ಈ ಹಳ್ಳಿಯಲ್ಲಿ BJPಗೆ ಇಲ್ಲ ಪ್ರವೇಶ: ಕೇಸರಿ ಪಡೆಗೆ ಬಾಯ್ಕಾಟ್ ಹೇಳಿದ್ದಾರೆ ಗ್ರಾಮಸ್ಥರು!
ಕೇಂದ್ರ ಸರ್ಕಾರದ ಕೃಷಿ ನೀತಿಗಳ ವಿರುದ್ದ ನಡೆಯುತ್ತಿರುವ ರೈತರ ಪ್ರತಿಭಟನೆ ತೀವ್ರಗೊಳ್ಳುತ್ತಿದೆ. ದೇಶಾದ್ಯಂತ ರೈತರಿಗೆ ಬೆಂಬಲದ ಹೊಳೆ ಹರಿದುಬರುತ್ತಿದೆ. ಕೃಷಿ ನೀತಿಗಳನ್ನು ಬೆಂಬಲಿಸುತ್ತಿರುವ ಹಲವು ಹಳ್ಳಿಗಳು ಬಿಜೆಪಿಗೆ ಬಾಯ್ಕಾಟ್ ಹೇಳುತ್ತಿದ್ದಾರೆ. ಬಿಜೆಪಿಯೇ ಅಧಿಕಾರದಲ್ಲಿರುವ ಉತ್ತರಾಖಂಡದ ಗ್ರಾಮವೊಂದು ಬಿಜೆಪಿ ಕಾರ್ಯಕರ್ತರು ಹಾಗೂ ಮುಖಂಡರಿಗೆ ಹಳ್ಳಿಗೆ ಪ್ರವೇಶವಿಲ್ಲ ಎಂದು ಘೋಷಿಸಿದೆ.
ಕಳೆದ ವಾರ, ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರಿಗೆ ಗ್ರಾಮಕ್ಕೆ ಪ್ರವೇಶವಿಲ್ಲ ಎಂದು ಬಿಜೆಪಿ ಅಧಿಕಾರದಲ್ಲಿರುವ ಮತ್ತೊಂದು ರಾಜ್ಯ ಹರಿಯಾಣದಲ್ಲಿ 60 ಹಳ್ಳಿಗಳು ಘೋಷಿಸಿದ್ದವು. ಈ ಬಳಿಕ ಉತ್ತರಾಖಂಡದ ಉಧಾಂಸಿಂಗ್ ನಗರ ಜಿಲ್ಲೆಯ ಮಲ್ಪುರಿ ಎಂಬ ಗ್ರಾಮಸ್ಥರು ಬಿಜೆಪಿಗೆ ಪ್ರವೇಶ ನಿರ್ಬಂಧಿಸಿದ್ದಾರೆ.
ಗ್ರಾಮದ ಪ್ರವೇಶ ರಸ್ತೆಗಳಲ್ಲಿ “ರೈತ ವಿರೋಧಿ ಬಿಜೆಪಿ ಕಾರ್ಯಕರ್ತರು ಹಾಗೂ ಮುಖಂಡರಿಗೆ” ಎಚ್ಚರಿಕೆ ನೀಡುವ ಪೋಸ್ಟರ್, ಬ್ಯಾನರ್ ಹಾಗೂ ಹೋರ್ಡಿಂಗ್ಗಳು ರಾರಾಜಿಸುತ್ತಿವೆ. ಬಿಜೆಪಿಗರು ಗ್ರಾಮದ ಒಳಕ್ಕೆ ಬರುವ ಸಾಹಸಕ್ಕೆ ಕೈ ಹಾಕಿದರೆ ಅವರ “ಭದ್ರತೆ” ಗೆ ಯಾರೂ ಹೊಣೆಗಾರರಲ್ಲ ಎಂಬ ಎಚ್ಚರಿಕೆಯನ್ನೂ ಪೋಸ್ಟರ್ಗಳಲ್ಲಿ ನೀಡಲಾಗಿದೆ.
ಕೃಷಿ ನೀತಿಗಳ ವಿರುದ್ದದ ಹೋರಾಟದಲ್ಲಿ ಈಗಾಗಲೇ 70 ಮಂದಿ ರೈತರು ಪ್ರಾಣ ಕಳೆದುಕೊಂಡಿದ್ದಾರೆ. ಬಿಜೆಪಿ ನೇತೃತ್ವದ ಸರಕಾರ ಇನ್ನೂ ದಾರ್ಷ್ಟ್ಯ ನೀತಿ ಪ್ರದರ್ಶಿಸುತ್ತಿದೆ. ಬಿಜೆಪಿಯ ಯಾರನ್ನೂ ನಮ್ಮ ಗ್ರಾಮದ ಒಳಕ್ಕೆ ನಾವು ಬಿಡುವುದಿಲ್ಲ. ನಮ್ಮನ್ನು ಅವರು ಗಣನೆಗೆ ತೆಗೆದುಕೊಳ್ಳದಿದ್ದರೆ ನಾವೂ ಆ ಪಕ್ಷವನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ” ಎಂದು ಮಾಜಿ ಗ್ರಾಮ ಪ್ರಧಾನ್ ಸುಬಾ ಸಿಂಗ್ ಹೇಳುತ್ತಾರೆ.
ದೆಹಲಿ ಗಡಿಯಲ್ಲಿ ನಡೆಯುತ್ತಿರುವ ರೈತ ಪ್ರತಿಭಟನೆಯಲ್ಲಿ ಉಧಾಂಸಿಂಗ್ ನಗರ ಜಿಲ್ಲೆಯ 20 ಸಾವಿರಕ್ಕೂ ಹೆಚ್ಚು ರೈತರು ಪಾಲ್ಗೊಂಡಿದ್ದಾರೆ. ಗಣರಾಜ್ಯೋತ್ಸವ ದಿನದ ಟ್ರ್ಯಾಕ್ಟರ್ ಪರೇಡ್ನಲ್ಲಿ ಭಾಗವಹಿಸಲು ಜಿಲ್ಲೆಯ 3 ಸಾವಿರಕ್ಕೂ ಹೆಚ್ಚು ರೈತರು ತಮ್ಮ ಟ್ರ್ಯಾಕ್ಟರ್ಗಳೊಂದಿಗೆ ಈಗಾಗಲೇ ತೆರಳಿದ್ದಾರೆ ಎಂದು ಗ್ರಮಸ್ಥರು ತಿಳಿಸಿದ್ದಾರೆ.
ಇದನ್ನೂ ಓದಿ: ಕೃಷಿ ಕಾಯ್ದೆಗಳಿಗೆ ವಿರೋಧ: BJPಗೆ ಪ್ರವೇಶ ನಿಷೇಧಿಸಿದ ಹರಿಯಾಣದ 60 ಹಳ್ಳಿಗಳು!