ಹಿಂದೂತ್ವವಾದಿ ಕಾರ್ಯಕರ್ತನನ್ನು ಬಂಧಿಸಿದ ಪೊಲೀಸರಿಗೆ ಕಡ್ಡಾಯ ರಜೆ ಶಿಕ್ಷೆ!
ಸಾಮಾಜಿಕ ಜಾಲತಾಣಗಳಲ್ಲಿ ಕೋಮುದ್ವೇಷಪೂರಿತ ಪೋಸ್ಟ್ ಹಾಕಿದ ಹಿಂದುತ್ವ ಕಾರ್ಯಕರ್ತನನ್ನು ಬಂಧಿಸುವ ಮೂಲಕ ಸಿ.ಟಿ ರವಿ ಸೇರಿದಂತೆ ಹಲವು ಬಿಜೆಪಿ ನಾಯಕರ ಕೆಂಗಣ್ಣಿಗೆ ಗುರಿಯಾಗಿದ್ದ ಪೊಲೀಸ್ ಅಧಿಕಾರಿಯನ್ನು ರಜೆಯ ಮೇಲೆ ಮನೆಗೆ ಕಳಿಸಿರುವ ಘಟನೆ ಹಾಸನ ಜಿಲ್ಲೆಯಲ್ಲಿ ಜರುಗಿದೆ.
ಸಮಾಜದ ಸಾಮರಸ್ಯ ಹಾಳು ಮಾಡುವ ಸಂದೇಶಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ ಆರೋಪದ ಮೇಲೆ ಏಪ್ರಿಲ್ 10ರಂದು ಹಾಸನ ಜಿಲ್ಲೆಯ ಬಿಕ್ಕೋಡಿನ ತೇಜಕುಮಾರ್ ಶೆಟ್ಟಿ ಎಂಬುವವರನ್ನು ಬೇಲೂರು ಸಿಪಿಐ ಸಿದ್ಧರಾಮೇಶ್ವರ್, ಅರೇಹಳ್ಳಿ ಪಿಎಸ್ಐ ಬಾಲುರವರು ಬಂಧಿಸಿದ್ದರು.
ಘಟನೆ ನಡೆದ ಎರಡು ದಿನಗಳ ನಂತರ ಪ್ರವಾಸೋಧ್ಯಮ ಸಚಿವ ಸಿ.ಟಿ ರವಿರವರು ಆರೋಪಿಯ ರಕ್ಷಣೆಗೆ ಮುಂದಾಗಿದ್ದರು. ಅವರು ಟ್ವಿಟ್ಟರ್ನಲ್ಲಿ “ಕೊರೊನ ಸಂಬಂಧ ತಬ್ಲೀಘಿಜಮಾತ್ ಬಗ್ಗೆ ಪೋಸ್ಟ್ ಶೇರ್ ಮಾಡಿದರೆ ತಪ್ಪೇನು? ಇದಕ್ಕಾಗಿ ಬೇಲೂರಿನ ನಮ್ಮ ಕಾರ್ಯಕರ್ತ ತೇಜ್ ಕುಮಾರ್ ಶೆಟ್ಟಿ ಅವರ ಮೇಲೆ ಕೇಸ್ ಹಾಕಿದ್ದಾರೆ. ಈ ವಿಷಯದಲ್ಲಿ ಅತಿರೇಕದ ವರ್ತನೆ ತೋರಿಸಿದ ಅರೇಹಳ್ಳಿ ಠಾಣೆಯ ಪೊಲೀಸ್ ಅಧಿಕಾರಿ ವಿರುದ್ಧ ಕ್ರಮಕೈಗೊಳ್ಳಬೇಕೆಂದು ನನ್ನ ಸಹೋದ್ಯೋಗಿಗಳಾದ ಗೃಹಸಚಿವ ಬಸವರಾಜ ಬೊಮ್ಮಾಯಿ ಅವರಲ್ಲಿ ವಿನಂತಿಸಿದ್ದೇನೆ”. ಎಂದು ಬರೆದುಕೊಂಡಿದ್ದರು.
https://twitter.com/CTRavi_BJP/status/1249240987118874624
ಸಿ.ಟಿ ರವಿರವರು ಟ್ವೀಟ್ ಮಾಡಿದ ಕೆಲವೇ ಗಂಟೆಗಳಲ್ಲಿ ಹಾಸನದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಆರ್ ಶ್ರೀನಿವಾಸಗೌಡರವರು ಆಕ್ಷೇಪಾರ್ಹ ಪೋಸ್ಟ್ ಹಾಕಿದ ಹಿಂದುತ್ವ ಕಾರ್ಯಕರ್ತರನ್ನು ಬಂಧಿಸಿದ ಬೇಲೂರು ಸಿಪಿಐ ಸಿದ್ಧರಾಮೇಶ್ವರ್, ಅರೇಹಳ್ಳಿ ಪಿಎಸ್ಐ ಬಾಲು ಎಂಬ ಇಬ್ಬರು ಪೊಲೀಸ್ ಅಧಿಕಾರಿಗಳ ವಿರುದ್ಧ ತನಿಖೆಗೆ ಆದೇಶಿಸಿದ್ದರು. ಈಗ ತನಿಖೆ ಬಾಕಿ ಇರುವಾಗಲೇ ಅರೇಹಳ್ಳಿ ಪಿಎಸ್ಐ ಬಾಲುರವರನ್ನು ಕಡ್ಡಾಯ ರಜೆಯ ಮೇಲೆ ಮನೆಗೆ ಕಳುಹಿಸಲಾಗಿದೆ.
ಕಾನೂನು ಸಚಿವ ಮತ್ತು ಹಾಸನ ಉಸ್ತುವಾರಿ ಸಚಿವ ಜೆ.ಸಿ ಮಾಧುಸ್ವಾಮಿ ಮಾತನಾಡಿ “ಪರಿಸ್ಥಿತಿ ಸುಧಾರಿಸುವವರೆಗೂ ಪೊಲೀಸ್ ಅಧಿಕಾರಿ ಮನೆಯಲ್ಲಿಯೇ ಇರುವುದಾಗಿ ತಿಳಿಸಿದ್ದಾರೆ. ಹಿಂದುತ್ವ ಕಾರ್ಯಕರ್ತ ಬಿಕ್ಕೋಡಿನ ತೇಜಕುಮಾರ್ ಶೆಟ್ಟಿಯವರ ಬಗ್ಗೆ ಸಂಪೂರ್ಣ ಮಾಹಿತಿಯಿಲ್ಲದೇ ಬಂಧಿಸಿದ್ದಾರೆ. ಈ ಕುರಿತು ಸಚಿವ ಸಿ.ಟಿ ರವಿರವರೊಂದಿಗೆ ಮಾತನಾಡುತ್ತೇನೆ” ಎಂದಿದ್ದಾರೆ.
ಈ ಘಟನೆ ಕುರಿತು ಸಾಮಾಜಿಕ ಜಾಲತಾಣದಲ್ಲಿ ಬಿಜೆಪಿ ನಾಯಕರ ಪ್ರತಿಕ್ರಿಯೆಗೆ ಟೀಕೆ ವ್ಯಕ್ತವಾಗಿದೆ. ಪೊಲೀಸರಿಗೆ ಸೂಚನೆ: ನೀವು ಬಿಜೆಪಿ ಬೆಂಬಲಿಗರನ್ನು ಬಂಧಿಸುವಾಗ ಎಚ್ಚರವಹಿಸಿ. ನಿಮ್ಮ ಮೇಲೆಯೇ ತನಿಖೆ ನಡೆಯಬಹುದು, ನಿಮ್ಮನ್ನು ರಜೆಯ ಮೇಲೆ ತೆರಳಲು ಸೂಚಿಸಲೂಬಹುದು.
(ರಾಜ್ಯದಲ್ಲಿ ಒಂದೇ ಕಾನೂನು ಇದ್ದು ಅದು ಎಲ್ಲರಿಗೂ ಸಮಾನವಾಗಿ ಅನ್ವಯಿಸುತ್ತದೆ ಎಂದು ತಿಳಿದುಕೊಂಡಿದ್ದರೆ ಆ ನಿಮ್ಮ ತಪ್ಪು ಅಭಿಪ್ರಾಯ ಬದಲಿಸಿಕೊಳ್ಳಿ) ಎಂದು ಚಿಂತಕ ಶ್ರೀನಿವಾಸ ಕಾರ್ಕಳರವರು ವ್ಯಂಗ್ಯವಾಡಿದ್ದಾರೆ.