ಮಹಾತ್ಮ ಗಾಂಧಿ ಕುರಿತು ಅವಹೇಳನಾಕಾರಿ ಹೇಳಿಕೆ: ಹಿಂದೂತ್ವವಾದಿ ಕಾಳಿಚರಣ್ ಮಹಾರಾಜ್ ವಿರುದ್ಧ ಪ್ರಕರಣ ದಾಖಲು
ಮಹಾತ್ಮ ಗಾಂಧಿಯವರ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ ಆರೋಪ ಮೇಲೆ ಹಿಂದೂ ಧಾರ್ಮಿಕ ಮುಖಂಡ ಕಾಳಿಚರಣ್ ಮಹಾರಾಜ್ ವಿರುದ್ಧ ಮಹಾರಾಷ್ಟ್ರದ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಅಕೋಲಾದ ಓಲ್ಡ್ ಸಿಟಿ ಪ್ರದೇಶದಲ್ಲಿರುವ ಶಿವಾಜಿನಗರದ ನಿವಾಸಿ ಕಾಳಿಚರಣ್ ಮಹಾರಾಜ್ ಅಲಿಯಾಸ್ ಅಭಿಜಿತ್ ಸರಾಗ್ ಅವರು ಛತ್ತೀಸ್ಗಢದ ರಾಯ್ಪುರದಲ್ಲಿ ಭಾನುವಾರ ನಡೆದ ಕಾರ್ಯಕ್ರಮವೊಂದರಲ್ಲಿ ಗಾಂಧಿ ಕುರಿತು ಅವಹೇಳನಾರಿ ಹೇಳಿಕೆಗಳನ್ನು ನೀಡಿದ್ದಾರೆ.
ಜನರ ಭಾವನೆಗಳಿಗೆ ಧಕ್ಕೆ ತಂದ ಆರೋಪದ ಮೇಲೆ ಸ್ಥಳೀಯ ಕಾಂಗ್ರೆಸ್ ಮುಖಂಡರು ಸೋಮವಾರ ರಾಯ್ಪುರದ ಸಿಟಿ ಕೊತ್ವಾಲಿ ಪೊಲೀಸ್ ಠಾಣೆಯ ಮುಂದೆ ಪ್ರತಿಭಟನೆ ನಡೆಸಿದ್ದಾರೆ.
ಸ್ಥಳೀಯ ಕಾಂಗ್ರೆಸ್ ಕಾರ್ಯಾಧ್ಯಕ್ಷ ಪ್ರಶಾಂತ್ ಗವಾಂಡೆ ನೀಡಿದ ದೂರಿನ ಆಧಾರದ ಮೇಲೆ ಭಾರತೀಯ ದಂಡ ಸಂಹಿತೆ (ಐಪಿಸಿ) 294 (ಅಶ್ಲೀಲ ಕೃತ್ಯಗಳು) ಮತ್ತು 505 (ಸಾರ್ವಜನಿಕ ಕಿಡಿಗೇಡಿತನಕ್ಕೆ ಕಾರಣವಾಗುವ ಹೇಳಿಕೆಗಳು) ಅಡಿಯಲ್ಲಿ ಕಾಳಿಚರಣ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಕೊತ್ವಾಲಿ ಪೊಲೀಸ್ ಠಾಣೆಯ ಅಧಿಕಾರಿ ತಿಳಿಸಿದ್ದಾರೆ.
ಭಾನುವಾರ ಸಂಜೆ ರಾಯ್ಪುರದಲ್ಲಿ ನಡೆದ ಎರಡು ದಿನಗಳ ‘ಧರ್ಮ ಸಂಸದ್’ (ಧಾರ್ಮಿಕ ಸಂಸತ್ತು)ನ ಸಮಾರೋಪದಲ್ಲಿ, ಕಾಳಿಚರಣ್ ಮಹಾರಾಜ್ ಅವರು ಮಹಾತ್ಮ ಗಾಂಧಿಯವರ ವಿರುದ್ಧ ನಿಂದನಾತ್ಮಕ ಪದಗಳನ್ನು ಬಳಸಿದ್ದಾರೆ ಮತ್ತು ಅವರನ್ನು ಹತ್ಯೆಗೈದ ಹಂತಕ ನಾಥುರಾಮ್ ಗೋಡ್ಸೆಯನ್ನು ಶ್ಲಾಘಿಸಿದ್ದಾರೆ.
ನಂತರ ರಾಯ್ಪುರದಲ್ಲಿ ಆತನ ವಿರುದ್ಧ ಎಫ್ಐಆರ್ ದಾಖಲಾಗಿತ್ತು.
ಅವರ ಹೇಳಿಕೆಗಳನ್ನು ಛತ್ತೀಸ್ಗಢ ಮುಖ್ಯಮಂತ್ರಿ ಭೂಪೇಶ್ ಬಾಘೆಲ್ ತೀವ್ರವಾಗಿ ಟೀಕಿಸಿದ್ದಾರೆ. ಅಲ್ಲದೆ, ಈ ವಿಷಯವು ಸೋಮವಾರ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಪ್ರತಿಧ್ವನಿಸಿದೆ.
ರಾಷ್ಟ್ರಪಿತನನ್ನು ನಿಂದಿಸುವ ಮೂಲಕ ಮತ್ತು ಸಮಾಜದಲ್ಲಿ ವಿಷವನ್ನು ಹರಡುವ ಮೂಲಕ ತನ್ನ ಉದ್ದೇಶವನ್ನು ಯಶಸ್ವಿಯಾಗಬಹುದೆಂದು “ಕಪಟರು” ಭಾವಿಸಿದರೆ, ಅದು ಅವನ ಭ್ರಮೆ ಎಂದು ಬಾಘೆಲ್ ಹೇಳಿದ್ದಾರೆ.
ಯಾರಾದರೂ ಇಂತಹ ಹೇಳಿಕೆಗಳನ್ನು ನೀಡುವ ಮೂಲಕ ಜನರನ್ನು ಪ್ರಚೋದಿಸಲು ಪ್ರಯತ್ನಿಸಿದರೆ ಕಾನೂನಿನಡಿಯಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.
ಮಹಾರಾಷ್ಟ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ನವಾಬ್ ಮಲಿಕ್ ಅವರು ರಾಜ್ಯ ವಿಧಾನಸಭೆಯಲ್ಲಿ ಈ ವಿಷಯವನ್ನು ಚರ್ಚೆಗೆ ತಂದರು ಮತ್ತು ಧಾರ್ಮಿಕ ಮುಖಂಡನ ವಿರುದ್ದ ದೇಶದ್ರೋಹದ ಪ್ರಕರಣ ದಾಖಲಿಸಿ ಬಂಧಿಸಬೇಕು ಎಂದು ಅವರು ಒತ್ತಾಯಿಸಿದರು.
“ಎಂವಿಎ ಸರ್ಕಾರವು ಕಾಳಿಚರಣ್ ಮಹಾರಾಜರ ಹೇಳಿಕೆಗಳ ಬಗ್ಗೆ ವರದಿಯನ್ನು ಕೇಳಿದೆ ಮತ್ತು ಕಠಿಣ ಕ್ರಮ ತೆಗೆದುಕೊಳ್ಳುತ್ತದೆ” ಎಂದು ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಹೇಳಿದ್ದಾರೆ.
Read Also: ಮುಸ್ಲಿಮರ ವಿರುದ್ದ ಹಿಂದೂತ್ವ ನಾಯಕಿ ದ್ವೇಷ ಭಾಷಣ: ಭಾರತದ ಉನ್ನತ ರಾಜತಾಂತ್ರಿಕರಿಗೆ ಪಾಕಿಸ್ಥಾನದಿಂದ ಸಮನ್ಸ್!