ಪರಿಷತ್ ಚುನಾವಣೆ: ಮೋದಿ ಕ್ಷೇತ್ರದಲ್ಲಿ BJPಗೆ ಹೀನಾಯ ಸೋಲು!
ಪ್ರಧಾನಿ ನರೇಂದ್ರ ಮೋದಿಯವರು ಪ್ರತಿನಿಧಿಸುವ ಉತ್ತರ ಪ್ರದೇಶದ ವಾರಣಾಸಿಯ ಪದವೀಧರ ಕ್ಷೇತ್ರ ಮತ್ತ ಶಿಕ್ಷಕರ ಕ್ಷೇತ್ರಗಳೆರಡಲ್ಲಿಯೂ 10 ವರ್ಷಗಳ ನಂತರ ಬಿಜೆಪಿ ಹೀನಾಯವಾಗಿ ಸೋತಿದ್ದು ಭಾರೀ ಮುಖಭಂಗ ಅನುಭವಿಸಿದೆ. ಈ ಎರಡೂ ಕ್ಷೇತ್ರಗಳಿಗೆ ನಡೆದ ವಿಧಾನ ಪರಿಷತ್ ಚುನಾವಣೆಯಲ್ಲಿ ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷ ಗೆಲುವು ಸಾಧಿಸಿದೆ.
ಶನಿವಾರ ನಡೆದ ಮತ ಎಣಿಕೆಯಲ್ಲಿ ವಾರಣಾಸಿ ಕ್ಷೇತ್ರದಲ್ಲಿ ಸಮಾಜವಾದಿ ಪಕ್ಷದ ಅಶುತೋಷ್ ಸಿನ್ಹ ಪದವೀಧರ ಕ್ಷೇತ್ರದಲ್ಲಿ ಜಯಗಳಿಸಿದರೆ, ಲಾಲ್ ಬಿಹಾರಿ ಯಾದವ್ ಶಿಕ್ಷಕರ ಕ್ಷೇತ್ರದಿಂದ ಜಯಶೀಲರಾಗಿದ್ದಾರೆ.
ಡಿಸೆಂಬರ್ 1ರ ಮಂಗಳವಾರ ಉತ್ತರ ಪ್ರದೇಶದಲ್ಲಿ 5 ಪದವೀಧರ ಮತ್ತು 6 ಶಿಕ್ಷಕರ ಕ್ಷೇತ್ರದಲ್ಲಿ ಚುನಾವಣೆ ನಡೆದಿತ್ತು. ಶನಿವಾರ ಮತ ಎಣಿಕೆ ನಡೆದು 9 ಕ್ಷೇತ್ರಗಳ ಮತ ಎಣಿಕೆ ಪೂರ್ಣಗೊಂಡಿದ್ದು, ಇನ್ನು 2 ಕ್ಷೇತ್ರಗಳ ಮತ ಎಣಿಕೆ ಬಾಕಿ ಇದೆ. 9 ಕ್ಷೇತ್ರಗಳಲ್ಲಿ ಬಿಜೆಪಿ 4, ಸಮಾಜವಾದಿ ಪಕ್ಷ 3 ಮತ್ತು ಪಕ್ಷೇತರ ಅಭ್ಯರ್ಥಿಗಳು 2 ಕ್ಷೇತ್ರಗಳಲ್ಲಿ ಜಯಗಳಿಸಿದ್ದಾರೆ. ಬಿಜೆಪಿ ಪ್ರಾಬಲ್ಯದ ಪ್ರದೇಶಗಳಲ್ಲಿ ಸಮಾಜವಾದಿ ಪಕ್ಷ ಅಮೋಘ ಸಾಧನೆ ಮಾಡಿದೆ.
ವಾರಣಾಸಿ ಕ್ಷೇತ್ರವು ಬಿಜೆಪಿ ಪಕ್ಷದ ಪ್ರಬಲ ಕ್ಷೇತ್ರವಾಗಿದೆ. 2014 ಕ್ಕಿಂತ ಮುಂಚೆ ಬಿಜೆಪಿಯ ಹಿರಿಯ ಮುಖಂಡ ಮುರಳಿ ಮನೋಹರ್ ಜೋಶಿ ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದರು. 2014ರಲ್ಲಿ ನರೇಂದ್ರ ಮೋದಿ ಈ ಕ್ಷೇತ್ರದಿಂದ ಕಣಕ್ಕಿಳಿದು ಆಮ್ ಆದ್ಮಿ ಪಕ್ಷದ ಅರವಿಂದ್ ಕೇಜ್ರಿವಾಲ್ ವಿರುದ್ಧ ಜಯಗಳಿಸಿದ್ದರು. 2019 ರಲ್ಲಿ ಸಮಾಜವಾದಿ ಪಕ್ಷದ ಅಭ್ಯರ್ಥಿ ವಿರುದ್ಧ ಭಾರೀ ಅಂತರದಿಂದ ವಿಜಯಿಯಾಗಿದ್ದರು.
ಇತ್ತೀಚೆಗೆ ನಡೆದ ಮಹಾರಾಷ್ಟ್ರ ವಿಧಾನಪರಿಷತ್ ಚುನಾವಣೆಯಲ್ಲಿಯೂ ಸಹ ಬಿಜೆಪಿ ಪಕ್ಷ ಕಳಪೆ ಸಾಧನೆ ಮಾಡಿತ್ತು. 6 ಕ್ಷೇತ್ರಗಳಲ್ಲಿ ಕೇವಲ 1 ರಲ್ಲಿ ಮಾತ್ರ ಜಯಗಳಿಸಲು ಶಕ್ತವಾಗಿತ್ತು. ಎಲ್ಲಕ್ಕಿಂತ ಮುಖ್ಯವಾಗಿ ಬಿಜೆಪಿ, ಆರ್ಎಸ್ಎಸ್ನ ಹಿಡಿತವಿರುವ ನಾಗ್ಪುರದಲ್ಲಿ ಬಿಜೆಪಿ ಹೀನಾಯವಾಗಿ ಸೋತಿತ್ತು.
ಇದನ್ನೂ ಓದಿ: ಮಹಾರಾಷ್ಟ್ರ ಪರಿಷತ್ ಚುನಾವಣೆ: BJPಗೆ ಭಾರೀ ಮುಖಭಂಗ; ಗೆಲುವು ಸಾಧಿಸಿದ ಮಹಾ ವಿಕಾಸ್ ಅಘಾಡಿ!