ನಾವು ಯಾವುದೇ ಆಪರೇಷನ್ ಮಾಡಿಲ್ಲ, ನಮಗೂ ಅನರ್ಹ ಶಾಸಕರ ರಾಜೀನಾಮೆಗೂ ಯಾವುದೇ ಸಂಬಂಧವಿಲ್ಲ ಎಂದು ಸತ್ಯದ ಮೇಲೆ ಹೊಡೆದಂಗೆ ಮಾತನಾಡಿದ ಬಿಜೆಪಿಯ ಗುಟ್ಟು ರಟ್ಟಾಗಿದೆ. ಆ ಗುಟ್ಟನ್ನ ಹೊರಹಾಕಿದವರು ಬೇರೆ ಯಾರೂ ಅಲ್ಲ ಅರ್ನಹ ಶಾಸಕ ಹೆಚ್.ವಿಶ್ವನಾಥ್.

ಹೆಚ್ ವಿಶ್ವನಾಥ್ ರಾಜೀನಾಮೆ ನೀಡಿದ್ದು ಯಾಕೆ..? ಅವರನ್ನ ಮನವೊಲಿಸಿದ್ದು ಯಾರು..? ಯಾವಾಗ..? ಇಂತೆಲ್ಲಾ ವಿಚಾರಗಳನ್ನ ವಿಶ್ವನಾಥ್ ಹಳಸು ಸಿಡಿದಂತೆ ಹೇಳಿಕೊಮಡಿದ್ದಾರೆ.

ನನ್ನನ್ನು ಬಿಜೆಪಿ ಪಕ್ಷಕ್ಕೆ ಕರೆದುಕೊಂಡು ಬಂದವರು ವಿ.ಶ್ರೀನಿವಾಸ್ ಪ್ರಸಾದ್. ಪ್ರಸಾದ್ ಮತ್ತು ನನ್ನ ಅವಿನಾಭಾವ  ಸಂಬಂಧದಿಂದ ಯಡಿಯೂರಪ್ಪ ಮುಖ್ಯಮಂತ್ರಿಯಾಗಲು ಕಾರಣವಾಯ್ತು ಎಂದು ಅನರ್ಹ ಶಾಸಕ ಹೆಚ್.ವಿಶ್ವನಾಥ್ ತಿಳಿಸಿ ಬಿಜೆಪಿಯ ಗುಟ್ಟು ರಟ್ಟು ಮಾಡಿದ್ದಾರೆ.

ನನ್ನನ್ನು ಪಕ್ಷಕ್ಕೆ ಕರೆದುಕೊಂಡು ಬಂದವರು ವಿ.ಶ್ರೀನಿವಾಸ್ ಪ್ರಸಾದ್. ಪ್ರಸಾದ್ ಮತ್ತು ನನ್ನ ಅವಿನಾಭಾವ ಸಂಬಂಧದಿಂದ ಯಡಿಯೂರಪ್ಪ ಮುಖ್ಯಮಂತ್ರಿಯಾಗಲು ಕಾರಣವಾಯ್ತು. ರಾಜ್ಯದಲ್ಲಿ ಇಷ್ಟೇಲ್ಲ ಬೆಳವಣಿಗೆ ನಡೆಯಲು ಕಾರಣ ವಿ. ಶ್ರೀನಿವಾಸಪ್ರಸಾದ್. ಶ್ರೀ ನಿವಾಸಪ್ರಸಾದ್ ಮೂಲಕ ಬಿ.ಎಸ್. ಯಡಿಯೂರಪ್ಪ ನನಗೆ ಪಕ್ಷಕ್ಕೆ ಆಹ್ವಾನಿಸಿದರು. ಇಬ್ಬರು ಮೂವರು ಬರ್ತಾರೆ ಹೋಗ್ತಾರೆ.  ಜೆಡಿಎಸ್ ಬಿಟ್ಟು  ಬಿಜೆಪಿಯನ್ನು ಅಧಿಕಾರಕ್ಕೆ ತರಲು ನೀವೆ ಮುಂದೆ ನಿಲ್ಲಬೇಕು ಎಂದು ಶ್ರೀನಿವಾಸಪ್ರಸಾದ್ ಕೇಳಿದರು. ಅವತ್ತು ಅವರ ಮನೆಯಲ್ಲೆ ಎಲ್ಲವೂ ತೀರ್ಮಾನವಾಗಿ ಹೋಯಿತು. ಪ್ರಸಾದ್ ಅಲ್ಲದೆ ಬೇರೆ ಯಾರು ಕೇಳಿದ್ದರೂ ನಾನು ಇದಕ್ಕೆ ಒಪ್ಪುತ್ತಿರಲಿಲ್ಲ ಎಂದು ಹೆಚ್.ವಿಶ್ವನಾಥ್ ಅಪರೇಷನ್ ಕಮಲ ನಡೆದ ಬಗ್ಗೆ ಬಾಯ್ಬಿಟ್ಟರು.

ಇದೇ ವೇಳೆ ಜೆಡಿಎಸ್ ವಿರುದ್ದ ವಾಗ್ದಾಳಿ ನಡೆಸಿದ ಹೆಚ್.ವಿಶ್ವನಾಥ್, ಜೆಡಿಎಸ್ ಪಕ್ಷದ ಕಚೇರಿ ಪಕ್ಷದ ಹೆಸರಿನಲ್ಲಿ ಇಲ್ಲ ಕುಟುಂಬ ಹೆಸರಿನಲ್ಲಿದೆ. ಆದರೆ,  ಮೈಸೂರಿನಲ್ಲಿ ಬಿಜೆಪಿ ಮುಖಂಡರೊಬ್ಬರು ತಾವು ದುಡಿದ ಹಣದಲ್ಲಿ ಪಕ್ಷಕ್ಕೆ ಕಚೇರಿ ಕಟ್ಟಿ ಕೊಟ್ಟಿರೋದು ಗ್ರೇಟ್. ರಾಜ್ಯದಲ್ಲಾದ  ರಾಜಕೀಯ ಪಲ್ಲಟವನ್ನು ಯಾವ ಸಾಹಿತಿ, ರಾಜಕೀಯ ಚಿಂತಕ ಸರಿಯಾಗಿ ವಿಶ್ಲೇಷಿಸಲಿಲ್ಲ. ನಮ್ಮನ್ನು ಬಾಯಿಗೆ ಬಂದಂತೆ ಅನರ್ಹರು ,ಅಬ್ಬೆಪಾರಿಗಳು ಅಂತಾ ಕರೆದರು. ಇದು ನೋವು ತಂತು. ನಾವು ಪಕ್ಷಾಂತರಿಗಳಲ್ಲ. ಇದು ರಾಜಕೀಯ ಧೃವೀಕರಣ. ಜನ ಸ್ವೀಕಾರ ಮಾಡುತ್ತಾರೆ, ಮಾಡುವಂತ ಪರಿಸ್ಥಿತಿ ನಿರ್ಮಾಣ ಮಾಡುವಂತ ಕೆಲಸ ಜಿಲ್ಲಾ ಬಿಜೆಪಿಗಿದೆ. ಪಕ್ಷಕ್ಕಾಗಿ ತ್ಯಾಗಮಾಡಿದ ನಮಗಾಗಿ ಕೆಲಸಮಾಡಬೇಕು. ಅಧಿಕಾರಕ್ಕೊಸ್ಕರ ತ್ಯಾಗ ಮಾಡಲಿಲ್ಲ. ರಾಜ್ಯದಲ್ಲಿ ರಾಕ್ಷಸ ರಾಜಕಾರಣ,  ಜಾತಿ ರಾಜಕಾರಣ ಹೆಚ್ಚಾದಾಗ  ತ್ಯಾಗ ಮಾಡಲೆಬೇಕಾಯಿತು‌ ಎಂದು ತಿಳಿಸಿದರು.

ದೇವರಾಜ ಅರಸು ಹೇಗೆ ಜಾತಿ ಇಲ್ಲದ ಜಾತಿಯಿಂದ ಬಂದರೋ. ಅದೇ ರೀತಿ ಮೋದಿ ಜಾತಿ ಇಲ್ಲದ ಜಾತಿಯಿಂದ ಬಂದಿದ್ದಾರೆ. ದೇವರಾಜ ಅರಸು ಜೊತೆ ಮೋದಿ ಅವರನ್ನು ಸಮೀಕರಣ ಮಾಡಿ ನೋಡಬೇಕು ಎಂದು ಪ್ರಧಾನಿ ಮೋದಿಯನ್ನ ಹೆಚ್.ವಿಶ್ವನಾಥ್ ಗುಣಗಾನ ಮಾಡಿದರು.