ಪೌರತ್ವ ವಿವಾದ – ನಾನು ದಾಖಲೆ ಕೊಡಲ್ಲ – ಜೈಲಿಗೆ ಹಾಕಿದರೆ ಹೋಗಲು ರೆಡಿ – ಸಸಿಕಾಂತ್ ಸೆಂಥಿಲ್
ಪೌರತ್ವ ಮಸೂದೆ ಕಾನೂನು ಬಾಹಿರವಾಗಿದ್ದು, ನಾನು ದಾಖಲೆ ಕೊಡೋದಿಲ್ಲ. ಬೇಕಿದ್ದರೆ ಅವರು ನನ್ನನ್ನು ಜೈಲಿಗೆ ಹಾಕಲಿ, ನಾನು ಹೋಗಲು ರೆಡೀ ಎಂದು ಮಾಜಿ ಐಎಎಸ್ ಅಧಿಕಾರಿ ಸಸಿಕಾಂತ್ ಸೆಂಥಿಲ್ ಸವಾಲು ಹಾಕಿದ್ದಾರೆ..
ದೇಶದಲ್ಲಿ ಸ್ವಾತಂತ್ರ್ಯ ನಂತ್ರ ಸಾಕಷ್ಟು ವಿಷಯಗಳನ್ನು ನೋಡಿದ್ದೇವೆ. ಆದರೆ ಈಗ ಪ್ರತಿಯೊಬ್ಬ ನಾಗರಿಕನಿಗೂ ಪೌರತ್ವ ಸಾಬೀತುಪಡಿಸುವ ಸಮಸ್ಯೆ ಎದುರಾಗಿದೆ ಎಂದು ಮಾಜಿ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಅಭಿಪ್ರಾಯಪಟ್ಟಿದ್ದಾರೆ. ಪೌರತ್ವ ಮಸೂದೆ ಸಂವಿಧಾನ ವಿರೋಧಿಯಾಗಿದ್ದು, ನಾನು ದಾಖಲೆ ಕೊಡೋದಿಲ್ಲ. ಅವರು ಏನು ಬೇಕಾದರೂ ಮಾಡಿಕೊಳ್ಳಲಿ ಎಂದು ಸವಾಲು ಹಾಕಿದ್ದಾರೆ.
ಕಲಬುರ್ಗಿಗೆ ಆಗಮಿಸಿದ ಸಂದರ್ಭದಲ್ಲಿ ಮಾತನಾಡಿದ ಅವರು, ಸಿಎಎ ತಿದ್ದುಪಡಿ ಮಸೂದೆ ಸಂವಿಧಾನಕ್ಕೆ ವಿರೋಧವಾಗಿದೆ. ಎನ್ ಪಿ ಆರ್, ಎನ್ ಆರ್ ಸಿ ಗೂ ಸಂಬಂಧ ಇಲ್ಲ ಅಂತಾ ಹೇಳ್ತಿದ್ದಾರೆ, ಅದೆಲ್ಲ ಸುಳ್ಳು. ಪ್ರಶ್ನೆಗೆ ಉತ್ತರ ಕೊಡುವ ಅಭ್ಯಾಸ ಅವರಿಗಿಲ್ಲ ಎಂದು ಹೆಸರು ಪ್ರಸ್ತಾಪಿಸದೇ ಪ್ರಧಾನಿ ಮೋದಿ, ಅಮಿತ್ ಶಾ ಗೆ ಸೆಂಥಿಲ್ ಕುಟುಕಿದರು. ಎನ್ ಪಿ ಆರ್ ಮಾಡೋದು ನನ್ನ ಪ್ರಕಾರ ಅವಶ್ಯಕತೆ ಇಲ್ಲ. ಪೌರತ್ವ ಸಾಬೀತು ಮಾಡಿ ಅಂದ್ರೆ ಏನು ಅರ್ಥ ಎಂದು ಪ್ರಶ್ನಿಸಿದ್ದಾರೆ.
ಸಿಎಎ, ಎನ್ ಆರ್ ಸಿ, ಎನ್ ಪಿ ಆರ್ ಇದು ಮುಸ್ಲಿಂರ ಸಮಸ್ಯೆ ಅಷ್ಟೇ ಅಲ್ಲ, ಈ ಕಾನೂನುಗಳನ್ನು ಯಾವುದೇ ಕಾರಣಕ್ಕೂ ಯಾವುದೇ ಜಾತಿ ಜನಾಂಗ ಸ್ವಾಗತ ಮಾಡಬಾರದು. ಸಂವಿಧಾನಕ್ಕೆ ವಿರೋಧವಾಗಿ ಸರ್ಕಾರ ಕಾನೂನು ಮಾಡುತ್ತಿದೆ. ಜನರು ಹೋರಾಟ ಮಾಡ್ತಿದ್ದಾರೆ. ತಕ್ಷಣ ಸಿಎಎ ಹಿಂಪಡೆಯಬೇಕೆಂದು ಆಗ್ರಹಿಸಿದರು. ನಾನು ದಾಖಲೆ ಕೊಡಲ್ಲ ಅಂತಾ ಪತ್ರ ಬರೆದಿದ್ದೇನೆ. ಎಷ್ಟು ಜೈಲು ಮಾಡಿದ್ರು ಹೋಗಲು ನಾವು ರೆಡಿ ಇದ್ದೇವೆ. ದೇಶದ ಪ್ರತಿಯೊಬ್ಬ ನಾಗರೀಕನೂ ಈ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಬೇಕು ಎಂದು ಸೆಂಥಿಲ್ ಕರೆ ನೀಡಿದರು.