ಸುಲಿಗೆ?: ವಿಜಯೇಂದ್ರ ವಿರುದ್ಧ FIR ದಾಖಲಿಸದ ಪೊಲೀಸರು; ಇನ್ಸ್ಪೆಕ್ಟರ್ಗೆ ನೋಟಿಸ್!
ಸುಲಿಗೆ ಮತ್ತು ವಸೂಲಿ ದಂದೆ ಆರೋಪದಲ್ಲಿ ಸಿಎಂ ಬಿಎಸ್ವೈ ಪುತ್ರ ವಿಜಯೇಂದ್ರ ವಿರುದ್ಧ ಜನಾಧಿಕಾರ ಸಂಘರ್ಷ ಪರಿಷತ್ (ಜಸಂಪ) ದಾಖಲಿಸಿದ್ದ ದೂರನ್ನು ಬೆಂಗಳೂರಿನ ಶೇಷಾದ್ರಿಪುರಂ ಪೋಲೀಸರು ವಜಾಗೊಳಿಸಿದ್ದು, ಠಾಣೆಯ ಇನ್ಸ್ಪೆಕ್ಟರ್ ಕೃಷ್ಣಮೂರ್ತಿ ಅವರಿಗೆ 65 ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯವು ನೋಟಿಸ್ ಜಾರಿಗೊಳಿಸಿದೆ ಎಂದು ವರದಿಯಾಗಿದೆ.
ಮುಖ್ಯಮಂತ್ರಿ ಯಡಿಯೂರಪ್ಪನವರ ಪುತ್ರ ಬಿ.ವೈ ವಿಜಯೇಂದ್ರ ಮತ್ತು ಮೊಮ್ಮಗ ಶಶಿಧರ ಮರಡಿಯವರ ವಿರುದ್ಧ ಸುಲಿಗೆ ಮತ್ತು ವಸೂಲಿ ದಂಧೆ ನಡೆಸಿದ್ದಾರೆ. ಆದರೆ, ಪೊಲೀಸರು ಅವರ ವಿರುದ್ದ ಎಫ್ಐಆರ್ ದಾಖಲಿಸಲು ನಿರಾಕರಿಸಿದ್ದಾರೆ ಎಂದು ಆರೋಪಿಸಿ ಜಸಂಪ ಪದಾಧಿಕಾರಿಗಳು ಕೋರ್ಟ್ ಮೆಟ್ಟಿಲೇರಿದ್ದರು.
ನ್ಯಾಯಾಲಯವು ಪ್ರಕರಣದ ವಿಚಾರಣೆಯನ್ನು ಎಪ್ರಿಲ್ 7 ಕ್ಕೆ ಮುಂದೂಡಿದೆ. ಆರೋಪಿಗಳ ವಿರುದ್ದ ಲಂಚ ಆರೋಪವಿದ್ದರೂ ಯಾವುದೆ ದೂರು ದಾಖಲಿಸದೆ ಮುಕ್ತಾಯಗೊಳಿಸಿದ್ದಕ್ಕೆ ಜನಾಧಿಕಾರ ಸಂಘರ್ಷ ಪರಿಷತ್ ಮಾರ್ಚ್ 3 ರಂದು ದೂರು ದಾಖಲಿಸಿತ್ತು.
ಶೇಷಾದ್ರಿಪುರಂ ಇನ್ಸ್ಪೆಕ್ಟರ್ ಕೃಷ್ಣಮೂರ್ತಿ ಅವರಿಗೆ ಜನಾಧಿಕಾರ ಸ0ಘರ್ಷ ಪರಿಷತ್ 2020 ರ ಸೆಪ್ಟ0ಬರ್ 25 ರಂದು ಸುಲಿಗೆ ಮತ್ತು ಕ್ರಿಮಿನಲ್ ಸ0ಚು ಆರೋಪದಡಿಯಲ್ಲಿ ದೂರು ಸಲ್ಲಿಸಿತ್ತು. ನಿಯಮದಂತೆ ಇಂತಹ ದೂರು ಸಲ್ಲಿಕೆಯಾದರೆ, ದೂರು ಸಲ್ಲಿಕೆಯಾದ 24 ಗ0ಟೆಯೊಳಗೆ ಆರೋಪಿತರ ವಿರುದ್ಧ ಎಫ್ಐಆರ್ ದಾಖಲಿಸಬೇಕಾಗುತ್ತದೆ. ಆದರೆ ಠಾಣೆಯ ಇನ್ಸ್ಪೆಕ್ಟರ್ ಅವರು ಈ ನಿಮಯವನ್ನು ಉಲ್ಲಂಘಿಸಿದ್ದರು.
ಇದನ್ನೂ ಓದಿ: ಬಿಎಸ್ವೈ ಪುತ್ರ ವಿಜಯೇಂದ್ರ ವಿರುದ್ಧ FIR ಇಲ್ಲ, ತನಿಖೆ ಇಲ್ಲ: ಪೊಲೀಸರ ವಿರುದ್ಧ ಕೋರ್ಟ್ಗೆ ಜಸಂಪ