FACT CHECK | 2022ರಲ್ಲಿ ಬೆಂಗಳೂರಿನಲ್ಲಿ ಸುರಿದ ಮಳೆಯ ಹಳೆಯ ವಿಡಿಯೋವನ್ನು ಇತ್ತೀಚಿನದ್ದು ಎಂದು ತಪ್ಪಾಗಿ ಹಂಚಿಕೆ
ಬಂಗಾಳ ಕೊಲ್ಲಿಯಲ್ಲಿ ಸಂಭವಿಸಿದ ವಾಯುಭಾರ ಕುಸಿತದ ಪರಿಣಾಮ ಸುರಿದ ಭಾರಿ ಮಳೆಗೆ ಬೆಂಗಳೂರಿನಲ್ಲಿ ಒಂದು ಕಡೆ ವಾಹನ ಸವಾರರು ಟ್ರಾಫಿಕ್ ಜಾಮ್ನಲ್ಲಿ ಸಿಲುಕಿ ಹೈರಾಣಾದರೆ, ಮತ್ತೊಂದು ಕಡೆ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿ ಜನ ತೊಂದರೆ ಅನುಭವಿಸಿದ ವರದಿಯಾಗಿದೆ.
ಬೆಂಗಳೂರಿನ ಮೊಟ್ಟಮೊದಲ ಬೀಚ್ ಉದ್ಘಾಟನೆಗೊಂಡಿದೆ…ಬೆಂಗಳೂರಿನ ಪ್ರಜೆಗಳು ಈ ರಮಣೀಯ ಬೀಚಿಗೆ ಬೇಟಿನೀಡಬೇಕಾಗಿ ಸವಿನಯ ವಿನಂತಿ… pic.twitter.com/ylmvPmLtXi
— ಹರಿ️Harry Modi ka Parivaar (@HarryDS46144044) October 17, 2024
ಮತ್ತೊಂದು ಕಡೆ ಮಹಾಮಳೆಗೆ ಬೆಂಗಳೂರಿನಲ್ಲಿ ಬೀಚ್ ನಿರ್ಮಾಣವಾಗಿದೆ ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ಅನ್ನು ಹಂಚಿಕೊಳ್ಳಲಾಗುತ್ತಿದೆ.
ಎಕ್ಸ್ ನಲ್ಲಿ ಕಂಡುಬಂದಂತೆ “ಬೆಂಗಳೂರಿನ ಮೊಟ್ಟಮೊದಲ ಬೀಚ್ ಉದ್ಘಾಟನೆಗೊಂಡಿದೆ…ಬೆಂಗಳೂರಿನ ಪ್ರಜೆಗಳು ಈ ರಮಣೀಯ ಬೀಚಿಗೆ ಬೇಟಿನೀಡಬೇಕಾಗಿ ಸವಿನಯ ವಿನಂತಿ”, “ಬನ್ನಿ ಪ್ರೆಂಡ್ಸ್ ಬೆಂಗಳೂರು ಬೀಚ್ ನೋಡ್ಕೊಂಡ್ ಬರೋಣ.” ಎಂಬ ವ್ಯಂಗ್ಯದೊಂದಿಗೆ ಪೋಸ್ಟ್ಅನ್ನು ಹಂಚಿಕೊಳ್ಳಲಾಗುತ್ತಿದೆ. ಇವುಗಳನ್ನು ಇಲ್ಲಿ, ಇಲ್ಲಿ ನೋಡಬಹುದು. ಹಾಗಿದ್ದರೆ ಈ ದೃಶ್ಯಾವಳಿಗಳು ಮೊನ್ನೆ ಸುರಿದ ಮಹಾಮಳೆಯಿಂದಾಗಿ ಉಂಟಾದ ಪರಿಸ್ಥಿತಿಯ ದೃಶ್ಯಗಳೇ? ಎಂದು ಪರಿಶೀಲಿಸೋಣ.
ಫ್ಯಾಕ್ಟ್ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜಸ್ ನಲ್ಲಿ ಸರ್ಚ್ ಮಾಡಿದಾಗ ಹಲವು ವರದಿಗಳು ಲಭ್ಯವಾಗಿವೆ.
ಸೆಪ್ಟೆಂಬರ್ 8, 2022ರಂದು ವಿಕಾಸ್ ಕುಮಾರ್ ಯೂಟ್ಯೂಬ್ ಚಾನೆಲ್ನಲ್ಲಿ ಹಂಚಿಕೊಂಡ ವಿಡಿಯೋದಲ್ಲಿ ಬೆಂಗಳೂರಿನಲ್ಲಿ ಮಳೆನೀರು|ಬೆಳ್ಳಂದೂರು ಎಂದು ಶೀರ್ಷಿಕೆ ನೀಡಲಾಗಿದೆ. ಈ ವಿಡಿಯೋಗೂ ವೈರಲ್ ವಿಡಿಯೋಗೂ ಸಾಮ್ಯತೆ ಇರುವುದನ್ನು ಕಾಣಬಹುದು.
ಸೆಪ್ಟೆಂಬರ್ 7, 2022ರಂದು ಟೈಮ್ಸ್ ನೌ ಮರಾಠಿ ಪ್ರಕಟಿಸಿದ ಫೋಟೋವೊಂದರಲ್ಲಿ ಶೀರ್ಷಿಕೆಯಾಗಿ, ಬೆಂಗಳೂರಿನಲ್ಲಿ ಮಳೆಯಿಂದಾಗಿ ಹಾಹಾಕಾರ (ಅನುವಾದಿಸಲಾಗಿದೆ) ಎಂದು ಬರೆಯಲಾಗಿದೆ.
ಈ ಕುರಿತು ಇನ್ನೂ ಹೆಚ್ಚಿನ ಶೋಧ ನಡೆಸಿದಾಗ, ಸೆಪ್ಟೆಂಬರ್ 5, 2022ರಂದು ಇಂಡಿಯಾ.ಕಾಮ್ ಪ್ರಕಟಿಸಿದ ಬೆಂಗಳೂರು ಮಳೆಯ ಕುರಿತ ಫೋಟೋ ವರದಿಯಲ್ಲಿ ವೈರಲ್ ವೀಡಿಯೋವನ್ನು ಹೋಲುವ ಫೊಟೋ ಪತ್ತೆಯಾಗಿದೆ.
ಸೆಪ್ಟೆಂಬರ್ 6, 2022ರಂದು ಸುವರ್ಣ ನ್ಯೂಸ್ ಯೂಟ್ಯೂಬ್ ವೀಡಿಯೋದಲ್ಲಿ “ಬೆಳ್ಳಂದೂರಿನಲ್ಲಿ ಉಕ್ಕಿ ಹರಿಯುತ್ತಿರುವ ಪ್ರವಾಹ; ಡ್ರೋಣ್ ಕಣ್ಣಲ್ಲಿ ಇಕೋ ಸ್ಪೇಸ್ ಮುಳುಗಡೆ ದೃಶ್ಯ !” ಶೀರ್ಷಿಕೆಯಲ್ಲಿ ಬೆಂಗಳೂರಿನ ಬೆಳ್ಳಂದೂರು ಭಾಗದಲ್ಲಿ ನೆರೆಯಿಂದಾಗಿ ಸಮಸ್ಯೆಯಾದ ಬಗ್ಗೆ ವರದಿಯಿದೆ. ಇಲ್ಲೂ ವೈರಲ್ ವಿಡಿಯೋ ಹೋಲುವ ದೃಶ್ಯಗಳು ಕಂಡುಬಂದಿದೆ ಎಂದು ನ್ಯೂಸ್ ಚೆಕ್ಕರ್ ವರದಿ ಮಾಡಿದೆ.
ಇದೇ ರೀತಿಯ ವರದಿಗಳು ಇಲ್ಲಿ ಇಲ್ಲಿ ಕಂಡುಬಂದಿವೆ.
ಒಟ್ಟಾರೆಯಾಗಿ ಹೇಳುವುದಾದರೆ, 2022ರ ಸೆಪ್ಟೆಂಬರ್ ತಿಂಗಳಿನಲ್ಲಿ ಬೆಂಗಳೂರಿನಲ್ಲಿ ಸುರಿದ ಭಾರೀ ಮಳೆಗೆ ಬೆಳ್ಳಂದೂರು ಭಾಗದಲ್ಲಿ ಸೃಷ್ಟಿಯಾದ ನೆರೆಯ ದೃಶ್ಯಗಳನ್ನು ಇತ್ತೀಚಿನದ್ದು ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ತಪ್ಪಾಗಿ ಹಂಚಿಕೊಂಡಿರುವುದು ಕಂಡುಬಂದಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ಭಜನೆ ಮಾಡುತ್ತಿದ್ದ ಮಹಿಳೆಯಿಂದ ಚಿನ್ನದ ಸರ ಕದ್ದು ಓಡಿ ಹೋದ ಘಟನೆ ನಡೆದಿದ್ದು ಎಲ್ಲಿ ಗೊತ್ತೇ?