ಕಂಪನಿ ಕ್ಯಾಂಟಿನ್ನ ಊಟ ಸೇವಿಸಿ 8 ಮಹಿಳೆಯರು ಸಾವು: ಭುಗಿಲೆದ್ದ ನೌಕರರ ಆಕ್ರೋಶ
ತಮಿಳುನಾಡಿನ ಶ್ರೀಪೆರಂಬದೂರ್ ವಿಶೇಷ ಕೈಗಾರಿಕಾ ಪ್ರದೇಶದಲ್ಲಿ (SEZ) ನೆಲೆಗೊಂಡಿರುವ ಫಾಕ್ಸ್ಕಾನ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಎಂಟು ಮಹಿಳೆಯರು ಕಂಪನಿ ಕ್ಯಾಂಟಿನ್ನಲ್ಲಿ ತಯಾರಿದ್ದ ವಿಷಪೂರಿತ ಆಹಾರ ಸೇವಿಸಿದ ನಂತರ ಅನಾರೋಗ್ಯಕ್ಕೀಡಾಗಿ ದುರ್ಮರಣ ಹೊಂದಿದ್ದಾರೆ. ಸಾವಿರಾರು ಮಹಿಳೆಯರ ಆರೋಗ್ಯ ಹದಗೆಟ್ಟಿದ್ದು ಕಂಪನಿಯ ನಿರ್ಲಕ್ಷ್ಯ ವಿರೋಧಿಸಿ ಬೃಹತ್ ಪ್ರತಿಭಟನೆ ಭುಗಿಲೆದ್ದಿದೆ.
ಭೀಕರ ದುರಂತ ಸಂಭವಿಸಿದ್ದರೂ ಕಂಪನಿ ಕಾರ್ಮಿಕರ ರಕ್ಷಣೆಯಾಗಿ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿರುವ ಅಲ್ಲಿನ ಸಾವಿರಾರು ಕಾರ್ಮಿಕರು ದಿಢೀರ್ ಪ್ರತಿಭಟನೆಗಿಳಿದಿದ್ದು ಬೆಂಗಳೂರು ಹೆದ್ದಾರಿಯನ್ನು ಸಂಪೂರ್ಣ ಬಂದ್ ಮಾಡಿದ್ದಾರೆ.
ಶುಕ್ರವಾರ ರಾತ್ರಿ ಮಹಿಳೆಯರ ಸಾವು ಸಂಭವಿಸಿದ್ದು, ಇನ್ನು ಹಲವರ ಆರೋಗ್ಯ ಹದಗೆಟ್ಟಿದೆ. ಕ್ಯಾಂಟೀನ್ ನಲ್ಲಿನ ವಿಷಪೂರಿತ ಆಹಾರ ಸೇವೆನೆಯೇ ಸಾವಿಗೆ ಕಾರಣವೆಂದು ದೂರಿರುವ ಕಾರ್ಮಿಕರು ಮಧ್ಯರಾತ್ರಿಯಿಂದಲೇ ಹೋರಾಟಕ್ಕಿಳಿದಿದ್ದಾರೆ.
ಶುಕ್ರವಾರ ಕಂಪನಿಯ ಕ್ಯಾಂಟೀನ್ನಲ್ಲಿ ಆಹಾರ ಸೇವಿಸಿದ ನಂತರ 2000 ಮಹಿಳಾ ಕಾರ್ಮಿಕರ ಆರೋಗ್ಯ ಹದಗೆಟ್ಟಿದೆ ಎಂದು ಹೇಳಲಾಗುತ್ತಿದೆ. ಈ ಗಂಭೀರ ದರುಂತ ಹೊರಗೆ ಬಾರದಂತೆ ಹತ್ತಿಕ್ಕಲು ಕಂಪನಿ ಯತ್ನಿಸುತ್ತಿದೆ ಎಂದು ಟ್ವಿಟರ್ ಬಳಕೆದಾರರೊಬ್ಬರು ಆರೋಪಿಸಿದ್ದಾರೆ.
ಈ ಮಹಿಳಾ ಕಾರ್ಮಿಕರ ಸಾವಿಗೆ ಆಹಾರ ವಿಷವೇ ಕಾರಣವಾಗಿದ್ದು, ಆಡಳಿತ ಮಂಡಳಿಯ ನಿರ್ಲಕ್ಷ್ಯವೇ ಕಾರಣ ಎಂದು ಕಾರ್ಮಿಕರು ಆರೋಪಿಸಿದ್ದಾರೆ. ಕಂಪನಿಯು ಕೂಡಲೇ ಉಳಿದವರ ಆರೋಗ್ಯವನ್ನು ಕಾಪಾಡಬೇಕು, ನಿರ್ಲಕ್ಷ್ಯ ವಹಿಸಿದವರಿಗೆ ಶಿಕ್ಷೆಯಾಗಬೇಕು ಮತ್ತು ಸಾವಿಗೀಡಾವರಿಗೆ ನ್ಯಾಯ ಸಿಗಬೇಕು ಎಂದು ಆಗ್ರಹಿಸಿದ್ದಾರೆ.
ಮಧ್ಯರಾತ್ರಿ ಘಟನೆ ಬೆಳಕಿಗೆ ಬಂದ ನಂತರ, ಕಂಪನಿಯ ಕಾರ್ಮಿಕರು ಪ್ರತಿಭಟನೆ ಆರಂಭಿಸಿದ್ದಾರೆ. ಆದರೆ ಆಡಳಿತ ಮಂಡಳಿಯಿಂದ ಪ್ರತಿಕ್ರಿಯೆ ಬಾರದ ಹಿನ್ನೆಲೆಯಲ್ಲಿ ಬೆಂಗಳೂರು ಹೆದ್ದಾರಿಯನ್ನು ತಡೆಹಿಡಿಯಲಾಯಿತು ಎಂದು ಕಾರ್ಮಿಕರ ಹಕ್ಕುಗಳ ಪತ್ರಿಕೆ ವರ್ಕರ್ಸ್ ಯೂನಿಟಿ ವರದಿ ಮಾಡಿದೆ.
ಇಂತಹ ಘೋರ ದುರಂತವನ್ನು ಮಾಧ್ಯಮಗಳು ಏಕೆ ವರದಿ ಮಾಡುತ್ತಿಲ್ಲ? ಕಾರ್ಮಿಕರ ಜೀವಕ್ಕೆ ಬೆಲೆಯಿಲ್ಲವೇ? ಇಲ್ಲಿ ಮಹಿಳಾ ಕಾರ್ಮಿಕರು ಮರಣ ಹೊಂದಿದ್ದಾರೆ. ಅದರಲ್ಲಿ ಹಲವಾರು ಗರ್ಭಿಣಿಯರು ಸಹ ಇದ್ದರು. ಆದರೆ ಕಂಪನಿ ಅಮಾನಯವೀಯತೆಯಿಂದ ವರ್ತಿಸುತ್ತಿದೆ ಎಂದು ಹಲವರು ಸಾಮಾಜಿಕ ಜಾಲತಾಣಗಳಲ್ಲಿ ಕಿಡಿಕಾರಿದ್ದಾರೆ.
ಇದನ್ನೂ ಓದಿ: ಕೊರೊನಾ 2ನೇ ಅಲೆ: ಆಕ್ಸಿಜನ್ ಕೊರೆತೆಯಿಂದ ಯಾವುದೇ ಸಾವುಗಳಾಗಿಲ್ಲ: ಉತ್ತರ ಪ್ರದೇಶ ಸರ್ಕಾರ