ಸಚಿವ ಸ್ಥಾನ ಕೈತಪ್ಪುವ ಆತಂಕದಲ್ಲಿ ಬಾಂಬೆ ಫ್ರೆಂಡ್ಸ್ – ಸಿಎಂ ನಿವಾಸಕ್ಕೆ ಎಂಟಿಬಿ ದೌಡು..!
ಬಿಎಸ್ ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡುತ್ತಿದ್ದಂತೆ ಬಾಂಬೆ ಫ್ರೆಂಡ್ಸ್ ಗೆ ಸಚಿವ ಸ್ಥಾನ ಕೈತಪ್ಪುವ ಆತಂಕ ಶುರುವಾಗಿದೆ.
ಬಿಎಸ್ವೈ ರಾಜೀನಾಮೆ ಬೆನ್ನಲ್ಲೆ ಬಾಂಬೆ ಟೀಂಗೆ ಟೆನ್ಷನ್ ಶುರುವಾಗಿದೆ. ಸಚಿವ ಪದವಿ ಕಳೆದುಕೊಂಡಿರುವ ಎಂಟಿಬಿ ನಾಗರಾಜ್, ಸಿಎಂ ಮನೆ ಮುಂದೆ ಮಾತನಾಡಿದ್ದು, ವರಿಷ್ಟರು ಯಾರನ್ನ ಕೈಬಿಡ್ತಾರೆ, ಏನ್ ಮಾಡ್ತಾರೆ ಗೊತ್ತಿಲ್ಲ, ಎಲ್ಲರೂ ಮೋದಿ ಆಡಳಿತ ಒಪ್ಪಿಬಂದಿದ್ವಿ ಮಧ್ಯದಲ್ಲಿ ಹೀಗಾಗುತ್ತೆ ಅಮತ ನಮಗೆ ಗೊತ್ತಿರಲಿಲ್ಲ. 15 ಜನರೂ ಇಂದಿಗೂ ಒಟ್ಟಾಗಿದ್ದೇವೆ ಎಂದು ಸಿಎಂ ರಾಜೀನಾಮೆ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.
ಮೈತ್ರಿ ಪಕ್ಷ ತೊರೆದು ಬಿಜೆಪಿ ಅಧಿಕಾರಕ್ಕೆ ಬರಲು ಕಾರಣರಾಗಿದ್ದ ವಲಸೆ ಬಿಜೆಪಿಗರಿಗೆ ಬಿಎಸ್ವೈ ರಾಜೀನಾಮೆ ದೊಡ್ಡ ತಲೆನೋವಾಗಿದೆ. ಮುಂದಿನ ರಾಜ್ಯದ ಸಿಎಂ ಯಾರು ಆಗುತ್ತಾರೆ. ಹೊಸಸಚಿವ ಸಂಪುಟದಲ್ಲಿ ತಮ್ಮನ್ನು ಪರಿಗಣಿಸಲಾಗುತ್ತಾ? ಎನ್ನುವುದು ಮಾತ್ರ ಸ್ಪಷ್ಟವಾಗಿಲ್ಲ. ಹೀಗಾಗಿ ವಲಸೆ ಬಿಜೆಪಿಗರು ಸಿಎಂ ಭೇಟಿಗೆ ಮುಂದಾಗಿದ್ದಾರೆ.
ಆದರೆ ಮೂಲಗಳ ಪ್ರಕಾರ ವಲಸೆ ಬಿಜೆಪಿಗರಿಗೆ ಮತ್ತೆ ಸಚಿವ ಸ್ಥಾನ ಸಿಗುವ ಸಾಧ್ಯತೆ ಬಹುತೇಕ ಕಡಿಮೆ. ಇನ್ನೂ ಕೆಲ ಬಿಜೆಪಿ ಹಿರಿಯ ನಾಯಕರು ಹೇಳುವ ಪ್ರಕಾರ ವಲಸೆ ಬಿಜೆಪಿಗರಿಗೂ ಸಚಿವ ಸ್ಥಾನ ಮುಂದುವರೆಯುವ ಭರವಸೆ ನೀಡಿದ್ದಾರೆ. ಹೀಗಾಗಿ ಮುಂದಿನ ಹೊಸ ಸಿಎಂ ಬಾಂಬೆ ಫ್ರೆಂಡ್ಸ್ ಕೈ ಹಿಡಿಯುತ್ತಾರಾ? ಅಥವಾ ಕೈ ಬಿಡ್ತಾರಾ ? ಎನ್ನುವ ಕುತೂಹಲ ಮೂಡಿದೆ.
ಒಟ್ಟಿನಲ್ಲಿ ರಾಜ್ಯ ರಾಜಕೀಯದಲ್ಲಿ ಸಿಎಂ ಬದಲಾವಣೆ ವಿಚಾರ ಮಾತ್ರ ಬಿಸಿ ಬಿಸಿ ಚರ್ಚೆಯಾಗಿದ್ದು, ಯಾರು? ಯಾರಿಗೆ ಮಣೆ ಹಾಕ್ತಾರೆ ಅನ್ನೋದನ್ನ ಕಾದು ನೋಡಬೇಕಿದೆ.