ಕೊರೊನಾಗೆ ತತ್ತರಿಸಿದ ಹೋಟೆಲ್, ಹೋಂಸ್ಪೇ, ರೆಸಾರ್ಟ್ ಉದ್ಯಮ : ಕೋಟ್ಯಾಂತರ ರೂಪಾಯಿ ನಷ್ಟ
ಕೊರೊನಾ ಮಾರಿ ಪ್ರವಾಸೋದ್ಯಕ್ಕೂ ಕಾಲಿಟ್ಟಿದ್ದು ಕೋಟ್ಯಾಂತರ ರೂಪಾಯಿ ನಷ್ಟಗೊಳಿಸಿದೆ. ಮೈಸೂರಿನ ಪ್ರವಾಸೋದ್ಯಮದ ಮೇಲೆ ಕೋರೋನಾ ದಾಳಿ ಇಟ್ಟ ಪರಿಣಾಮ ಬರೋಬ್ಬರಿ 50 ಕೋಟಿಯಷ್ಟು ವಹಿವಾಟು ಸ್ಥಗಿತಗೊಂಡಿದೆ.
ಕಳೆದ ವರ್ಷದಲ್ಲಿ ನೆರೆ ಬಂದಾಗಲು ಹೋಟೆಲ್ ಉದ್ಯಮ ಕುಸಿದಿತ್ತು. ಇವತ್ತು ಕರೋನಾದ ಆತಂಕ ಹಾಗೂ ಭಯದಲ್ಲಿ ಕುಸಿದಿದೆ ಎಂದು ಮೈಸೂರಿನ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ನಾರಾಯಣ ಗೌಡ ಮಾಹಿತಿ ನೀಡಿದ್ದಾರೆ. ಕೊರೊನಾ ಹರಡುವ ಭೀತಿಯಿಂದ ಜನ ರಾಜ್ಯದ ಪ್ರವಾಸಿ ತಾಣಗಳತ್ತ ಮುಖ ಮಾಡುತ್ತಿಲ್ಲ. ಇನ್ನೂ ರೆಸಾರ್ಟ್ ಹಾಗೂ ಹೋಟಲ್ ಗಳು ಬಿಕೋ ಎನ್ನುತ್ತಿವೆ. ಇದರಿಂದಾಗಿ ಶೇಕಡ 80ರಷ್ಟು ಹೋಟೆಲ್ ಉದ್ಯಮ ಕುಸಿದಿದೆ. ಮುಂದಿನ ಎರಡು ತಿಂಗಳ ಬುಕಿಂಗ್ ಕೂಡ ಸ್ಥಗಿತವಾಗಿದೆ.
ಮೈಸೂರು ಪ್ರವಾಸೋದ್ಯಮದಿಂದ, ಹೋಟೆಲ್ ಸಂಘದಿಂದ ಕರೋನಾ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಭಿತ್ತಿ ಪತ್ರ ಹಾಗೂ ಪೋಸ್ಟರ್ಗಳ ಮೂಲಕ ಅರಿವು ಮೂಡಿಸುತ್ತಿದ್ದೇವೆ. ಆದರೆ ಕರೋನಾದ ಆತಂಕದಿಂದ ತಳಮಟ್ಟಕ್ಕೆ ಮೈಸೂರಿನಲ್ಲಿ ಪ್ರವಾಸೋದ್ಯಮ ಕುಸಿದಿದೆ.ಮುಂದಿನ ದಿನದಲ್ಲಿ ಇದು ಯಾವ ಹಂತಕ್ಕೆ ಹೋಗುತ್ತೋ ಎಂಬ ಆತಂಕ ಶುರುವಾಗಿದೆ ಎಂದು ಕರೋನಾ ಏಫೆಕ್ಟ್ ಬಗ್ಗೆ ಮೈಸೂರು ಜಿಲ್ಲಾ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ನಾರಾಯಣ ಗೌಡ ಕಳವಳ ವ್ಯಕ್ತಪಡಿಸಿದ್ದಾರೆ.
ಇನ್ನೂ ವಿಶ್ವದೆಲ್ಲೆಡೆ ತೀವ್ರ ದಾಳಿ ನಡೆಸುತ್ತಿರುವ ಕೊರೋನಾ ವೈರಸ ಸದ್ಯ ಕೊಡಗು ಪ್ರವಾಸೋದ್ಯಮದ ಮೇಲೂ ದುಷ್ಪರಿಣಾಮ ಬೀರಿದೆ. ಅದರಲ್ಲೂ ಪ್ರವಾಸೋದ್ಯಮವನ್ನೇ ನಂಬಿರುವ ಕೊಡಗಿನ ವ್ಯಾಪಾರೋದ್ಯಮಿಗಳು ತತ್ತರಿಸುವಂತೆ ಮಾಡಿದೆ. ಕರ್ನಾಟಕದಲ್ಲೂ ಕೊರೋನಾ ವೈರಸ್ ಹರಡಿರುವುದು ಸಾಬೀತಾಗುತ್ತಿದ್ದಂತೆ ಕೊಡಗಿನ ಪ್ರವಾಸೋದ್ಯಮ ಸಂಪೂರ್ಣ ನೆಲಕಚ್ಚಿದೆ. ಜಿಲ್ಲೆಯಲ್ಲಿ ಇರುವ ನಾಲ್ಕುಸಾವಿರಕ್ಕೂ ಹೆಚ್ಚು ಹೋಂಸ್ಟೇ ಮತ್ತು ರೆಸಾರ್ಟ್ಗಳು ತೀವ್ರ ಸಂಕಷ್ಟಕ್ಕೆ ಸಿಲುಕಿವೆ.
ವೈರಸ್ ರೋಗ ಹರಡುವುದಕ್ಕೂ ಮುನ್ನವೇ ಪ್ರವಾಸಿಗರು ರೆಸಾರ್ಟ್ ಮತ್ತು ಹೋಂಸ್ಟೇಗಳಲ್ಲಿ ಬುಕ್ಕಿಂಗ್ ಮಾಡಿಕೊಂಡಿದ್ದನ್ನು ಕ್ಯಾನ್ಸಲ್ ಮಾಡಿಕೊಂಡಿದ್ದಾರೆ. ಪರಿಣಾಮ ಇದನ್ನೇ ನಂಬಿಕೊಂಡಿದ್ದ ಹೋಂಸ್ಟೇ ಮತ್ತು ರೆಸಾರ್ಟ್ ಮಾಲೀಕರು ಸಿಬ್ಬಂದಿಗೂ ಸಂಬಳ ನೀಡುವುದು ಹೇಗೆ ಎಂಬ ಆತಂಕಕ್ಕೆ ಒಳಗಾಗಿದ್ದಾರೆ. ಮತ್ತೊಂದೆಡೆ ಜಿಲ್ಲಾಧಿಕಾರಿ ಕೂಡ ಹೋಂಸ್ಟೇ, ರೆಸಾರ್ಟ್ ಮತ್ತು ಪ್ರವಾಸಿ ತಾಣಗಳ ಮೇಲೆ ತೀವ್ರ ನಿಗಾ ಇಡುವಂತೆ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಹೊರ ದೇಶಗಳಿಂದ ಯಾರಾದ್ರೂ ಪ್ರವಾಸಿಗರು ಬಂದ್ರೆ ಅವರ ಬಗ್ಗೆಯೂ ಮಾಹಿತಿ ನೀಡುವಂತೆ ಸೂಚನೆ ನೀಡಿದ್ದಾರೆ. ಇದೆಲ್ಲವೂ ಪ್ರವಾಸೋದ್ಯಮದ ಮೇಲೆ ದುಷ್ಪರಿಣಾಮ ಬೀರಿದೆ.