ಸಾರಿಗೆ ಸಚಿವ ಶ್ರೀರಾಮುಲು ಕ್ಷೇತ್ರದಲ್ಲೇ ಬಸ್ ಗಾಗಿ ಪರದಾಟ : ಕೊಪ್ಪಳದಲ್ಲೂ ಇದೇ ಪರಿಸ್ಥಿತಿ!
ಸಾರಿಗೆ ಸಚಿವ ಬಿ ಶ್ರೀರಾಮುಲು ಕ್ಷೇತ್ರದಲ್ಲಿ ಬಸ್ ಗಾಗಿ ಜನ ಪರದಾಡುವಂತ ಸ್ಥಿತಿ ನಿರ್ಮಾಣವಾಗಿದೆ. ಶ್ರೀರಾಮುಲು ಪ್ರತಿನಿಧಿಸುವ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲ್ಲುಕು ಕಣಕುಪ್ಪೆದಲ್ಲಿ ಜನ ಸಾರಿಗೆ ಬಸ್ ಇಲ್ಲದೇ ಮೂರು ನಾಲ್ಕು ಕಿ.ಮೀ ವರೆಗೂ ನಡೆದುಕೊಂಡು ಹೋಗುವ ಪರಿಸ್ಥಿತಿ ಇದೆ.
ಕೊರೊನಾದಿಂದಾಗಿ ಬಂದ್ ಆಗಿದ್ದ ಶಾಲಾ ಕಾಲೇಜುಗಳನ್ನು ತೆರೆಯಲಾಗಿದ್ದು ವಿದ್ಯಾರ್ಥಿಗಳು ಬಸ್ ಇಲ್ಲದೇ ಶಾಲಾ-ಕಾಲೇಜುಗಳಿಗೆ ನಾಲ್ಕಾರು ಕಿ.ಮೀ ನಡೆದುಕೊಂಡೇ ಹೋಗಬೇಕಾಗಿದೆ. ಸ್ವಂತ ವಾಹನ ಅಥವಾ ಸಿಕ್ಕ ಸಿಕ್ಕ ವಾಹನಗಳನ್ನು ಹತ್ತಿಕೊಂಡು ಹೋಗುವ ಸ್ಥಿತಿ ಗ್ರಾಮಸ್ಥರು ಅನುಭವಿಸುತ್ತಿದ್ದಾರೆ.
ಬಸ್ ಗಾಗಿ ಮನವಿ ಇಟ್ಟರೂ ಈವರೆಗೆ ಪ್ರಯೋಜನವಾಗಿಲ್ಲವಾದ್ರಿಂದ ಸರ್ಕಾರ, ಸಚಿವ ಹಾಗೂ ಜಿಲ್ಲಾಡಳಿತದ ವಿರುದ್ಧ ಜನ ಕಿಡಿ ಕಾರಿದ್ದಾರೆ.
ಇನ್ನೂ ಕೊಪ್ಪಳದಲ್ಲೂ ಇದೇ ಪರಿಸ್ಥಿತಿ ಇದ್ದು ಬಸ್ ಡೋರ್ ನಲ್ಲೇ ಜೋತುಬಿದ್ದು ವಿದ್ಯಾರ್ಥಿಗಳು ಭಯಾನಕ ಪ್ರಯಾಣ ಮಾಡುವುದು ಕಂಡುಬಂದಿದೆ. ಕೊಪ್ಪಳ ತಾಲೂಕಿನ ಕುಣಕೇರೆಗೆ ಒಂದೇ ಒಂದು ಕೆಎಸ್ ಆರ್ ಟಿಸಿ ಬಸ್ ಇದ್ದು ಜನ ಟಾಪ್ ಮೇಲೆ ಸಾಲದಕ್ಕೆ ಡೋರ್ ನಲ್ಲೇ ಜೋತುಬಿದ್ದು ಪ್ರಯಾಣ ಮಾಡುವ ಸ್ಥಿತಿ ಇದೆ. ಸೂಕ್ತ ಬಸ್ ವ್ಯವಸ್ಥೆ ಇಲ್ಲದೆ ಗ್ರಾಮಸ್ಥರು ಪರದಾಡುವಂತಾಗಿದೆ. ಗ್ರಾಮಾಂತರ ಮಕ್ಕಳ ಇದು ಅನಿವಾರ್ಯತೆಯಾಗಿದ್ದು ಜೀವ ಕೈಯಲ್ಲಿಡಿದುಕೊಂಡು ಶಾಲಾ-ಕಾಲೇಜಿಗೆ ಪ್ರಯಾಣ ಮಾಡುವುದು ಪ್ರತಿನಿತ್ಯ ಸಾಮಾನ್ಯವಾಗಿದೆ. ಆದರೆ ಈ ಬಗ್ಗೆ ಜಿಲ್ಲಾಡಳಿತಕ್ಕೆ ಸಚಿವರಿಗೆ ಅದೆಷ್ಟೇ ಬಾರಿ ಮನವಿ ಮಾಡಿದರೂ ಬಸ್ ವ್ಯವಸ್ಥೆಯಾಗದ ಕಾರಣ ಗ್ರಾಮಸ್ಥರು ಹಿಡಿ ಶಾಪ ಹಾಕುವಂತಾಗಿದೆ.