ಅವರು ಖಡ್ಗ ಹಿಡಿದ್ರೆ ಬೇರೆಯವರೇನು ಬಳೆಗಳು ಹಾಕಿರುವುದಿಲ್ಲ : ಸೋಮಶೇಖರ ರೆಡ್ಡಿಗೆ ಅನ್ಸಾರಿ ತಿರುಗೇಟು
ಅವರು ಕೈಯಲ್ಲಿ ಖಡ್ಗ ಹಿಡಿದು ಮಾತನಾಡುತ್ತಾರೆ ಬೇರೆಯವರೇನು ಬಳೆಗಳು ಹಾಕಿರುವುದಿಲ್ಲ ಎಂದು ಬಳ್ಳಾರಿ ಶಾಸಕ ಸೋಮಶೇಖರ ರೆಡ್ಡಿಗೆ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ತಿರುಗೇಟು ಕೊಟ್ಟಿದ್ದಾರೆ.
ಕೊಪ್ಪಳದಲ್ಲಿ ಮಾದ್ಯಮದವರೊಂದಿಗೆ ಮಾತನಾಡಿದ ಅವರು, ಸೋಮಶೇಖರ ರೆಡ್ಡಿ ಹೇಳಿದ್ದು ಸರಿ ಅಲ್ಲ. ಕಾನೂನಿನ ಚೌಕಟ್ಟಿನಲ್ಲಿ ಮಾತನಾಡಬೇಕು.
ಅವರ ಮಾತುಗಳು ಅವರ ಜ್ಞಾನವನ್ನು ತೋರಿಸುತ್ತದೆ. ಅವರು ಕೈಯಲ್ಲಿ ಖಡ್ಗ ಹಿಡಿಯುವ ಮಾತನಾಡುತ್ತಾರೆ ಬೇರೆಯವರೇನು ಬಳೆ ಹಾಕಿರುವುದಿಲ್ಲ. ನೀವು ಖಡ್ಗ ಹಿಡಿದರೆ ಇನ್ನೊಬ್ಬರು ಇನ್ನೊಂದನ್ನು ಹಿಡಿದುಕೊಂಡರೆ ದೇಶವನ್ನು ಎಲ್ಲಿಗೆ ಒಯ್ಯ ಬಯಸುತ್ತೀರಿ ? ಕೋಮು ಗಲಭೆಗಳನ್ನು ಎಬ್ಬಿಸಿ ಪ್ರಚೋದನೆ ನೀಡುವಂತಹ ಕೆಲಸವನ್ನು ಶಾಸಕರು ಮಾಡಬಾರದು. ಹಿಟ್ಲರ್ನಂತೆ ಕೇಂದ್ರ ಸರಕಾರ ವರ್ತಿಸುತ್ತಿದೆ.
ಜನಪ್ರಿಯತೆಗಾಗಿ ಹಿಟ್ಲರ್ ಮಾಡುತ್ತಿದ್ದದ್ದನ್ನು ಇವರು ಮಾಡುತ್ತಿದ್ದಾರೆ. ನರೇಂದ್ರ ಮೋದಿಯವರ ಈ ಕೆಲಸ ಬಹಳ ದಿನ ನಡೆಯುವುದಿಲ್ಲ ಎಂದು ಅನ್ಸಾರಿ ಟೀಕೆ ಮಾಡಿದ್ದಾರೆ.