ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ ವೇ: ಬೈಕ್-ಆಟೋಗಳಿಗಿಲ್ಲ ಪ್ರವೇಶ!
ಬೆಂಗಳೂರು-ಮೈಸೂರು ನಡುವಿನ ಪ್ರಯಾಣದ ಅವಧಿಯನ್ನು ತಗ್ಗಿಸುವುದಕ್ಕಾಗಿ ಎರಡೂ ನಗರಗಳ ನಡುವಿನ ಹೆದ್ದಾರಿಯನ್ನು ದಶಪಥಗಳು ಎಕ್ಸ್ಪ್ರೆಸ್ ವೇ ಆಗಿ ಪರಿವರ್ತಿಸಲಾಗುತ್ತಿದೆ. ಆದರೆ, ಈ ಎಕ್ಸ್ಪ್ರೆಸ್ ವೇನಲ್ಲಿ ಸಣ್ಣ ವಾಹನಗಳಾದ ಬೈಕ್, ಆಟೋ ಸೇರಿದಂತೆ ಟ್ರಾಕ್ಟರ್ಗಳಂತಹ ವಾಹನಗಳಿಗೆ ಪ್ರವೇಶವನ್ನು ನಿರ್ಬಂಧಿಸಬೇಕು. ಈ ವಾಹನಗಳು ಸರ್ವೀಸ್ ರಸ್ತೆಯನ್ನು ಮಾತ್ರ ಬಳಸಬೇಕು ಎಂದು ಹೆದ್ದಾರಿ ಪ್ರಾಧಿಕಾರವು ಕೇಂದ್ರ ಸರ್ಕಾರ ಪ್ರಸ್ತಾಪ ಸಲ್ಲಿಸಿದೆ.
ಬೆಂಗಳೂರು-ಮೈಸೂರು ನಡುವೆ ಹತ್ತುಪಥಗಳು ರಸ್ತೆ ನಿರ್ಮಾಣವಾಗುತ್ತಿದೆ. ಈ ಪೈಕಿ ಆರು ಪಥಗಳು ಎಕ್ಸ್ಪ್ರೆಸ್ ವೇ ಇರಲಿದ್ದು, ರಸ್ತೆಯಲ್ಲಿ ಎರಡೂ ಬದಿಯಲ್ಲಿ ತಲಾ ಎರಡು ಪಥಗಳ ಸರ್ವೀಸ್ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ. ಆ ಸರ್ವೀಸ್ ರಸ್ತೆಗಳಲ್ಲಿ ಮಾತ್ರ ಸಣ್ಣ ವಾಹನಗಳು ಸಂಚರಿಸಬೇಕು. ಎಕ್ಸ್ಪ್ರೆಸ್ ವೇನಲ್ಲಿ ವೇಗವಾಗಿ ಚಲಿಸುವ ವಾಹನಗಳು ಮಾತ್ರ ಸಂಚರಿಬೇಕು ಎಂದು ಹೆದ್ದಾರಿ ಪ್ರಾಧಿಕಾರ ನಿರ್ಧರಿಸಿದೆ.
ಎಕ್ಸ್ಪ್ರೆಸ್ ವೇ ಮೂಲಕ ಎರಡೂ ನಗರಗಳ ನಡುನಿನ ಸಂಚಾರದ ಅವಧಿ 90 ನಿಮಿಷಕ್ಕೆ ಇಳಿಯಲಿದೆ. ಈ ರಸ್ತೆಯಲ್ಲಿ ಸಣ್ಣವಾಹನಗಳನ್ನು ನಿರ್ಬಂಧಿಸುವುದರಿಂದ ವೇಗವಾಗಿ ಚಲಿಸುವ ವಾಹನಗಳು ಸಂಚಾರಕ್ಕೆ ಯಾವುದೇ ಅಡೆತಡೆ ಇರುವುದಿಲ್ಲ ಎಂದು ಹೆದ್ದಾರಿ ಪ್ರಾಧಿಕಾರ ಹೇಳಿದೆ.
ಇಲ್ಲವಾದರೆ, ಸಣ್ಣ ವಾಹನಗಳು ಎಕ್ಸ್ಪ್ರೆಸ್ ವೇನಲ್ಲಿ ಸಂಚರಿಸಲು ಅವಕಾಶ ದೊರೆತರೆ, ವೇಗದ ವಾಹನಗಳಿಗೆ ಅಡೆತಡೆಯಾಗುತ್ತದೆ. ಇದರಿಂದ ಅಪಘಾತಗಳು ಸಂಭವಿಸುವ ಸಾಧ್ಯತೆ ಹೆಚ್ಚು. ಹೀಗಾಗಿ ಸಣ್ಣ ವಾಹನಗಳು ಸರ್ವೀಸ್ ರಸ್ತೆಯಲ್ಲಿ ಮಾತ್ರ ಸಂಚರಿಸುವಂತೆ ನಿರ್ಬಂಧಿಸಬೇಕು. ಅಲ್ಲದೆ, ಸ್ಥಳೀಯ ವಾಹನಗಳಿಗೆ ಟೋಲ್ ಸುಂಕವೂ ತಪ್ಪುತ್ತದೆ ಎಂದು ಹೆದ್ದಾರಿ ಪ್ರಾಧಿಕಾರ ಹೇಳಿದೆ.
ಪ್ರಾಧಿಕಾರದ ಈ ಪ್ರಸ್ತಾಪಕ್ಕೆ ಕೇಂದ್ರ ಒಪ್ಪಿಗೆ ನೀಡಿದರೆ, ಬೈಕ್ ಸವಾರರಿಗೆ ನಿರಾಸೆಯಾಗಲಿದೆ. ಸರ್ವೀಸ್ ರಸ್ತೆಯಲ್ಲಿ ಸಾಕಷ್ಟು ವಾಹನಗಳು ಹಾಗೂ ಕೆಲವು ಸ್ಥಳೀಯ ಲಾರಿ, ಆಟೋ, ಟ್ರಾಕ್ಟರ್ಗಳು ಸಂಚರಿಸುವುದರಿಂದ ಬೈಕ್ನಲ್ಲಿ ಹೋಗುವವರಿಗೆ ಅಡೆತೆಡೆಯಾಗಲಿದೆ. ಬೈಕ್ ಪ್ರಯಾಣದ ಅವಧಿ ಈಗಿನಂತೆಯೇ ಇರಲಿದೆ ಎಂದು ಸಾರ್ವಜನಿಕರು ಹಾಗೂ ಬೈಕ್ ಸವಾರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಚಿಂತಾಮಣಿ ಬಳಿ ಭೀಕರ ಅಪಘಾತ; ಜೀಪ್ನಲ್ಲಿ ಪ್ರಯಾಣಿಸುತ್ತಿದ್ದ 08 ಜನರ ದುರ್ಮರಣ