FACT CHECK | NEET ಪರೀಕ್ಷೆಯಲ್ಲಿ ಅಕ್ರಮ ಎಸಗಿದ ಆರೋಪಿಗಳು ಕಾಂಗ್ರೆಸ್ ಕಚೇರಿಯಲ್ಲಿ ಬಚ್ಚಿಟ್ಟುಕೊಂಡಿದ್ದರೆ?
NEET ಪರೀಕ್ಷಾ ಅಕ್ರಮ ರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ‘ನೀಟ್ ಪರೀಕ್ಷೆಗೆ ಸಂಬಂಧಿಸಿ ಆರು ಮಂದಿಯನ್ನು ಜಾರ್ಖಂಡ್ನಲ್ಲಿ ಬಂಧಿಸಲಾಗಿದೆ. ಇವರೆಲ್ಲರೂ ಇಲ್ಲಿನ ಕಾಂಗ್ರೆಸ್ ಕಚೇರಿಯಲ್ಲಿ ಬಚ್ಚಿಟ್ಟುಕೊಂಡಿದ್ದರು’ ಎಂದು ಆರೋಪಿಸುವ ವಿಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಪ್ರಸಾರವಾಗುತ್ತಿದೆ.
ಹಲವು ಬಿಜೆಪಿ ನಾಯಕರೂ ಈ ಆರೋಪ ಇರುವ ವಿಡಿಯೊವನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೊವನ್ನು ಹಂಚಿಕೊಂಡಿರುವ ಕೆಲವು ‘ಎಕ್ಸ್’ ಖಾತೆದಾರರು, ‘ಈ ಬಗ್ಗೆ ರಾಹುಲ್ ಬಾಬಾ ಏನೆನ್ನುತ್ತಾರೆ? ಬಿಜೆಪಿ ಹಾಗೂ ಮೋದಿ ಅವರನ್ನು ಅವಮಾನಿಸಲು ಕಾಂಗ್ರೆಸ್ ನಡೆಸಿರುವ ಸಂಚಿನ ಭಾಗವೇ ಇದು? ಇದಕ್ಕೆ ಉತ್ತರ ಹೌದು ಎನ್ನುವುದಾಗಿದೆ’ ಎಂದು ಬರೆದುಕೊಂಡಿದ್ದಾರೆ.
ಇದೇ ಪ್ರತಿಪಾದನೆಯೊಂದಿಗೆ ಹಲವಯ ವಾಟ್ಸಾಪ್ ಗ್ರೂಪ್ಗಳಲ್ಲಿ ಸಂದೇಶವನ್ನು ಹಂಚಿಕೊಳ್ಳುತ್ತಿದ್ದಾರೆ.
ಹಾಗಿದ್ದರೆ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್ಚೆಕ್ :
‘ನೀಟ್ ಪರೀಕ್ಷೆಗೆ ಸಂಬಂಧಿಸಿ ಆರು ಮಂದಿಯನ್ನು ಜಾರ್ಖಂಡ್ನಲ್ಲಿ ಬಂಧಿಸಲಾಗಿದೆ. ಇವರೆಲ್ಲರೂ ಇಲ್ಲಿನ ಕಾಂಗ್ರೆಸ್ ಕಚೇರಿಯಲ್ಲಿ ಬಚ್ಚಿಟ್ಟುಕೊಂಡಿದ್ದರು’ ಎಂದು ಆರೋಪಿಸಿ, ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್ನಲ್ಲಿ ಮಾಡಲಾಆಆಅದಿಪಾದನೆಯನ್ನು ಪರಿಶೀಲಿಸಲು ಸಂಬಂಧಿತ ಕೀವರ್ಡ್ಗಳನ್ನು ಬಳಸಿ ಸರ್ಚ್ ಮಾಡಿದಾಗ, 23 ಜೂನ್, 2024 ರಂದು ANI ಯ ಅಧಿಕೃತ X ಹ್ಯಾಂಡಲ್ನಿಂದ ಹಂಚಿಕೊಳ್ಳಲಾದ ಪೋಸ್ಟ್ವೊಂದು ಲಭ್ಯವಾಗಿದೆ.
#WATCH | Bihar: 6 accused arrested in connection with UG NEET case being taken from LNJP hospital, Patna after their medical examination.
Bihar Police arrested the accused from Jharkhand’s Deoghar on June 21. pic.twitter.com/sOmBKQUHtS
— ANI (@ANI) June 23, 2024
ದೇಶದ ಪ್ರಮುಖ ಪರೀಕ್ಷೆಗಳನ್ನು ನೋಡಿಕೊಳ್ಳುವ ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (ಎನ್ಟಿಎ) ಈಗ ತೀವ್ರ ತನಿಖೆಯನ್ನು ಎದುರಿಸುತ್ತಿದೆ. ಮೇ 5, 2024 ರಂದು ನಡೆಸಲಾದ NEET UG ಪರೀಕ್ಷೆಯು ಅದರ ಫಲಿತಾಂಶಗಳನ್ನು ಜೂನ್ 4, 2024 ರಂದು ಪ್ರಕಟಿಸಲಾಯಿತು. ಫಲಿತಾಂಶಗಳನ್ನು ಪ್ರಕಟಿಸಿದ ನಂತರ, ಅಭ್ಯರ್ಥಿಗಳು ಹಲವಾರು ಕಳವಳಗಳನ್ನು ವ್ಯಕ್ತಪಡಿಸಿದರು, NTA ಯ ಫಲಿತಾಂಶ ಮತ್ತು ಪರೀಕ್ಷೆಯ ಅಕ್ರಮಗಳ ಬಗ್ಗೆ ರಾಷ್ಟ್ರವ್ಯಾಪಿ ಪ್ರತಿಭಟನೆಗಳನ್ನು ಪ್ರೇರೇಪಿಸಿದರು, ಇದು NEET PG ಪರೀಕ್ಷೆಗಳ ಮುಂದೂಡಿಕೆಗೆ ಕಾರಣವಾಯಿತು. ನಂತರ CSIR ಮತ್ತು UGC-NET ಪರೀಕ್ಷೆಯಲ್ಲಿಯೂ ಸಹ ಅಕ್ರಮ ನಡೆದಿರುವುದು ತಿಳಿದು ಬಂದು ಪರೀಕ್ಷೆ ನಡೆದ ಮಾರನೇ ದಿನವೇ UGC-NET ಪರೀಕ್ಷೆಯನ್ನು ರದ್ದುಗೊಳಿಸಲಾಗಿದೆ.
ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ತನಿಖೆಯನ್ನು ಕೇಂದ್ರ ಸರ್ಕಾರವು ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ವರ್ಗಾಯಿಸಿದೆ. ಸಿಬಿಐ ತಂಡಗಳು ವಿವಿಧ ಸ್ಥಳಗಳಲ್ಲಿ ದಾಳಿ ನಡೆಸಿದ್ದು, ಐದು ರಾಜ್ಯಗಳಾದ್ಯಂತ 27 ವ್ಯಕ್ತಿಗಳನ್ನು ಬಂಧಿಸಲಾಗಿದೆ. ಪಾಟ್ನಾದಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ಹಿಂದಿನ ಮಾಸ್ಟರ್ ಮೈಂಡ್ ಸಂಜೀವ್ ಮುಖಿಯಾ ಅವರನ್ನು ಬಂಧಿಸಲು ಆರ್ಥಿಕ ಅಪರಾಧ ವಿಭಾಗದ ಆರು ತಂಡಗಳು ದಾಳಿ ನಡೆಸುತ್ತಿವೆ. ಜೂನ್ 23, 2024 ರಂದು, ಬಿಹಾರದ ಆರ್ಥಿಕ ಅಪರಾಧಗಳ ಘಟಕದ ಅಧಿಕಾರಿಗಳು ಜಾರ್ಖಂಡ್ನ ದಿಯೋಘರ್ನಿಂದ ಆರು ಜನರನ್ನು ಬಂಧಿಸಿ ಪಾಟ್ನಾದ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆಗಾಗಿ ಕರೆತಂದಿದ್ದ ಬಗ್ಗೆ ವರದಿಯಾಗಿದೆ.
ನೀಟ್ ಪರೀಕ್ಷೆಯ ಅಕ್ರಮಗಳ ಕುರಿತು ಬಿಹಾರದಲ್ಲಿ ದೂರು ದಾಖಲಾಗಿತ್ತು. ಈ ಬಗ್ಗೆ ತನಿಖೆ ನಡೆಸಿದ ಬಿಹಾರ ಪೊಲೀಸರು ಆರು ಮಂದಿಯನ್ನು ಜಾರ್ಖಂಡ್ನಲ್ಲಿ ಬಂಧಿಸಿದ್ದರು. ಆದರೆ, ಅವರನ್ನು ಬಂಧಿಸಿದ್ದು ಜಾರ್ಖಂಡ್ನ ದೇವಧರ್ ಜಿಲ್ಲೆಯಲ್ಲಿರುವ ಏಮ್ಸ್ ಆಸ್ಪತ್ರೆಯ ಪಕ್ಕದಲ್ಲಿರುವ ಮನೆಯೊಂದರಲ್ಲಿ. ಮನೆಯೊಂದರಿಂದಲೇ ಆರೋಪಿಗಳನ್ನು ಬಂಧಿಸಿರುವುದಾಗಿ ಬಿಹಾರ ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಆದ್ದರಿಂದ, ನೀಟ್ ಅಕ್ರಮದ ಆರೋಪಿಗಳನ್ನು ಕಾಂಗ್ರೆಸ್ ಕಚೇರಿಯಿಂದ ಬಂಧಿಸಲಾಗಿಲ್ಲ ಮತ್ತು ಆರೋಪಿಗಳು ಕಾಂಗ್ರೆಸ್ ಕಚೇರಿಯಲ್ಲಿ ಬಚ್ಚಿಟ್ಟುಕೊಂಡಿರಲಿಲ್ಲ ಎಂಬುದು ಖಚಿತವಾಗುತ್ತದೆ.
ಒಟ್ಟಾರೆಯಾಗಿ ಹೇಳುವುದಾದರೆ, ಜಾರ್ಖಂಡ್ನ ದೇವಧರ್ ಜಿಲ್ಲೆಯಲ್ಲಿರುವ ಏಮ್ಸ್ ಆಸ್ಪತ್ರೆಯ ಪಕ್ಕದಲ್ಲಿರುವ ಮನೆಯೊಂದರಲ್ಲಿಅಡಗಿ ಕುಳಿತಿದ್ದ ಆರೋಪಿಗಳನ್ನು ಬಂಧಿಸಲಾಗಿದೆ. ಆದರೆ ಇದನ್ನು ತಿರುಚಿ ನೀಟ್ ಅಕ್ರಮದ ಆರೋಪಿಗಳನ್ನು ಕಾಂಗ್ರೆಸ್ ಕಚೇರಿಯಿಂದ ಬಂಧಿಸಲಾಗಿದೆ ಎಂದು ಸುಳ್ಳು ಪ್ರತಿಪಾದನೆಯೊಂದಿಗೆ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.