ರಾಜ್ಯದ ಜನರ ಪಾಲಿಗೆ ರಾಜ್ಯ ಸರ್ಕಾರ ಸತ್ತುಹೋಗಿದೆ: ಸಿದ್ದರಾಮಯ್ಯ
ಕಳೆದ ವರ್ಷ ರಾಜ್ಯದಲ್ಲಿ ಉಂಟಾದ ಭೀಕರ ಪ್ರವಾಹ ಮತ್ತು ಭೂಕುಸಿತದಿಂದಾಗಿ ಕೊಡಗು ಮತ್ತು ಉತ್ತರ ಕರ್ನಾಟಕದ ಅನೇಕ ಜಿಲ್ಲೆಗಳು ತತ್ತರಿಸಿಹೋಗಿದ್ದವು. ಅನೇಕ ಜನರು ಸಾವನ್ನಪ್ಪಿದರೆ ನೂರಾರು ಮಂದಿ ಮನೆಮಠಗಳನ್ನು ಕಳೆದುಕೊಂಡು ನಿರಾಶ್ರಿತರಾಗಿದ್ದರು. ಅಷ್ಟೆಲ್ಲಾ ಸಂಕಷ್ಟಗಳು ಎದುರಾದರೂ, ಸಾವಿರಾರು ಕೋಟಿ ನಷ್ಟವಾದರೂ ರಾಜ್ಯ ಸರ್ಕಾರ ಕೇಂದ್ರದಿಂದ ಪರಿಹಾರ ತರುವಲ್ಲಿ ವಿಫಲವಾಗಿದ್ದು, ಜನರ ಪಾಲಿಗೆ ರಾಜ್ಯ ಸರ್ಕಾರ ಸತ್ತುಹೋಗಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಅಲ್ಲದೆ, ಕಳೆದ ವರ್ಷ ಎದುರಾದ ಸಂಕಷ್ಟಕ್ಕೆ ರಾಜ್ಯ ಸರ್ಕಾರ ಸ್ಪಂಧಿಸಿಲ್ಲ, ಪರಿಹಾರ ಕಾರ್ಯಗಳನ್ನು ವ್ಯವಸ್ಥಿತವಾಗಿ ಎಲ್ಲರಿಗೂ ಒದಗಿಸಿಲ್ಲ ಎಂಬ ಆರೋಪಗಳು ರಾಜ್ಯಾದ್ಯಂತ ಕೇಳಿಬಂದಿವೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
‘ನಾವು ಹೇಳಿದರೆ ರಾಜಕೀಯ ಎನ್ನುತ್ತೀರಿ. ಪತ್ರಿಕಾ ವರದಿಗಳನ್ನಾದರೂ ಒಪ್ಪಿಕೊಳ್ತೀರಾ? ಕಳೆದ ವರ್ಷ ಅತಿವೃಷ್ಟಿಯಿಂದ ನಲುಗಿಹೋದ 22 ಜಿಲ್ಲೆಗಳ ಸಂತ್ರಸ್ತರ ಪಾಲಿಗೆ ನಿಮ್ಮ ಸರ್ಕಾರ ಸತ್ತುಹೋಗಿದೆ. ಅವರ ಬಾಯಿಯಿಂದಲೇ ಕೇಳಿ, ಹೃದಯ ಇದ್ದರೆ ಅವರ ಕಷ್ಟಗಳಿಗೆ ಸ್ಪಂದಿಸಿ ಪುಣ್ಯ ಕಟ್ಕೊಳ್ಳಿ. ಕಳೆದ ವರ್ಷದ ಅತಿವೃಷ್ಟಿಗೆ ಸಿಎಂ ಕೇಳಿದ್ದು ರೂ.35,160 ಕೋಟಿ, ಪ್ರಧಾನಿ ಕೊಟ್ಟಿದ್ದು ರೂ.1869 ಕೋಟಿ ಎಂದು ಸಿದ್ದರಾಮಯ್ಯ’ ಟ್ವೀಟ್ ಮಾಡಿದ್ದಾರೆ.
ಶೆಡ್ಗಳಲ್ಲಿ ನರಳುತ್ತಿರುವ ಸಂತ್ರಸ್ತರು, ಕುಸಿದ ಮನೆಗಳು, ಹಾಳಾದ ರಸ್ತೆಗಳು, ಮುರಿದ ಸೇತುವೆಗಳು. ಎಲ್ಲವೂ ಬಿಜೆಪಿ ಸರ್ಕಾರದ ವರ್ಷದ ಸಂಭ್ರಮವನ್ನು ಅಣಕಿಸುವಂತೆ ಹಾಗೆಯೇ ಇದೆ, ಕಣ್ಬಿಟ್ಟು ನೋಡಿ ಎಂದು ರಾಜ್ಯ ಸರ್ಕಾರವನ್ನು ಸಿದ್ದರಾಮಯ್ಯ ಟೀಕಿಸಿದ್ದಾರೆ.
Read Also: ಭಯಾನಕ ಅತ್ಯಾಚಾರ : 13ರ ಬಾಲಕಿಯ ಕಣ್ಣು ತೆಗೆದು, ನಾಲಿಗೆ ಕತ್ತರಿಸಿ ಅತ್ಯಾಚಾರ, ಕೊಲೆ…