ್ಯವಾಗಿದೆ” ಎಂದರು.
ರಾಷ್ಟ್ರೀಯ ಹೈಡ್ರೋಜನ್ ಮಿಷನ್ ಘೋಷಣೆ. ನಾವು ಭಾರತವನ್ನು ಹಸಿರು ಜಲಜನಕದ ಉತ್ಪಾದನೆ ಮತ್ತು ರಫ್ತು ಮಾಡುವ ಕೇಂದ್ರವನ್ನಾಗಿಸಬೇಕು. ಈಶಾನ್ಯ ಭಾಗ, ಹಿಮಾಲಯ ಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಲಡಾಖ್, ಕರಾವಳಿ ಪ್ರದೇಶ ಮತ್ತು ಬುಡಕಟ್ಟು ಪ್ರದೇಶಗಳು ಭವಿಷ್ಯದಲ್ಲಿ ಭಾರತದ ಅಭಿವೃದ್ಧಿಗೆ ಅಡಿಪಾಯಗಳಾಗಲಿವೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಗಡಿ ನಿರ್ಣಯದ ಆಯೋಗವನ್ನು ರಚಿಸಲಾಗಿದೆ ಎಂದು ಹೇಳಿದ್ದಾರೆ.
ದೇಶದಲ್ಲಿ 54 ಕೋಟಿ ಜನರು ಲಸಿಕೆ ಪಡೆದಿದ್ದಾರೆ. ಎಲ್ಲಾ ಪ್ರಯತ್ನಗಳ ಹೊರತಾಗಿಯೂ ನಾವು ಅನೇಕ ಜನರನ್ನು ಉಳಿಸಲು ಸಾಧ್ಯವಾಗಲಿಲ್ಲ. ಅನೇಕ ಮಕ್ಕಳು ತಮ್ಮ ಪೋಷಕರನ್ನು ಕಳೆದುಕೊಂಡಿದ್ದಾರೆ ಎಂದಿದ್ದಾರೆ.
ಇದನ್ನೂ ಓದಿ: ಸುಳ್ಳು ಲೆಕ್ಕ: ಮೋದಿ ಸರ್ಕಾರದಿಂದ 4 ಲಕ್ಷ ಕೋಟಿಗಳ ಬೃಹತ್ ದೇಶದ್ರೋಹೀ ಭ್ರಷ್ಟಾಚಾರ?