ಬಿಜೆಪಿಯೇ ಮನರಂಜನೆ ನೀಡುತ್ತಿರುವಾಗ ಚಿತ್ರಮಂದಿರಗಳನ್ನು ಏಕೆ ತೆರೆಯಬೇಕು: ಶಿವಸೇನೆ
ಕೊರೊನಾ ಹಾವಳಿಯ ವೇಳೆಯೂ ರಾಜ್ಯದಲ್ಲಿ ಜನರಿಗೆ ಬಿಜೆಪಿಯೇ ಮನರಂಜನೆ ನೀಡುತ್ತಿರುವಾಗ ಮನರಂಜನೆಗಾಗಿ ಚಿತ್ರಮಂದಿರಗಳನ್ನು ತೆರೆಯುವ ಅಗತ್ಯವೇನು ಎಂದು ಶಿವಸೇನೆ ಪ್ರಶ್ನಿಸಿದೆ.
ಮಹಾರಾಷ್ಟ್ರದಲ್ಲಿ ಚಿತ್ರಮಂದಿರ, ರಂಗಮಂದಿರಗಳನ್ನು ತೆರೆಯುವ ಬಗ್ಗೆ ಶಿವಸೇನೆಯ ಮುಖವಾಣಿ ಸಾಮ್ನಾದ ‘ರೋಖ್ಥೋಕ್’ ಅಂಕಣದಲ್ಲಿ ಬರೆದಿರುವ ಸಂಸದ ಸಂಜಯ್ ರಾವತ್ ಅವರು ರಾಜ್ಯದಲ್ಲಿ ಬಿಜೆಪಿಯೇ ಮನರಂಜನೆಯ ತಾಣವಾಗಿದೆ ಎಂದು ಟೀಕಿಸಿದ್ದಾರೆ.
ದೇಶದಲ್ಲಿ ಕೋವಿಡ್ ನಿರ್ಬಂಧಗಳು ಮುಂದುವರೆದಿದ್ದರೂ ರಾಜಕೀಯ ಮನರಂಜನಾ ಕಾರ್ಯಕ್ರಮಗಳು ನಡೆಯುತ್ತಿವೆ. ಎಲ್ಲೆಡೆ ಮನರಂಜನೆ ಇದೆ. ವಿರೋಧ ಪಕ್ಷಗಳ ಈ ಮನರಂಜನೆಯಲ್ಲಿ ಹಾಸ್ಯ ಮತ್ತು ಕೌತುಕವಿದೆ ಎಂದು ಅವರು ಬರೆದಿದ್ದಾರೆ.
ಬಿಜೆಪಿ ನಾಯಕ ಕಿರಿತ್ ಸೋಮಯ್ಯ ಅವರು ಪ್ರತಿದಿನ ರಾಜ್ಯದ ವಿವಿಧ ಮಂತ್ರಿಗಳ ವಿರುದ್ಧ ಆರೋಪ ಹೊರಿಸುತ್ತಾರೆ. ಬಳಿಕ ಅವರ ಕ್ಷೇತ್ರಗಳಿಗೆ ಭೇಟಿ ನೀಡುತ್ತಾರೆ. ಅವರ ಆರೋಪಗಳು ಸಾಬೂನಿನ ಗುಳ್ಳೆಗಳಂತೆ ಎಂದು ಅವರು ವ್ಯಂಗ್ಯವಾಡಿದ್ದಾರೆ.
ರಾಜ್ಯದಲ್ಲಿ ವಿರೋಧಪಕ್ಷವಾದ ಬಿಜೆಪಿ ಕೇವಲ ಕಾಮಿಡಿ ಷೋ ಆಗಿದೆ. ಇ.ಡಿ ವಿಚಾರಣೆ, ವ್ಯಕ್ತಿತ್ವದ ಹರಣ ಹೊರತುಪಡಿಸಿ ಬೇರೇನೂ ಮಾಡುತ್ತಿಲ್ಲ ಎಂದು ಟೀಕಿಸಿದ್ದಾರೆ.
ಅಕ್ಟೋಬರ್ 22ರಿಂದ ಚಿತ್ರಮಂದಿರಗಳು, ರಂಗಮಂದಿರಗಳನ್ನು ತೆರೆಯಲು ಅನುಮತಿ ನೀಡಲಾಗುವುದು ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಪ್ರಕಟಿಸಿದ್ದಾರೆ.
ಇದನ್ನೂ ಓದಿ: ಕನ್ಹಯ್ಯ ಕುಮಾರ್ ಮತ್ತು ಗುಜರಾತ್ ಶಾಸಕ ಜಿಗ್ನೇಶ್ ಮೇವಾನಿ ಕಾಂಗ್ರೆಸ್ ಸೇರುವುದಾಗಿ ಘೋಷಣೆ!