ಜನರ ಆಕ್ರೋಶಕ್ಕೆ ಗುರಿಯಾದ ಸರ್ಕಾರ: ಮಾಸ್ಕ್ ದಂಡದಲ್ಲಿ ಇಳಿಕೆ!
ಕೊರೊನಾ ನಿಯಂತ್ರಣ್ಕಕಾಗಿ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸುವುದು ಕಡ್ಡಾಯ ಎಂದಿರುವ ಸರ್ಕಾರ, ಉಲ್ಲಂಘಿಸಿದವರಿಗೆ ಭಾರಿ ಮೊತ್ತದ ದಂಡವನ್ನು ನಿಗದಿ ಮಾಡಿತ್ತು. ನಗರಪ್ರದೇಶಗಳಲ್ಲಿ 1,000ರೂ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ 500 ರೂ ದಂಡ ವಿಧಿಸಲಾಗಿತ್ತು. ಆದರೆ ಇದರ ವಿರುದ್ದ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ ನಂತರ ದಂಡದ ಪ್ರಮಾಣವನ್ನು ಸರ್ಕಾರ ಇಳಿಕೆ ಮಾಡಿದೆ.
ಮಾಸ್ಕ್ ಧರಿಸದಿದ್ದರೆ ದಂಡವಾಗಿ ನಗರ ಪ್ರದೇಶದಲ್ಲಿ 1,000 ದಿಂದ 250 ರೂ.ಗೆ ಮತ್ತು ಗ್ರಾಮಿಣ ಪ್ರದೇಶದಲ್ಲಿ 500 ರೂ. ನಿಂದ 100 ರೂ. ಗೆ ಇಳಿಸಲಾಗಿದೆ.
ಕೊರೋನಾ ನಿಯಂತ್ರಣದ ನಿಟ್ಟಿನಲ್ಲಿ ನಿಯಮಪಾಲನೆ ಕಡ್ಡಾಯ. ಸಾರ್ವಜನಿಕರ ಪ್ರತಿಕ್ರಿಯೆ, ತಜ್ಞರ ಅಭಿಪ್ರಾಯಗಳನ್ನು ಪರಿಗಣಿಸಿ, ಮಾಸ್ಕ್ ಧರಿಸದಿದ್ದಲ್ಲಿ ದಂಡದ ಪ್ರಮಾಣವನ್ನು ನಗರ ಪ್ರದೇಶದಲ್ಲಿ 250 ರೂ, ಗ್ರಾಮೀಣ ಪ್ರದೇಶದಲ್ಲಿ 100 ರೂ.ಗಳಿಗೆ ಪರಿಷ್ಕರಿಸಿ, ತಕ್ಷಣದಿಂದ ಜಾರಿಗೆ ಬರುವಂತೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ತಿಳಿಸಿದ್ದಾರೆ.
ಸರ್ಕಾರವು ತನ್ನ ಆದೇಶದಲ್ಲಿ, ಸಾರ್ವಜನಿಕರ ವಿರೋಧ ಮತ್ತು ತಜ್ಞರ ಅಭಿಪ್ರಾಯದ ಹಿನ್ನೆಲೆಯಲ್ಲಿ ದಂಡದ ಪ್ರಮಾಣದಲ್ಲಿ ಇಳಿಸಲು ತೀರ್ಮಾನಿಸಲಾಗಿದೆ ಎಂದಿದ್ದು, “ಇದನ್ನು ತಕ್ಷಣದಿಂದ ಜಾರಿಗೆ ಬರುವಂತೆ ಆದೇಶಿಸಲಾಗಿರುತ್ತದೆ” ಎಂದು ತಿಳಿಸಿದೆ.
ಆದರೂ ಸಾರ್ವಜನಿಕ ವಿರೋಧ ಮುಂದುವರೆದಿದೆ. ಪತ್ರಕರ್ತ ಸಂಗಮೇಶ ಮೆಣಸಿನಕಾಯಿಯವರು ಫೇಸ್ಬುಕ್ನಲ್ಲಿ ವಿರೋಧ ದಾಖಲಿಸಿರುವುದು ಹೀಗೆ..
“ಈ ಮಾಸ್ಕ್ ದಂಡದ ನಾಟಕ ಬಲು ಸೊಗಸಾಗಿದೆ. ಮೊದಲೇ 250 ರೂ. ಇಟ್ಟಿದ್ದರೆ ಜನ ಇನ್ನೂ ಕಡಿಮೆಗೆ ಚೌಕಾಸಿ ಮಾಡುತ್ತಿದ್ದರು. ಅದಕ್ಕೇ 1,000 ರೂ. ಇಟ್ಟು ಈಗ 250ಕ್ಕೆ ಇಳಿಸಿದ್ದಾರೆ ನಮ್ಮ ಮುಖ್ಯಮಂತ್ರಿ ಯಡಿಯೂರಪ್ಪ!. ಈಗ ಅವರಿಗೆ ಅಭಿನಂದನೆಗಳ ಸುರಿಮಳೆ! ಆದರೆ ನಿರೋಧ್ ಕಾಂಡೊಮ್ಗಳನ್ನು ಡಿ.ಸಿ.ಆಫೀಸಿನಲ್ಲೇ ಉಚಿತವಾಗಿ ಹಂಚಿದ ಸರಕಾರಕ್ಕೆ ಕನಿಷ್ಠ ಪಕ್ಷ ಬಡವರಿಗಾದರೂ ಮಾಸ್ಕ್ ಉಚಿತವಾಗಿ ಹಂಚಿ ಎಂದು ಕೇಳುವ ಧೈರ್ಯವನ್ನು ಯಾರೂ ತೋರಲಿಲ್ಲ! ಈಗ ನಾವೆಲ್ಲ ‘ನಮ್ಮದೇ ಇಂಪ್ಯಾಕ್ಟ್’ ಎಂದು ಬೀಗುತ್ತಿದ್ದೇವೆ!! ಈ ಪ್ರಹಸನದಲ್ಲಿ ಸರಕಾರಕ್ಕೆ ಉಚಿತ ಮಾಸ್ಕ್ ಹಂಚುವ ಹೊರೆ-ಹೊಣೆಯೂ ತಪ್ಪಿತು, ದಂಡದ ರೂಪದಲ್ಲಿ ಅಲ್ಪ ಮಟ್ಟಿಗೆ ಅದರ ಖಜಾನೆಯೂ, ಬಹುಮಟ್ಟಿಗೆ ಅಧಿಕಾರಿಗಳ ಜೇಬು ತುಂಬಲೂ ಅನುಕೂಲವಾಯಿತು! …..ಮದುವೆಯಲ್ಲಿ ಉಂಡವನೇ ಜಾಣ!”
ಇದನ್ನೂ ಓದಿ: ಮೋದಿಯವರೇ ಸುರಂಗದಲ್ಲಿ ಕೈ ಬೀಸುವುದನ್ನು ನಿಲ್ಲಿಸಿ; ದೇಶದ ಜನರ ಪ್ರಶ್ನೆಗಳಿಗೆ ಉತ್ತರಿಸಿ: ರಾಹುಲ್ಗಾಂಧಿ