2001ರ ಡಿ.13 ದೇಶದ ಪಾಲಿಗೆ ಕರಾಳ ದಿನ : ಸಂಸತ್ ದಾಳಿ ಹುತಾತ್ಮರಿಗೆ ನಮನ…
ಡಿಸೆಂಬರ್ ೩ ಬಂದ್ರೆ ಸಾಕು ಆ ಕರಾಳ ದಿನ ನೆನಪಾಗದೇ ಇರದು ಅದೊಂದು ದುರ್ಘಟನೆ ನೆನೆದು ಉಗ್ರರ ಕೃತ್ಯವನ್ನ ಖಂಡಿಸಿ ನಮ್ಮ ಸೈನಿಕರನ್ನ ನೆನೆಸದೇ ಇರಲಾಗದ ದಿನ ಇದು. ಉಗ್ರರ ದಾಳಿ ಎಂದೆಂದಿಗೂ ಮರೆಯೋದಕ್ಕೆ ಆಗದೇ ಇರುವಂತಹ ಘಟನೆ.. ಆ ದುರ್ಘಟನೆ ನೆನೆದರೆ ಸಾಕು ನಡುಕ ಹುಟ್ಟುತ್ತದೆ. ಅಷ್ಟೊಂದು ಭಯಾನಕ ನಡುಕ ಹುಟ್ಟಿಸುವಂತೆ ಮಾಡಿದ ಘಟನೆ ಅದು. ಆ ಉಗ್ರರ ಧಾಳಿಗೆ ಅನೇಕ ಪುರುಷ ಮತ್ತು ಮಹಿಳಾ ಯೋಧರು ಹತರಾದ್ರು, ಇದೇ ದಾಳಿಯಲ್ಲಿ ಉಗ್ರರಿಗೆ ಎದೆಕೊಟ್ಟು ಹೋರಾಡಿ ಗುಂಡೇಟು ತಿಂದು ಉಗ್ರರ ಸೆದೆ ಬಡೆಯಲು ಎದೆ ಕೊಟ್ಟು ಹೋರಾಡಿದ ಯೋಧ.. ಆ ಉಗ್ರರ ದಾಳಿ ನಡೆದಿದ್ದಾದ್ರೂ ಎಲ್ಲಿ, ಆ ಯೋಧ ಯಾರು ಅಂತೀರಾ ಅದಕ್ಕುತ್ತರ ಇಲ್ಲಿದೆ ನೋಡಿ…
ಹೌದು 2001 ರ ಡಿಸೆಂಬರ್ 13 ದೇಶದ ಪಾಲಿಗೆ ಕರಾಳ ದಿನ, ಸಂಸತ್ ಭವನಕ್ಕೆ ಉಗ್ರರು ದಾಳಿ ಮಾಡಿ ನಮ್ಮ ವ್ಯವಸ್ಥೆಯನ್ನೇ ನಡುಗಿಸಿದ ದಿನ, ಅಂದು ಉಗ್ರರೊಂದಿಗೆ ಹೋರಾಡಿ, 8 ಕ್ಕೂ ಹೆಚ್ಚು ಉಗ್ರರರನ್ನು ಸೆದೆ ಬಡಿದು, ಇಬ್ಬರನ್ನು ಜೀವಂತವಾಗಿ ವಶಕ್ಕೆ ಪಡೆದು ದೇಶದ ದೊಡ್ಡ ಅನಾಹುತವನ್ನೇ ತಪ್ಪಿಸಿದ ದಿನ. ಅಂತದ್ದರಲ್ಲಿ ತಾವು 5 ಗುಂಡುಗಳನ್ನು ತಿಂದು 94 ದಿನಗಳ ಕಾಲ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸಿ, ಬದುಕಿ ಬಂದ ಅಪ್ರತಿಮ ದೇಶ ಪ್ರೇಮಿಯ ಯಶೋಗಾಧೆ ಇದು. ಹೌದು.. ೨೦೧೯ ಡಿಸೆಂಬರ್ 13 ರಂದು ಸಂಸತ್ ಮೇಲೆ ದಾಳಿ ನಡೆದು 18 ವರ್ಷ ಪೂರ್ಣಗೊಳ್ಳುತ್ತದೆ. ಅಂದು ಸಂಸತ್ ಸೇರಿದಂತೆ ಇಡೀ ದೇಶವನ್ನೇ ಉಳಿಸಿದ ದೇಶಪ್ರೇಮಿ ಸೈನಿಕನನ್ನು ನೆನೆಪಿಸಿಕೊಳ್ಳುವುದಲ್ಲದೇ ಕಳೆದ 18 ವರ್ಷಗಳಿಂದ ಎಲೆ ಮರೆಯ ಕಾಯಿಯಂತೆ ತಾವು ಮಾಡಿದ ಸಾಧನೆ ದೊಡ್ಡದಲ್ಲ ಎಂದು ಬದುಕುತ್ತಿರುವ ವ್ಯಕ್ತಿಯನ್ನು ನಾಡಿನ ಜನತೆಗೆ ತಿಳಿಸಲು ಹೊರಟಿದೆ..
ಎಸ್.. ಈ CRFP ಯೋಧ ಮೂಲತ ಗದಗ ತಾಲೂಕಿನ ಹೊಂಬಳ ಗ್ರಾಮದ ನಿವಾಸಿಯಾದ ಶಿವಪುತ್ರಪ್ಪ ಬಾರಕೇರ್. ತಮ್ಮ ಪ್ರಾಥಮಿಕ ಶಿಕ್ಷಣವನ್ನು ಹೊಂಬಳ ಗ್ರಾಮದಲ್ಲಿ ಹಾಗೂ ಪ್ರೌಢ ಶಿಕ್ಷಣವನ್ನು ರೋಣ ತಾಲೂಕಿನ ಹೊಳೆಆಲೂರಿನಲ್ಲಿ ಪೂರ್ಣಗೊಳಿಸಿ ನಂತರ ಸಿಆರ್.ಪಿ.ಎಫ್ ನಲ್ಲಿ ಯೋಧರಾಗಿ 17 ಏಪ್ರೀಲ್ 1984 ರಲ್ಲಿ ತಮ್ಮ ಸೇವೆಯನ್ನು ಪ್ರಾರಂಭಿಸಿದರು. ಕೇರಳ, ಪಂಜಾಬ್, ಜಮ್ಮು ಕಾಶ್ಮೀರ, ದೆಹಲಿ, ನಾರ್ಥ್ ಈಸ್ಟ್ ರಾಜ್ಯಗಳಲ್ಲಿ ಮತ್ತು ಗುಜರಾತ್ ಮುಂತಾದ ಸ್ಥಳಗಳಲ್ಲಿ ಇವರು ಒಟ್ಟು 25 ವರ್ಷ 5 ತಿಂಗಳು 18 ದಿನಗಳ ಕಾಲ ದೇಶಸೇವೆಯನ್ನ ಸಲ್ಲಿಸಿದರು. 2001 ರ ಡಿಸೆಂಬರ್ 13 ರಂದು ಉಗ್ರರು ಪಾರ್ಲಿಮೆಂಟ್ ಮೇಲೆ ದಾಳಿ ಮಾಡಲು ಮುಂದಾದ ವೇಳೆಯಲ್ಲಿ ಶಿವಪುತ್ರಪ್ಪ ಅವರು ಕರ್ತವ್ಯ ಮುಗಿಸಿ ಚೆನೈ ನಿಂದ ಪಾರ್ಲಿಮೆಂಟ್ ಕರ್ತವ್ಯಕ್ಕಾಗಿ ದೆಹಲಿಯ ಪಾರ್ಲಿಮೆಂಟ್ ಗೆ ಬಂದರು ತಮ್ಮ ಶಸ್ತ್ರಾಸ್ತ್ರಗಳನ್ನು ಜಮಾ ಮಾಡಲು ಹೊರಟಿದ್ದ ಸಂದರ್ಭದಲ್ಲೇ ಉಗ್ರರು ಧಾಳಿ ನಡೆಸಿದರು. ಉಗ್ರರ ದಾಳಿಯ ಸಂದರ್ಭದಲ್ಲಿ ನಡೆದ ಘನಘೋರ ಗುಂಡಿನ ದಾಳಿಯಲ್ಲಿ ಶಿವಪುತ್ರಪ್ಪ ಸತತವಾಗಿ ಉಗ್ರರೊಂದಿಗೆ ಗುಂಡಿನ ಕಾಳಗ ನಡೆಸಿದ್ದರು. ತಮ್ಮ ಬಂದೂಕಿನಿಂದ ೧೨೦ ಗುಂಡುಗಳನ್ನು ಸಿಡಿಸಿ ಉಗ್ರರನ್ನ ಹಿಮ್ಮೆಟ್ಟಿಸಿದ್ರು. ಈ ಸಂದರ್ಭದಲ್ಲಿ 10 ಸೈನಿಕರು ಹುತಾತ್ಮರಾದರು. 8 ಜನ ಉಗ್ರರರನ್ನು ನಮ್ಮ ಸೈನಿಕರು ಸೆದೆಬಡಿದಿದ್ದರು. ಇಬ್ಬರನ್ನ ರೆಡ್ ಹ್ಯಾಂಡ್ ಆಗಿ ಹಿಡಿದುಕೊಟ್ಟಿದ್ದರು.. ಈ ವೇಳೆಯಲ್ಲಿ ಸಾರ್ವಜನಿಕರು ಸೇರಿದಂತೆ ಒಟ್ಟು 17 ಜನ್ರಿಗೆ ಗುಂಡುಗಳ ತಾಕಿತ್ತು ಎಂದು ತಮ್ಮ ಹೋರಾಟವನ್ನು ಮೆಲುಕು ಹಾಕುವ ವೇಳೆಯಲ್ಲಿ ಅವರ ಕಣ್ಣಂಚಲ್ಲಿ ನೀರಿತ್ತು..
ಪಾರ್ಲಿಮೆಂಟ್ ದಾಳಿಯಲ್ಲಿ ಶಿವಪುತ್ರಪ್ಪ ಅವರಿಗೆ ಒಟ್ಟು 5 ಗುಂಡು ಬಿದಿತ್ತು. ಉಗ್ರರರೊಂದಿಗೆ ನಿರಂತರವಾಗಿ ನಡೆದ ಹೋರಾಟದಲ್ಲಿ ಸೈನಿಕ ಶಿವಪುತ್ರಪ್ಪ ಅವರ ಬಲಗೈ, ಎಡಗಾಲು ಹಾಗೂ ಬೆನ್ನಿಗೆ ಸೇರಿದಂತೆ ಒಟ್ಟು 5 ಗುಂಡುಗಳು ಇವರಿಗೂ ತಗಲಿದ್ದು, ಗುಂಡು ತಗಲಿದ್ದರೂ ವಿಚಲಿತರಾಗದೇ ಉಗ್ರರೊಂದಿಗೆ ಹೋರಾಡಿ, ತಮ್ಮೊಟ್ಟಿದ್ದ ಸೈನಿಕರ ಜೀವ ಉಳಿಸುವುದು ಮತ್ತು ದೇಶದ ಆಡಳಿತ ಭವನಕ್ಕೆ ನುಗ್ಗಿದ್ದ ಉಗ್ರರವನ್ನು ಹೊಸಕಿ ಹಾಕಿದ್ದ ತಂಡದಲ್ಲಿ ಇವರದ್ದು ಅಪ್ರತಿಮ ಶೌರ್ಯ. 120 ಗುಂಡುಗಳನ್ನು ಫೈರಿಂಗ್ ಮಾಡಿದ್ದರೂ ತಮಗೆ ಗುಂಡು ತಗಲಿ ತೀವ್ರಗಾಯಗೊಂಡಿದ್ದ ಶಿವಪುತ್ರಪ್ಪ ಮುಂದೆ 94 ದಿನಗಳ ಕಾಲ ಸೇನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ರಜೆಯ ಮೇಲೆ ಮನೆ ಬಂದಾಗ ಪತ್ನಿ ವಿಜಯಾಗೆ ಸುದ್ದಿ ತಿಳಿದಿದೆ. ಉಗ್ರರ ದಾಳಿ ನಡೆದಿತ್ತು ಆ ವೇಳೆ ನಂಗೆ ದೇಹದಲ್ಲಿ ಬುಲೆಟ್ ಸೇರಿಕೊಂಡು ಆಸ್ಪತ್ರೆಯಲ್ಲಿ ಇದ್ದೆ ಅಂತಾ ಹೇಳಿದ್ರಂತೆ. ಇಂತಹ ದುರ್ಘಟನೆ ನನ್ನ ಪತಿಗೆ ಬಂತಲ್ಲ ಅಂತಾ ಕಣ್ಣೀರು ಸಹ ಹಾಕಿದ್ರಂತೆ. ಇನ್ನ ತಂದೆ ತಾಯಿ ಮುಂದೆ ಅತ್ರೆ ಅವರ ಮನಸ್ಸಿಗೆ ನೋವು ಆಗುತ್ತೇ ಅನ್ನೋ ಕಾರಣ ನೋವನ ನುಂಗಿಕೊಂಡಿದ್ರಂತೆ. ಶಿವಪುತ್ರಪ್ಪ ದೇಶ ಸೇವೆ ಮಾಡಿಬಂದಿದ್ರಿಂದ ಪತ್ನಿ ವಿಜಯಾಗೆ ನಾನೋಬ್ಬಳು ಯೋಧ ಪತ್ನಿ ಅನ್ನೂವ ಹೆಮ್ಮೆ ವಿಷಯ ಅಂತಿದ್ದಾರೆ.
ಅಪ್ರತಿಮ ದೇಶಪ್ರೇಮಿಯಾಗಿರುವ ಶಿವಪುತ್ರಪ್ಪ ಇಂದಿಗೂ ಮಕ್ಕಳಿಗೆ ದೇಶ ಪ್ರೇಮದ ಬಗ್ಗೆ ತಿಳಿಸುತ್ತಾರೆ. ಹಲವಾರು ಶಾಲೆಗಳಿಗೆ ತೆರಳಿ ಮಕ್ಕಳಿಗೆ ದೇಶ ಭಕ್ತಿಯ ಭಾವನೆಯನ್ನು ಬಿತ್ತಿದ್ದಾರೆ ಇದೆಲ್ಲಕ್ಕಿಂತಲೂ ಮುಖ್ಯವಾಗಿ ತಮ್ಮ ಸೇವಾ ಅವಧಿಯಲ್ಲಿ ಇಷ್ಟೊಂದು ಗಂಭೀರವಾಗಿ ಗಾಯಗೊಂಡಿದ್ದರೂ ಇದುವರೆಗೆ ಅವರು 26 ಬಾರಿ ರಕ್ತದಾನ ಮಾಡುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ. ಈಗಲೂ ಯಾವುದೇ ಸಂದರ್ಭದಲ್ಲಿ ರಕ್ತದ ಅವಶ್ಯಕತೆ ಬಿದ್ದರೆ ನನಗೆ ಕರೆ ಮಾಡಿ ಎಂದು ಹೇಳುವ ದೇಶಭಕ್ತ ಹಾಗೂ ಸಮಾಜಮುಖಿ ಸೈನಿಕನಿಗೆ ಒಂದು ಸಲಾಂ…