ಫ್ಯಾಕ್ಟ್ಚೆಕ್: ಹುಲಿ ದಾಳಿಗೆ ಮೈಸೂರಿನಲ್ಲಿ ವ್ಯಕ್ತಿ ಮೃತಪಟ್ಟಿದ್ದು ನಿಜವೇ?
ಮೂತ್ರ ವಿಸರ್ಜನೆಗೆಂದು ತೆರಳಿದ್ದ ಲಾರಿ ಚಾಲಕನ ಮೇಲೆ ಹುಲಿಗಳು ದಾಳಿ ನಡೆಸಿವೆ ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ವೊಂದು ವೈರಲ್ ಆಗುತ್ತಿದೆ.
ತಮಿಜಗಂ ಮತ್ತು ಕರ್ನಾಟಕ ಗಡಿಯ ಚೆಕ್ ಪೋಸ್ಟ್ (ಕೊಯಮತ್ತೂರು-ಮೈಸೂರು ಘಾಟ್ ರಸ್ತೆಯ) ಬಳಿಯ ಸತ್ಯಮಂಗಲಂ ಬನ್ನಾರಿ ಅಮ್ಮನ ದೇವಸ್ಥಾನದ ಹಿಂಭಾಗದಲ್ಲಿ ಚಾಲಕ ಮೂತ್ರ ವಿಸರ್ಜನೆಗೆಂದು ಹೋದಾಗ ಹುಲಿಗಳು ದಾಳಿ ಮಾಡಿವೆ ಎಂದು ಪ್ರತಿಪಾದಿಸಿ ಹಲವು ವಾಟ್ಸಾಪ್ ಗುಂಪುಗಳಲ್ಲಿ ಪೋಸ್ಟ್ಅನ್ನು ಹಂಚಿಕೊಳ್ಳಲಾಗುತ್ತಿದೆ.
ಈ ವೈರಲ್ ವಿಡಿಯೊವನ್ನು ಏನ್ಸುದ್ದಿ.ಕಾಂ ವಾಟ್ಸಾಪ್ಗೆ ಹಂಚಿಕೊಳ್ಳುವ ಮೂಲಕ ಪರಿಶೀಲಿಸುವಂತೆ ವಿನಂತಿಸಿದ್ದಾರೆ. ಹಾಗಿದ್ದರೆ ಈ ವೈರಲ್ ವಿಡಿಯೊದಲ್ಲಿ ಮಾಡಲಾದ ಪ್ರತಿಪಾನೆಯನ್ನು ಪರಿಶೀಲಿಸೋಣ.
ಫ್ಯಾಕ್ಟ್ಚೆಕ್:
ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಈ ಭಯಾನಕ ದೃಶ್ಯಗಳು ಕೊಯಮತ್ತೂರು-ಮೈಸೂರು ಘಾಟ್ ರಸ್ತೆಯ ಮಾರ್ಗದಲ್ಲಿ ನಡೆದಿದೆ ಎಂದು ಪ್ರತಿಪಾದಿಸಿ ಹಂಚಿಕೊಳ್ಳಲಾದ ವಿಡಿಯೊವನ್ನು ಪರಿಶೀಲಿಸಲು ಗೂಗಲ್ ಸರ್ಚ್ ಮಾಡಿದಾಗ, 29 ಜನವರಿ 2017ರಲ್ಲಿ ದಿ ಸನ್.ಕೊ ವೆಬ್ಸೈಟ್ನಲ್ಲಿ ಪ್ರಕಟವಾದ ಲೇಖನವೊಂದು ಲಭ್ಯವಾಗಿದೆ.
ಈ ಲೇಖನದ ಪ್ರಕಾರ ಚೀನಾದಲ್ಲಿ ವ್ಯಕ್ತಿಯೊಬ್ಬ ತನ್ನ ಹೆಂಡತಿ ಮತ್ತು ಮಗನೊಂದಿಗೆ ಮೃಗಾಲಯಕ್ಕೆ ಭೇಟಿ ನೀಡಿದ್ದ ವೇಳೆ ಹುಲಿಗಳಿಗೆ ಆಹಾರ ನೀಡಲು ಮುಂದಾದಾಗ ಈ ಅವಘಡ ನಡೆದಿದೆ ಎಂದು ವರದಿ ಮಾಡಿವೆ.
ಮತ್ತಷ್ಟು ಮಾಹಿತಿಗಾಗಿ ಕೀವರ್ಡ್ ಬಳಸಿ ಸರ್ಚ್ ಮಾಡಿದಾಗ ಮೆಟ್ರೋ.ಕಾಂ ಇದೇ ಘಟನೆ ಬಗ್ಗೆ ಮಾಡಿರುವ ವರದಿ ಲಭ್ಯವಾಗಿದೆ. ಪೂರ್ವ ಚೀನಾದ ನಿಂಗ್ಬೋ ಯಂಗರ್ ಮೃಗಾಲಯದೊಳಗೆ ಹುಲಿಗಳು ವ್ಯಕ್ತಿಯ ಮೇಲೆ ದಾಳಿ ಮಾಡಿದ್ದು ವ್ಯಕ್ತಿಯನ್ನು ಹುಲಿಗಳ ದಾಳಿಯಿಂದ ರಕ್ಷಿಸಲು ಮೃಗಾಲಯದ ಕೀಪರ್ಗಳು ಪಟಾಕಿ ಮತ್ತು ವಾಟರ್ ಕ್ಯಾನನ್ಗಳ ಸಿಡಿಸಿ ಹುಲಿಗಳನ್ನು ಹೆದರಿಸಲು ಪ್ರಯತ್ನಿಸಿರೂ ವ್ಯಕ್ತಿಯನ್ನು ಹುಲಿಗಳ ಬಾಯಿಂದ ಬಿಡಿಸಲಾಗಲಿಲ್ಲ ಎಂದು ವರದಿ ಮಾಡಿದೆ.
ವ್ಯಾಘ್ರಗೊಂಡ ಹುಲಿಗಳನ್ನು ಬೆದರಿಸಲು ಪಟಾಕಿ ಮತ್ತು ವಾಟರ್ ಬಾಲ್ಗಳನ್ನು ಪ್ರಯೋಗಿಸಿದರು ಯಾವುದೇ ಪ್ರಯೋಜನವಾಗಲಿಲ್ಲ. ಹುಲಿಗಳು ಅವನ ತಲೆ ಮತ್ತು ಕುತ್ತಿಗೆ ಭಾಗಕ್ಕೆ ಕಚ್ಚಿ ತೀವ್ರವಾಗಿ ಗಾಯಗೊಳಿಸಿದ್ದವು. ನಂತರ ಗಾಯಗೊಂಡ ವ್ಯಕ್ತಿ ಸಾವನ್ನಪ್ಪಿದ್ದಾನೆ ಎಂದು ಸ್ಥಳೀಯ ಸುದ್ದಿ ಮಾಧ್ಯಮಗಳು ವರದಿ ಮಾಡಿವೆ.
ಮೃಗಾಲಯದ ಪ್ರವೇಶ ಶುಲ್ಕ ಪಾವತಿಸುವುದನ್ನು ತಪ್ಪಿಸಲು ಮೃಗಾಲಯದ ಬೇಲಿ ಹಾರಿ ಹೋದಾಗ ಈ ದುರ್ಘಟನೆ ನಡೆದಿದೆ ಎಂದು ನಂತರದ ತನಿಖೆಯಿಂದ ತಿಳಿದು ಬಂದಿದ್ದು. ಭೀಕರ ದೃಶ್ಯಾವಳಿಗಳನ್ನು ಕಂಡು ಮೃಗಾಲಯಕ್ಕೆ ಬೇಟಿ ನೀಡಿದ್ದ ಆತನ ಕುಟುಂಬದವರು ಮತ್ತು ಪ್ರವಾಸಿಗರು ತೀವ್ರ ಅಘಾತಕ್ಕೆ ಒಳಗಾಗಿದ್ದರು ಎಂದು ವರದಿಯಾಗಿದೆ.
ತನ್ನ ಕುಟುಂಬ ಮತ್ತು ಸ್ನೇಹಿತರೊಂದಿಗೆ ಚೀನಾದ ಮೃಗಾಲಯಕ್ಕೆ ಬಂದಿದ್ದ 50 ವರ್ಷದ ವ್ಯಕ್ತಿಯನ್ನು ಹುಲಿಗಳು ಭಯಾನಕವಾಗಿ ಕೊಂದುಹಾಕಿವೆ. ಪ್ರವೇಶ ಶುಲ್ಕವನ್ನು ಪಾವತಿಸದೆ ಹಣವನ್ನು ಉಳಿಸಲು ಹುಚ್ಚು ಸಾಹಸ ಮಾಡಲು ಹೋಗಿ ಹುಲಿಗಳ ಬಾಯಿಗೆ ಆಹಾರವಾಗಿದ್ದಾನೆ. ಗಂಭೀರವಾಗಿ ಗಾಯಗೊಂಡಿದ್ದ ಆತನನ್ನು ತಕ್ಷಣವೇ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಏನು ಪ್ರಯೋಜನವಾಗಲಿಲ್ಲ. ಗಂಭೀರವಾದ ಗಾಯಗಳಿಂದ ವ್ಯಕ್ತಿಯು ಸಾವನ್ನಪ್ಪಿದ್ದ ಎಂದು ವರದಿಯಾಗಿದೆ.
ಒಟ್ಟಾರೆಯಾಗಿ ಹೇಳುವುದಾದರೆ, 2017ರಲ್ಲಿ ಪೂರ್ವ ಚೀನಾದ ನಿಂಗ್ಬೋ ಯಂಗರ್ ಮೃಗಾಲಯದಲ್ಲಿ ವ್ಯಕ್ತಿಯ ಮೇಲೆ ದಾಳಿ ಮಾಡಿದ ಮೂರು ಹುಲಿಗಳು ವ್ಯಕ್ತಿಯ ಕುತ್ತಿಗೆ ಮತ್ತು ತಲೆಯ ಭಾಗಕ್ಕೆ ತೀವ್ರ ಹಾನಿ ಮಾಡಿದ್ದವು. ಈ ದಾಳಿಯಲ್ಲಿ ವ್ಯಕ್ತಿಯು ಸಾನಪ್ಪಿದ್ದನು ಎಂದು ವರದಿಯಾಗಿವೆ. ಆದರೆ ಈ ದೃಶ್ಯಗಳನ್ನು ಕೊಯಮತ್ತೂರು-ಮೈಸೂರು ಘಾಟ್ ರಸ್ತೆಯ ಮಾರ್ಗದಲ್ಲಿ ನಡೆದಿದೆ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ: ಫ್ಯಾಕ್ಟ್ಚೆಕ್: ಇವರು ನಿರ್ಮಲಾ ಸೀತಾರಾಮನ್ ಅವರ ತಂದೆಯಲ್ಲ! ಮತ್ಯಾರು?