ಪೆಟ್ರೋಲ್ ಬಂಕ್ ದರೋಡೆ ಪ್ರಕರಣ: ಆರೋಪಿಗಳ ಬಂಧನ – ಮತ್ತೋರ್ವನಿಗಾಗಿ ಹುಡುಕಾಟ
ಪೆಟ್ರೋಲ್ ಬಂಕಿನಲ್ಲಿ ದರೋಡೆ ನಡೆಸಿದ್ದ ಪ್ರಕರಣ ಭೇದಿಸಿರುವ ಕೊಡಗು ಜಿಲ್ಲೆ ವಿರಾಜಪೇಟೆ ತಾಲೂಕಿನ ಕುಟ್ಟ ಪೊಲೀಸರು, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಮೈಸೂರಿನ ರಾಜೀವ್ ನಗರದ ನಿವಾಸಿಗಳಾದ ಸೈಯ್ಯದ್ ಸಕ್ಲೇನ್ (21), ಅಕ್ಬರ್ ಶರೀಪ್ ನನ್ನು (18) ಬಂಧಿಸಿ ಆರೋಪಿಗಳಿಂದ 20,500 ರೂಪಾಯಿ ವಶಪಡಿಸಿಕೊಂಡಿದ್ದಾರೆ. ಮೈಸೂರಿನ ಶಾಂತಿನಗರದ ಮತ್ತೋರ್ವ ಆರೋಪಿ ನುಹೀದ್ ಖಾನ್ ತಲೆ ಮರೆಸಿಕೊಂಡಿದ್ದು ಆರೋಪಿಗಾಗಿ ಹುಡುಕಾಟ ನಡೆಸಿದ್ದಾರೆ.
ಡಿಸೆಂಬರ್ 12 ರಂದು ಬೆಳಗ್ಗೆ 5 ಗಂಟೆಗೆ ವಿರಾಜಪೇಟೆ ತಾಲೂಕಿನ ಕುಟ್ಟಾ-ಮಾನಂದವಾಡಿ ರಸ್ತೆಯಲ್ಲಿರುವ ಅನುಗ್ರಹ ಪೆಟ್ರೋಲ್ ಬಂಕ್ನಲ್ಲಿ ದರೋಡೆ ನಡೆಸಿ ಬಂಕ್ನಲ್ಲಿದ್ದ 24200 ಹಣವನ್ನು ಕದ್ದು ಪರಾರಿಯಾಗಿದ್ದರು.
ಈ ಸಂಬಂಧ ಪೆಟ್ರೋಲ್ ಬಂಕ್ ಮಾಲೀಕ ಚಂದನ್ ಕಾಮತ್ ಕುಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ ಡಿ.ಪನ್ನೇಕರ್ ಮಾರ್ಗದರ್ಶನದಂತೆ ಕುಟ್ಟ ಸರ್ಕಲ್ ಇನ್ಸ್ಪೆಕ್ಟರ್ ಎಸ್.ಪರಶಿವಮೂರ್ತಿ ನೇತೃತ್ವದಲ್ಲಿ ಆರೋಪಿಗಳ ಪತ್ತೆಗೆ ತಂಡ ರಚಿಸಲಾಗಿತ್ತು.