ದೆಹಲಿಯಲ್ಲಿ ರೈತರ ಮೇಲೆ ಲಾಠಿಚಾರ್ಜ್ : ಶಾಂತವಾಗಿದ್ದ ಪ್ರತಿಭಟನೆ ಘರ್ಷಣೆಗೆ ತಿರುಗಿದ್ದೇಕೆ?
ದೆಹಲಿಯಲ್ಲಿ ರೈತರ ಕಹಳೆ ತಾರಕಕ್ಕೇರಿದ್ದು ಹೋರಾಟನಿರತ ರೈತರ ಮೇಲೆ ಪೊಲೀಸರು ಲಾಠಿ ಚಾರ್ಜ್ ಹಾಗೂ ಅಶ್ರುವಾಯು ಪ್ರಯೋಗ ಮಾಡಿದ್ದಾರೆ.
ಕೃಷಿ ತಿದ್ದುಪಡಿ ಕಾಯ್ದೆ ವಿರೋಧಿಸಿ ಇಂದು ರಾಷ್ಟ್ರದ ರಾಜಧಾನಿ ನವದೆಹಲಿಯಲ್ಲಿ ವಿಶೇಷವಾಗಿ ಗಣರಾಜ್ಯೋತ್ಸವದ ದಿನ ರೈತರು ಟ್ರ್ಯಾಕ್ಟರ್ ಪ್ರತಿಭಟನೆ ನಡೆಸುತ್ತಿದ್ದಾರೆ. ವಿವಿಧ ಗಡಿ ಭಾಗಗಳಿಂದ ಆಗಮಿಸುವ ರೈತರನ್ನು ತಡೆಯಲು ಪೊಲೀಸರು ಅಶ್ರುವಾಯು ಸಿಡಿಸಿ ಲಾಠಿಚಾರ್ಜ್ ಮಾಡಿದ್ದಾರೆ.
ಸುಮಾರು 45 ಸಾವಿರ ಜನ ಟ್ರ್ಯಾಕ್ಟರ್ ರ್ಯಾಲಿಯಲ್ಲಿ ಭಾಗಿಯಾಗಿದ್ದಾರೆ. ರೈತರನ್ನು ದೆಹಲಿ ಪ್ರವೇಶಿಸದಂತೆ ತಡೆಯಲು ಬ್ಯಾರಿಕೇಡ್ ಗಳನ್ನು ಹಾಕಲಾಗಿದೆ. ಆದರೆ ಅದೆಲ್ಲವನ್ನು ತಳ್ಳಿ ರೈತರು ದೆಹಲಿಗೆ ಆಗಮಿಸುತ್ತಿದ್ದಾರೆ.
ಕೇವಲ ಟ್ರ್ಯಾಕ್ಟರ್ ಅಲ್ಲ ತಮ್ಮ ದಾರಿ ಸುಗಮವಾಗಲು ಕ್ರೇನ್, ಟ್ರಕ್ ಹಾಗೂ ಜೆಸಿಬಿಯನ್ನು ರೈತರು ಹೋರಾಟದಲ್ಲಿ ತೆಗೆದುಕೊಂಡು ಬಂದಿದ್ದಾರೆ. ಇವುಗಳಿಂದ ಬ್ಯಾರಿಕೇಡ್ ತೆಗೆಯಲು ಮುಂದಾದಾಗ ಗಾಜಿಪುರದಲ್ಲಿ ಪೊಲೀಸರು ಅಶ್ರುವಾಯು ಸಿಡಿಸಿದ್ದಾರೆ. ರೈತರ ಮೇಲೆ ಗಾಜಿಪುರ ಸಿಂಧು ಗಡಿಯ ಬಳಿ ರೈತರ ಮೇಲೆ ಲಾಠಿ ಚಾರ್ಜ್ ಕೂಡ ಮಾಡಲಾಗುತ್ತಿದೆ. ಹೀಗಾಗಿ ಬ್ಯಾರಿಕೇಡ್ ತಳ್ಳಿ ರೈತರು ಮುನ್ನುಗ್ಗುತ್ತಿದ್ದಾರೆ.
ದೆಹಲಿಯ ರಾಜಪಥ್ ದಲ್ಲಿ ನಡೆಯುವ ಪರೇಡ್ ಮುಗಿಯುವ ಮುನ್ನವೇ ರೈತರು ಪರೇಡ್ ಆರಂಭಿಸಿಲು ಮುಂದಾಗಿದ್ದು ಪೊಲೀಸ್ ಹಾಗೂ ರೈತರ ನಡುವೆ ವಾಗ್ವಾದ ನಡೆದಿದೆ. ರೈತರು ಟ್ರ್ಯಾಕ್ಟರ್ ರ್ಯಾಲಿಯನ್ನು ಬೇಗ ಆರಂಭಿಸಲು ನಿರ್ಧರಿಸಿದ್ದರಿಂದ ಪೊಲೀಸರು ತಡೆಯಲು ಮುಂದಾಗಿದ್ದಾರೆ. ಶಾಂತಯುತವಾಗಿ ನಡೆಯಬೇಕಿದ್ದ ಟ್ರ್ಯಾಕ್ಟರ್ ಪರೇಡ್ ಘರ್ಷಣೆಗೆ ಒಳಗಾಗಿದೆ. ಆದರೆ ರೈತರ ಪರೇಡ್ ಶಾಂತಿಯುತವಾಗಿ ನಡೆಯಲು 25 ಸಾವಿರ ಸ್ವಯಂ ಸೇವಕರನ್ನು ನೇಮಿಸಲಾಗಿತ್ತು. ಆದರೂ ಪೊಲೀಸ್ ಹಾಗೂ ಪ್ರತಿಭಟನಾನಿರತ ನಡುವೆ ಘರ್ಷಣೆಯಾಗಿದೆ.