ರಾಜ್ಯ BJPಗೆ ಮತ್ತೊಂದು ಸವಾಲು: ಕೋರ್ ಕಮಿಟಿ ಪುನರ್ರಚನೆಗೆ ಪರ-ವಿರೋಧ!
ರಾಜ್ಯ ಬಿಜೆಪಿಯಲ್ಲಿ ಮತ್ತೊಂದು ಬದಲಾವಣೆಯ ಚರ್ಚೆ ಮುನ್ನೆಲೆಗೆ ಬಂದಿದೆ. ರಾಜ್ಯದಲ್ಲಿ ಪಕ್ಷದ ನಿರ್ಧಾರಗಳನ್ನು ಕೈಗೊಳ್ಳುವ ಬಿಜೆಪಿಯ ಉನ್ನತ ಸಮಿತಿ ಕೋರ್ ಕಮಿಟಿಯನ್ನು ಪುನರ್ರಚನೆ ಮಾಡಬೇಕು ಎಂಬ ಪ್ರಸ್ತಾಪಗಳು ಕೇಸರಿ ಪಕ್ಷದಲ್ಲಿ ಚರ್ಚೆಯಾಗುತ್ತಿದೆ.
ಪಕ್ಷದಲ್ಲಿ ಯಾವುದೇ ಉನ್ನತ ಸ್ಥಾನವೂ ಸಿಗದೇ, ಮಂತ್ರಿಗಿರಿಯೂ ಸಿಗದೇ ಇರುವ ಅತೃಪ್ತರು ತಮಗೆ ಕೋರ್ ಕಮಿಟಿಯಲ್ಲಾದರೂ ಸ್ಥಾನ ಸಿಗಬಹುದೇ ಎಂಬ ನಿರೀಕ್ಷೆಯಲ್ಲಿದ್ದಾರೆ. ಅದಕ್ಕೂ ಹಲವರಲ್ಲಿ ಪೈಪೋಟಿ ನಡೆಯುತ್ತಿದೆ.
ಮುಂದಿನ ದಿನಗಳಲ್ಲಿ ಪಕ್ಷದ ಸಂಘಟನೆ, ಜಿಲ್ಲಾ ಪಂಚಾಯತ್ ಮತ್ತು 2023ರ ವಿಧಾನಸಭಾ ಚುನಾವಣೆಗಾಗಿ ಪಕ್ಷವನ್ನು ಭದ್ರಗೊಳಿಸುವ ಉದ್ದೇಶದಿಂದ ಕೆಲವು ಕಳಂಕಿತ ಸದಸ್ಯರನ್ನು ಕೈಬಿಟ್ಟು ಕೋರ್ ಕಮಿಟಿಯನ್ನು ಪುನರ್ರಚನೆ ಮಾಡುವ ಅಗತ್ಯವಿದೆ ಎಂದು ಕೇಂದ್ರ ಬಿಜೆಪಿಯ ನಾಯಕರು ಅಭಿಪ್ರಾಯ ಪಟ್ಟಿದ್ದಾರೆ ಎನ್ನಲಾಗಿದೆ.
ಅಲ್ಲದೆ, ಮಾಜಿ ಕೇಂದ್ರ ಸಚಿವ ಅನಂತ್ ಕುಮಾರ್ ಅವರ ನಿಧನದ ಬಳಿಕ ಪುನರ್ರಚನೆ ಅಗತ್ಯವಿದೆ. ಆದರೆ, ಸಿಎಂ ಬಿಎಸ್ವೈ ವರ್ಚಸ್ಸಿಗೆ ತೊಡಕಾಗದಂತೆ ಜಾಗ್ರತೆಯಿಂದ ಹೆಜ್ಜೆಯಿಡಬೇಕೆಂದು ಪಕ್ಷದಲ್ಲಿ ಕೆಲವು ಭಾಗಿಸಿದ್ದಾರೆ. ಹಾಗಾಗಿ, ಎರಡು ವರ್ಷಗಳ ನಂತರ ಅಧಿಕಾರ ಹಂಚಿಕೆ ಮಾಡಬೇಕೆಂದು ನೋಡುತ್ತಿದ್ದಾರೆ ಎನ್ನಲಾಗಿದೆ.
ಆದರೆ, ಸದ್ಯಕ್ಕೆ ಕಮಿಟಿ ಪುನರ್ರಚನೆ ಮಾಡುವುದು ಯಡಿಯೂರಪ್ಪನವರಿಗೆ ಒಪ್ಪಿಗೆ ಇಲ್ಲ ಎಂದು ಹೇಳಲಾಗಿದೆ. ಆದ್ದರಿಂದ, ಬಿಜೆಪಿಯಲ್ಲಿ ಲಿಂಗಾಯತ ಮತಗಳನ್ನು ಸೆಳೆಯುವ ಸಾಮರ್ಥ್ಯವಿರುವ ಏಕೈಕ ಬಲಿಷ್ಠ ನಾಯಕ ಬಿಎಸ್ವೈ, ಹಾಗಾಗಿ ಅವರನ್ನು ಅಸಮಾಧಾನಗೊಳಿಸುವ ವಿಷಯಕ್ಕೆ ಹೈಕಮಾಂಡ್ ಸದ್ಯ ಕೈಹಾಕುವ ನಿರೀಕ್ಷೆಯಿಲ್ಲ. ಅವರ ಮಾತಿಗೆ ಮನ್ನಣೆ ಸಿಗುವ ಸಾಧ್ಯತೆಯಿದೆ.
ಕೋರ್ ಕಮಿಟಿಯ ಮರುರಚನೆ ಬಗ್ಗೆ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರ ಬಳಿ ಕೆಲವು ನಾಯಕರು ಚರ್ಚೆ ನಡೆಸಿದ್ದು ಆದರೆ ಅವರ ಕಡೆಯಿಂದ ಯಾವುದೇ ಸಕಾರಾತ್ಮಕ ಪ್ರತಿಕ್ರಿಯೆ ಸಿಕ್ಕಿಲ್ಲ ಎಂದು ಹೇಳಲಾಗುತ್ತಿದೆ.
ಕಳೆದ ಬಾರಿ 2016ರಲ್ಲಿ ಬಿಜೆಪಿ ಕೋರ್ ಕಮಿಟಿಯನ್ನು ಪುನರ್ರಚನೆ ಮಾಡಲಾಗಿತ್ತು. ಆ ವೇಳೆ, ಯಡಿಯೂರಪ್ಪನವರ ಆಪ್ತರಾದ ಶೋಭಾ ಕರಂದ್ಲಾಜೆ, ಬಸವರಾಜ್ ಬೊಮ್ಮಾಯಿ, ರವಿ ಕುಮಾರ್ ಅವರನ್ನು ಕೈ ಬಿಡಲಾಗಿತ್ತು.
ಇದನ್ನೂ ಓದಿ: ಈ ಹಳ್ಳಿಯಲ್ಲಿ BJPಗೆ ಇಲ್ಲ ಪ್ರವೇಶ: ಕೇಸರಿ ಪಡೆಗೆ ಬಾಯ್ಕಾಟ್ ಹೇಳಿದ್ದಾರೆ ಗ್ರಾಮಸ್ಥರು!