FACT CHECK | 20ಜನರ ಡಕಾಯಿತರ ಗುಂಪೊಂದು ರಾತ್ರಿ ಹೊತ್ತು ಜನರ ಮೇಲೆ ದಾಳಿ ನಡೆಸುತ್ತಿದೆ ಎಂದು ಸುಳ್ಳು ಪೋಸ್ಟ್ ಹಂಚಿಕೆ
20 ಜನ ಹಂತಕರ ಗುಂಪೊಂದು ರಾತ್ರಿ ವೇಳೆ ದಾಳಿ ನಡೆಸಿ ಕುಟುಂಬವೊಂದನ್ನು ಬರ್ಬರವಾಗಿ ಕೊಂದು ಹಾಕಿದೆ ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮಗಳಲ್ಲಿಹಂಚಿಕೊಳ್ಳಲಾಗುತ್ತಿದೆ. ವಿಡಿಯೋದೊಂದಿಗೆ ಹಿನ್ನಲೆ ಧ್ವನಿಯನ್ನು ಸೇರಿಸಿ ಸಾರ್ವಜನಿಕರು ರಾತ್ರಿ ಹೊತ್ತು ಹೊರಗೆ ಓಡಾಡದಂತೆ ಮತ್ತು ಯಾರೇ ರಾತ್ರಿಯ ಹೊತ್ತಿನಲ್ಲಿ ಬಾಗಿಲು ತಟ್ಟಿದರೂ ತೆಗೆಯದಂತೆ ಈ ಅಡಿಯೋದಲ್ಲಿ ಸೂಚಿಸಲಾಗಿದೆ.
ಈ ವೈರಲ್ ವಿಡಿಯೋ ಮತ್ತು ಆಡಿಯೋವನ್ನು ಹಲವು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಪೋಸ್ಟ್ಅನ್ನು ಹಂಚಿಕೊಂಡಿದ್ದಾರೆ. ಇದು ಸಾರ್ವಜನಿಕ ವಲಯದಲ್ಲಿ ಭೀತಿಯನ್ನು ಹುಟ್ಟು ಹಾಕಿದೆ. ಹೀಗಾಗಿ ವೈರಲ್ ವಿಡಿಯೋ ಗೊಂದಲಕ್ಕೆ ಕೂಡ ಕಾರಣವಾಗಿದೆ. ಹೀಗೆ ವಿವಿಧ ನಿರೂಪಣೆಗಳೊಂದಿಗೆ ಹಂಚಿಕೊಳ್ಳಲಾಗುತ್ತಿರುವ ವಿಡಿಯೋದಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜಸ್ನಲ್ಲಿ ಸರ್ಚ್ ಮಾಡಿದಾಗ, 24 ಜೂನ್ 2023 ರಂದು ಅದೇ ಚಿತ್ರವನ್ನು ಒಳಗೊಂಡಿರುವ ಟ್ವೀಟ್ ಲಭ್ಯವಾಗಿದೆ. ಅದರಲ್ಲಿ “ಯುಪಿಯಿಂದ ಇಂದಿನ ಅತಿದೊಡ್ಡ ಸುದ್ದಿ: ಮೈನ್ಪುರಿ ಜಿಲ್ಲೆಯ ಕಿಶಾನಿ ಪೊಲೀಸ್ ಠಾಣೆ ವ್ಯಾಪ್ತಿಯ ಗೋಕುಲ್ಪುರ ಅರ್ಸಾರಾ ಗ್ರಾಮದಲ್ಲಿ 6 ಜನರನ್ನು ಹರಿತವಾದ ಆಯುಧಗಳಿಂದ ಹತ್ಯೆ ಮಾಡಲಾಗಿದೆ. ಒಂದೇ ಕುಟುಂಬದ ಆರು ಮಂದಿ ಮಲಗಿದ್ದ ವೇಳೆ ಸಾವನ್ನಪ್ಪಿದ್ದಾರೆ. 3 ದಿನಗಳ ಹಿಂದೆ ಕುಟುಂಬದಲ್ಲಿ ಮದುವೆ ಇತ್ತು. ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.” ಎಂದಿದೆ
ಇದನ್ನೆ ಆಧಾರವಾಗಿಟ್ಟುಕೊಂಡು ಗೂಗಲ್ ಸರ್ಚ್ ಮಾಡಿದಾಗ, 24 ಜೂನ್ 2023 ರಲ್ಲಿ ಪ್ರಕಟಗೊಂಡ ವರದಿಯೊಂದು ಲಭ್ಯವಾಗಿದೆ. ಆ ವರದಿಯ ಪ್ರಕಾರ ಕಿಶಾನಿ ಪೊಲೀಸ್ ಠಾಣೆ ವ್ಯಾಪ್ತಿಯ ಗೋಕುಲ್ಪುರ ಅರ್ಸಾರಾ ಗ್ರಾಮದಲ್ಲಿ ಆರು ಜನರನ್ನು ಹರಿತವಾದ ಆಯುಧಗಳಿಂದ ಹತ್ಯೆ ಮಾಡಲಾಗಿದೆ. ಒಂದೇ ಕುಟುಂಬದ ಆರು ಮಂದಿ ಮಲಗಿದ್ದ ವೇಳೆ ಸಾವನ್ನಪ್ಪಿದ್ದಾರೆ. ಎಂದು ಉಲ್ಲೇಖಿಸಾಲಗಿದೆ.
ಇದೇ ರೀತಿ ಹಲವಾರು ಮಾಧ್ಯಮ ಸಂಸ್ಥೆಗಳು ಈ ಘಟನೆಯ ಬಗ್ಗೆ ವರದಿ ಮಾಡಿದ್ದು, ಮೈನ್ಪುರಿಯ ಕಿಶಾನಿ ಪ್ರದೇಶದಲ್ಲಿ ಒಂದೇ ಕುಟುಂಬದ ಎಂಟು ಸದಸ್ಯರ ಮೇಲೆ ದಾಳಿ ನಡೆಸಲಾಗಿದ್ದು, ಆರು ಮಂದಿ ಸಾವನ್ನಪ್ಪಿದ್ದಾರೆ ಮತ್ತು ಇಬ್ಬರು ಗಂಭೀರ ಸ್ಥಿತಿಯಲ್ಲಿದ್ದಾರೆ ಎಂದು ವರದಿ ಮಾಡಿದೆ. ದಾಳಿಕೋರ ಕುಟುಂಬದ ಸದಸ್ಯರೇ ಕೊಲೆ ಮಾಡಿದ ನಂತರ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಅಂಶ ಬೆಳಕಿಗೆ ಬಂದಿದೆ.
ಒಟ್ಟಾರೆಯಾಗಿ ಹೇಳುವುದಾದರೆ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ವಿಡಿಯೋದ ಘಟನೆ ಉತ್ತರ ಪ್ರದೇಶಕ್ಕೆ ಸಂಬಂಧಿಸಿದ್ದಾಗಿದ್ದು, ಮೈನ್ಪುರಿ ಜಿಲ್ಲೆಯ ಕಿಶಾನಿಯಲ್ಲಿ ಕುಟುಂಬದ ಸದಸ್ಯನೊಬ್ಬ ತನ್ನ ಕುಟುಂಬದ ಇತರೆ ಸದಸ್ಯರನ್ನು ಕೊಂದು ತಾನೂ ಗುಂಡು ಹಾರಿಸಿಕೊಂಡು ಸಾವನ್ನಪ್ಪಿದ್ದ ಪ್ರಕರಣವನ್ನು 20 ಜನರ ಡಕಾಯಿತರ ತಂಡ ರಾತ್ರೋ ರಾತ್ರಿ ಜನ ಸಾಮಾನ್ಯರನ್ನು ಕೊಲ್ಲುತ್ತಿದೆ ಎಂದು ಸುಳ್ಳು ಪ್ರತಿಪಾದನೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ.
ಇದನ್ನು ಓದಿರಿ : FACT CHECK | ದೋಣಿ ದುರಂತದ ವೈರಲ್ ವಿಡಿಯೋ ಗೋವಾಗೆ ಸಂಬಂಧಿಸಿದ್ದಲ್ಲ! ಮತ್ತೆಲ್ಲಿಯದ್ದು?