ಘೋಸಿ ಸಂಸದ ಅತುಲ್ ರಾಯ್ ಮೇಲೆ ಅತ್ಯಾಚಾರ ಆರೋಪ ಮಾಡಿದ ಯುವತಿ ಸಾವು!
ಸುಪ್ರೀಂ ಕೋರ್ಟ್ ಗೇಟ್ ಬಳಿ ಬೆಂಕಿ ಹಚ್ಚಿಕೊಂಡು ಘೋಸಿ ಸಂಸದ ಅತುಲ್ ರಾಯ್ ಮೇಲೆ ಅತ್ಯಾಚಾರ ಆರೋಪ ಮಾಡಿದ ಯುವತಿ ಸಾವನ್ನಪ್ಪಿದ್ದಾಳೆ.
ಕಳೆದ ವಾರ ಸುಪ್ರೀಂಕೋರ್ಟ್ ಹೊರಗೆ ತನ್ನ ಸ್ನೇಹಿತನೊಂದಿಗೆ ದೇಹಕ್ಕೆ ಬೆಂಕಿ ಹಚ್ಚಿಕೊಂಡ 24 ವರ್ಷದ ಯುವತಿ ಸುಟ್ಟ ಗಾಯಗಳಿಂದ ಸಾವನ್ನಪ್ಪಿದ್ದಾಳೆ. ಮೃತ ಯುವತಿ ಉತ್ತರ ಪ್ರದೇಶದ ಗಾಜಿಪುರ ಜಿಲ್ಲೆಯ ವಿದ್ಯಾರ್ಥಿನಿ. ಆಗಸ್ಟ್ 16 ರಂದು ತನ್ನ 27 ವರ್ಷದ ಸ್ನೇಹಿತನೊಂದಿಗೆ ದೆಹಲಿಗೆ ಬಂದಿದ್ದು ಇಬ್ಬರು ಸುಪ್ರೀಂಕೋರ್ಟ್ ಗೇಟ್ ಹೊರಗೆ ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದರು.
ಯುವತಿಯ ದೇಹ ಶೇಕಡ 85 ರಷ್ಟು ಸುಟ್ಟಿದ್ದರೆ, 27 ವರ್ಷದ ವ್ಯಕ್ತಿಯ ದೇಗ ಶೇಕಡಾ 65 ರಷ್ಟು ಸುಟ್ಟು ಹೋಗಿತ್ತು. ಇಬ್ಬರನ್ನು ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಯುವತಿಯ ಸ್ನೇಹಿತ ಶನಿವಾರ ಸುಟ್ಟ ಗಾಯಗಳಿಂದ ಸಾವನ್ನಪ್ಪಿದ್ದರು.
ಮೇ 2019 ರಲ್ಲಿ ಯುವತಿ ವಾರಣಾಸಿಯಲ್ಲಿರುವ ತನ್ನ ನಿವಾಸದಲ್ಲಿ ತನ್ನ ಮೇಲೆ ಅತ್ಯಾಚಾರ ಎಸಗಿದನೆಂದು ಆರೋಪಿಸಿ ಘೋಸಿ ಸಂಸದ ಅತುಲ್ ರಾಯ್ ವಿರುದ್ಧ ಪ್ರಕರಣ ದಾಖಲಿಸಿದ್ದರು. ನವೆಂಬರ್ 2020 ರಲ್ಲಿ ಬಿಎಸ್ಪಿ ನಾಯಕನ ಸಹೋದರ ವಾರಣಾಸಿಯಲ್ಲಿ ಯುವತಿಯ ವಿರುದ್ಧ ನಕಲಿ ಪ್ರಕರಣ ದಾಖಲಿಸಿದ್ದಾರೆ.
ಇದಾದ ಬಳಿಕೆ ಯುವತಿ ಮತ್ತು ಆಕೆಯ ಸ್ನೇಹಿತ ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ. ಇಬ್ಬರೂ ಫೇಸ್ಬುಕ್ ಲೈವ್ ವಿಡಿಯೋ ಮಾಡಿ ಸುಪ್ರೀಕೋರ್ಟ್ ಮುಂದೆ ಆಗಸ್ಟ್ 16 ರಂದು ಬೆಂಕಿ ಹಚ್ಚಿಕೊಂಡಿದ್ದಾರೆ. ವಿಡಿಯೋದಲ್ಲಿ ಯುವತಿ ಸಂಸದರು ಮತ್ತು ಅವರ ಸಂಬಂಧಿಕರೊಂದಿಗೆ ಶಾಮೀಲಾಗಿದ್ದಾರೆ ಎಂದು ಆರೋಪಿಸಿದ್ದಾಳೆ. ಹೀಗಾಗಿ ಇಬ್ಬರೂ ಯಾವುದೇ ನ್ಯಾಯವನ್ನು ನಿರೀಕ್ಷಿಸಿಲ್ಲ ಎಂದು ಹೇಳಿದ್ದಾರೆ.
ಆಗಸ್ಟ್ 18 ರಂದು ಘಟನೆಯ ನಂತರ ಇಬ್ಬರು ವಾರಣಾಸಿ ಪೊಲೀಸರನ್ನು ಅಮಾನತು ಮಾಡಲಾಗಿದೆ. ಅಮಾನತುಗೊಂಡ ಅಧಿಕಾರಿಗಳು ವಾರಣಾಸಿ ಕಂಟೋನ್ಮೆಂಟ್ ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಆಫೀಸರ್ ರಾಕೇಶ್ ಸಿಂಗ್ ಮತ್ತು ಮಹಿಳೆಯ ವಿರುದ್ಧ ನಕಲಿ ಪ್ರಕರಣದ ತನಿಖೆ ನಡೆಸುತ್ತಿದ್ದ ಗಿರಿಜಾ ಶಂಕರ್ ಎನ್ನಲಾಗಿದೆ.