ಸದ್ಯಕ್ಕಿಲ್ಲ ಕನಕಪುರಕ್ಕೆ ಮೆಡಿಕಲ್ ಕಾಲೇಜು -ಡಿಸಿಎಂ ಅಶ್ವಥ್ ನಾರಾಯಣ್
ಸದ್ಯಕ್ಕೆ ಕನಕಪುರಕ್ಕೆ ಮೆಡಿಕಲ್ ಕಾಲೇಜು ಇಲ್ಲ ಎಂದು ಡಿಸಿಎಂ ಅಶ್ವಥ್ ನಾರಾಯಣ್ ಹೇಳಿದ್ದಾರೆ.
ಇಂದು ಮೈಸೂರಿನಲ್ಲಿ ಮಾತನಾಡಿದ ಅವರು, ಸದ್ಯ ಪ್ರತಿ ಜಿಲ್ಲೆಗೊಂದು ಮೆಡಿಕಲ್ ಕಾಲೇಜು ಮಾಡುತ್ತಿದ್ದೇವೆ. ರಾಮನಗರದಲ್ಲಿ ಮೆಡಿಕಲ್ ಕಾಲೇಜು ಜೊತೆ ಹೆಲ್ತಿ ಸಿಟಿ ಮಾಡಲಾಗುತ್ತೆ. ರಾಮನಗರದಲ್ಲಿ ಮೆಡಿಕಲ್ ಕಾಲೇಜು ಮಾಡುತ್ತಿರುವುದರಿಂದ ತಾಲೂಕು ಕೇಂದ್ರಕ್ಕೆ ಇಲ್ಲ. ಮಂಜೂರಾಗಿರುವ ನಾಲ್ಕು ಮೆಡಿಕಲ್ ಕಾಲೇಜಿಗೆ ಹಣ ಬಿಡುಗಡೆ ಮಾಡಲಾಗುತ್ತಿದೆ ಎಂದಿದ್ದಾರೆ.
ಮಂಗಳೂರು ಬಾಂಬ್ ವಿಚಾರದಲ್ಲಿ ಹೆಚ್ಡಿಕೆ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ, ನಾಲಿಗೆ ಇದೆ ಅಂತ ಏನು ಬೇಕಾದ್ರು ಮಾತನಾಡಬಹುದು. ಆದ್ರೆ ಅವರು ಆಡುವ ಮಾತಿಗೆ ಮಾನ್ಯತೆ ಇರಬೇಕು ಎಂದು ಕಿಡಿ ಕಾರಿದ್ದಾರೆ.
ಜೊತೆಗೆ ಹೆಚ್ಡಿಕೆಗೆ ಡಿಸಿಎಂ ಅಶ್ವಥ್ ನಾರಾಯಣ್ ಟಾಂಗ್ ಕೊಟ್ಟಿದ್ದಾರೆ. ಜವಬ್ದಾರಿಯುತ ಸ್ಥಾನದಲ್ಲಿರುವವರು ಏನು ಬೇಕಾದ್ರು ಮಾತನಾಡಬಹುದು. ಆದ್ರೆ ಅವರ ಮಾತುಗಳಲ್ಲಿ ಅರ್ಥ ಇರಬೇಕು. ಬಾಂಬ್ ಇಟ್ಟಿರುವವ ಹಿಂದೆ ಹುಸಿ ಬಾಂಬ್ ಕರೆ ಮಾಡಿದ್ದ. ಈ ಬಾರಿ ತಾನೆ ಬಾಂಬ್ ಇಟ್ಟಿದ್ದೀನಿ ಅಂತ ಒಪ್ಪಿಕೊಂಡಿದ್ದಾನೆ. ಆ ಬಗ್ಗೆ ತನಿಖೆ ನಡೆಯುತ್ತಿದ್ದೆ. ಮಾಹಿತಿ ತಿಳಿದುಕೊಂಡು ಮಾತನಾಡಲಿ. ಇನ್ನಮೇಲಾದ್ರು ಜವಬ್ದಾರಿಯಿಂದ ಹೇಳಿಕೆ ಕೊಡಲಿ. ಸಮಾಜಘಾತುಕ ಸಂಘಟನೆಗಳನ್ನ ಬ್ಯಾನ್ ಮಾಡ್ತಿವಿ. ಈಗಾಗಲೇ ನಾವು ಕೇಂದ್ರಕ್ಕೆ ಶಿಫಾರಸು ಕಳುಹಿಸಿದ್ದೇವೆ. ಇಂತಹ ಸಂಘಟನೆಗಳನ್ನ ಬೆಳೆಯಲು ಬಿಟ್ಟರೆ ತೊಂದರೆಯಾಗುತ್ತೆ. ಇಂತಹ ಸಂಘಟನೆಗಳನ್ನ ಬ್ಯಾನ್ ಮಾಡ್ತಿವಿ ಎಂದು ಬುದ್ಧಿ ಮಾತು ಹೇಳಿದ್ದಾರೆ.